ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವುದು ಕಷ್ಟ ಸಾಧ್ಯ ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. 

ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಪ್ರಧಾನಿ ಮೋದಿಯಾಗಿ ಎಲ್ಲಾ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ, ಪಕ್ಷ ಏಕಾಂಗಿಯಾಗಿ ಬಹುಮತ ಪಡೆಯುವುದು ಕಷ್ಟಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಮಾಧವ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಲೋಕಸಭಾ ಚುನಾವಣೆಯ ಕಡೆಯ 2 ಹಂತದ ಮತದಾನ ಮಾತ್ರವೇ ಬಾಕಿ ಉಳಿದಿರುವಾಗಲೇ, ಬಿಜೆಪಿಯ ಹಿರಿಯ ನಾಯಕರೊಬ್ಬರು ಮೈತ್ರಿ ಸರ್ಕಾರ ರಚನೆಯ ಸಾಧ್ಯತೆಯ ಕುರಿತು ಮೊದಲ ಬಾರಿಗೆ ಪ್ರಸ್ತಾಪ ಮಾಡಿರುವುದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ.

ಬ್ಲೂಮ್‌ಬರ್ಗ್‌ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ರಾಮ್‌ಮಾಧವ್‌, ‘2014ರಲ್ಲಿ ಮಾಡಿದ ಸಾಧನೆಯನ್ನು ಈ ಬಾರಿ ನಿರೀಕ್ಷಿಸಲಾಗುತ್ತಿಲ್ಲ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಮಗೆ ಅನಿರೀಕ್ಷಿತ ಹಿನ್ನಡೆಯಾಗಿದೆ. ಆದರೆ ಈ ಹಿನ್ನಡೆಯನ್ನು ನಾವು ಈಶಾನ್ಯರಾಜ್ಯಗಳು ಸೇರಿದಂತೆ ಇತರೆಡೆ ತುಂಬಿಕೊಳ್ಳುವ ವಿಶ್ವಾಸವಿದೆ. ಆದರೂ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯುವುದರಿಂದ ಸ್ವಲ್ಪದರಲ್ಲೇ ಹಿಂದೆ ಬೀಳಬಹುದು. ಒಂದು ವೇಳೆ ನಾವು ಏಕಾಂಗಿಯಾಗಿ 271 ಪಡೆದರೆ ನಾವು ತೃಪ್ತಿಪಡುತ್ತೇವೆ. ಆದರೆ ಎನ್‌ಡಿಎ ಮೈತ್ರಿಕೂಟ ಇರುವ ಕಾರಣ ಬಹುಮತಕ್ಕೆ ಕೊರತೆಯಾಗದು. ನಾವು ಎನ್‌ಡಿಎ ಮೂಲಕ ಸರ್ಕಾರ ರಚಿಸುತ್ತೇವೆ’ ಎಂದು ಹೇಳಿದ್ದಾರೆ.