ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ನಾಯಕರ ಪ್ರಚಾರವೂ ಕೂಡ ಜೋರಾಗಿಯೇ ನಡೆಯುತ್ತಿದೆ. ಈ ಸಂದರ್ಭದಲ್ಲಿ ಒಂದಾಗಿ ಪ್ರಚಾರ ಮಾಡಲು ಸಿದ್ದರಾಮಯ್ಯ ಬಳಿ ಎಚ್ ಡಿ ದೇವೇಗೌಡ ಬಳಿ ಕೇಳಿಕೊಂಡಿದ್ದಾರೆ. 

ಬೆಂಗಳೂರು : ‘ತಪ್ಪು ತಿಳಿಯದಿದ್ದರೆ ಸಿದ್ದರಾಮಯ್ಯ ಅವರಿಗೆ ಒಂದು ಕೇಳ್ತೀನಿ. ನೀವು ಹೆಲಿಕಾಪ್ಟರ್‌ನಲ್ಲಿ ಪ್ರಚಾರಕ್ಕೆ ಹೋದಾಗ ನಾನೂ ನಿಮ್ಮ ಜತೆ ಬರುತ್ತೇನೆ. ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಪ್ರಚಾರ ಮಾಡೋಣ.’

- ಹೀಗೆ ಸಿದ್ದರಾಮಯ್ಯ ಅವರ ಬಳಿ ವಿನಯಪೂರ್ವಕವಾಗಿ ಮನವಿ ಮಾಡಿದ್ದು ಜೆಡಿಎಸ್‌ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆದ ಎಚ್‌.ಡಿ. ದೇವೇಗೌಡ!

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗಳ ಪರವಾಗಿ ಜಂಟಿಯಾಗಿ ಪ್ರಚಾರಕ್ಕೆ ಹೋಗೋಣ. ನನ್ನ ಮಗ ಮುಖ್ಯಮಂತ್ರಿಯಾದರೂ ಹೆಲಿಕಾಪ್ಟರ್‌ ಪಡೆಯಲು ಆಗಿಲ್ಲ. ಹೀಗಾಗಿ ಸಿದ್ದರಾಮಯ್ಯ ತಪ್ಪು ತಿಳಿಯದಿದ್ದರೆ ಒಂದು ಕೇಳ್ತೀನಿ. ನೀವು ಹೆಲಿಕಾಪ್ಟರ್‌ನಲ್ಲಿ ಪ್ರಚಾರಕ್ಕೆ ಹೋದಾಗ ನಾನೂ ನಿಮ್ಮ ಜತೆ ಬರುತ್ತೇನೆ ಎಂದು ಹೇಳಿದ್ದಾರೆ.

ಈ ಮೂಲಕ ಜಂಟಿ ಪ್ರಚಾರಕ್ಕೆ ಖುದ್ದು ಆಹ್ವಾನ ನೀಡಿದ ದೇವೇಗೌಡ, ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಪ್ರಚಾರ ಮಾಡೋಣ ಎಂದು ಹೇಳಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡರ ಪರ ಪ್ರಚಾರ ಮಾಡಲು ಸಿದ್ದರಾಮಯ್ಯ ಅವರ ಜತೆ ವೇದಿಕೆ ಹಂಚಿಕೊಂಡ ದೇವೇಗೌಡರು ಸಿದ್ದರಾಮಯ್ಯ ಅವರನ್ನು ಜಂಟಿ ಪ್ರಚಾರಕ್ಕೆ ಆಹ್ವಾನಿಸಿದರು.

ಮೋದಿಗೆ ಜಮೀರ್‌ ಅವಾಚ್ಯ ನಿಂದನೆ: ಸಚಿವ ಜಮೀರ್‌ ಅಹ್ಮದ್‌ ಖಾನ್‌, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್‌ ಕಿ ಬಾತ್‌ ಪ್ರಸ್ತಾಪಿಸಿ ಅವಾಚ್ಯ ಶಬ್ದದಿಂದ ನಿಂದಿಸಿದರು. ನಮಗೆ ಮನ್‌ ಕಿ ಬಾತ್‌ ಬೇಕಾಗಿಲ್ಲ. ಕಾಮ್‌ ಕಿ ಬಾತ್‌ ಬೇಕು. ನಾವು ಹೋಗಿ ಮನ್‌ ಕಿ ಬಾತ್‌ ಮನೆಯವರ ಜತೆ ಮಾತನಾಡುತ್ತೇವೆ. ಆದರೆ ಇವರಿಗೆ ಹೆಂಡತಿ ಇಲ್ಲ ಎನ್ನುವಾಗ ವಿವಾದಿತ ಪದ ಬಳಸಿದರು.