ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ಅಭ್ಯರ್ಥಿಗಳ ಆಯ್ಕೆಯ ಕುತೂಹಲ ಗರಿಗೆದರಿದೆ. ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಪೈಪೋಟಿ ಇದ್ದರೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ.

ಬೆಂಗಳೂರು : ಒಂದು ಕಡೆ ವಿಪರೀತ ಆಕಾಂಕ್ಷಿಗಳ ಒತ್ತಡದಿಂದ ಬಂಡಾಯದ ಭೀತಿ ಕಾಂಗ್ರೆಸ್‌ಗೆ ಕಾಡುತ್ತಿದ್ದರೆ ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕೊರತೆಯೂ ಕಾಡಿದೆ. 

Add Asianetnews Kannada as a Preferred SourcegooglePreferred

ಬೆಂಗಳೂರು ದಕ್ಷಿಣ: ಮಾಜಿ ಶಾಸಕ ಪ್ರಿಯಕೃಷ್ಣ ಅವರನ್ನು ಈ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಬಯಸಿತ್ತು. ಆದರೆ, ಅವರು ರಾಮಲಿಂಗಾರೆಡ್ಡಿ ಅವರು ಬೆಂಬಲ ನೀಡಿದರೆ ಮಾತ್ರ ಸ್ಪರ್ಧಿಸುವುದಾಗಿ ಹೇಳಿದ್ದರು. ಕಡೆಗೆ ರಾಮಲಿಂಗಾರೆಡ್ಡಿ ಬೆಂಬಲ ನೀಡುವ ಬಗ್ಗೆ
ಅನುಮಾನಗೊಂಡು ಸ್ಪರ್ಧಿಸಲು ನಿರಾಕರಿಸಿದರು. ಅನಂತರ ನಾಯಕತ್ವ ರಾಮಲಿಂಗಾರೆಡ್ಡಿ ಅವರನ್ನು ಕಣಕ್ಕೆ ಇಳಿಯಲು ಕೋರಿತು. ರೆಡ್ಡಿ ಕೂಡ ನಿರಾಕರಿಸಿದರು. ಇದರಿಂದ ಅಭ್ಯರ್ಥಿಯೇ ಇಲ್ಲದೆ ಗೊಂದಲದಲ್ಲಿದ್ದ ನಾಯಕರು ಅಂತಿಮವಾಗಿ ಗುರಪ್ಪ ನಾಯ್ಡು ಅವರನ್ನು ಅಭ್ಯರ್ಥಿಯಾಗುವಂತೆ ಸೂಚಿಸಿದೆಎನ್ನಲಾಗಿದೆ. ಸದ್ಯಕ್ಕೆ ಗುರಪ್ಪ ನಾಯ್ಡು ಇದಕ್ಕೆ ಒಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.

ದಾವಣಗೆರೆ: ಈ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಲಾಗಿದೆ. ಶಾಮನೂರು ಕುಟುಂಬದವರೇ ಸ್ಪರ್ಧಿಸಲಿ ಎಂಬ ಬಯಕೆ ಕಾಂಗ್ರೆಸ್ ನಾಯಕತ್ವಕ್ಕೆ ಇದೆ. ಶಾಮನೂರು ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅಥವಾ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಅಭ್ಯರ್ಥಿಯಾಗಬಹುದು ಎಂಬ ನಿರೀಕ್ಷೆ ನಾಯಕತ್ವದ್ದು. ಆದರೆ, ಈ ಕ್ಷಣದವರೆಗೂ ಶಾಮನೂರು ಕುಟುಂಬ ಸ್ಪರ್ಧಿಸುವುದೋ ಅಥವಾ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆಯನ್ನು ನೀಡಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ಶಾಮನೂರು ಕುಟುಂಬ ಏನು ಹೇಳುತ್ತದೆ ಎಂಬುದನ್ನು ಇನ್ನೂ ಕಾದು ನೋಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.