ರಾಜಕೀಯ ಅಂಗಳಕ್ಕೆ ದೇವೇಗೌಡರ ಕಿರಿಯ ಪುತ್ರ ಎಂಟ್ರಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇನ್ನೇನು ಕೆಲ ದಿನಗಳಷ್ಟೇ ಉಳಿದಿದೆ. ಅಭ್ಯರ್ಥಿಗಳ ಪ್ರಚಾರವೂ ಜೋರಾಗಿದೆ.
ದಾಬಸ್ಪೇಟೆ: ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಅವರ ಕಿರಿಯ ಮಗ ಎಚ್.ಡಿ.ರಮೇಶ್ ಪ್ರಚಾರ ನಡೆಸಿದರು.
ದಾಬಸ್ ಪೇಟೆ ಮಾರ್ಗವಾಗಿ ತುಮಕೂರು ಜೆಡಿಎಸ್ ಸಮಾವೇಶಕ್ಕೆ ತೆರಳುತ್ತಿದ್ದ ವೇಳೆ ದೇವೇಗೌಡರ ಕಿರಿಯ ಪುತ್ರ ರಮೇಶ್ ದಾಬಸ್ಪೇಟೆ ಬಳಿಯ ಎಡೇಹಳ್ಳಿಯ ಜೆಡಿಎಸ್ ಮುಖಂಡರು ಹಾಗೂ ಹೋಬಳಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ತೀರ್ಥಪ್ರಸಾದ್ ಮನೆಗೆ ಭೇಟಿ ನೀಡಿದರು. ಅಲ್ಲಿ ಚಹಾ ಕುಡಿದು ಹೋಬಳಿಯ ಮುಖಂಡರ ಜೊತೆ ಚರ್ಚಿಸಿ, ನಮ್ಮ ಜೆಡಿಎಸ್ ಪಕ್ಷವನ್ನು ಕಾರ್ಯಕರ್ತರು ಹಾಗೂ ಮುಖಂಡರೆಲ್ಲರೂ ಒಗ್ಗಟ್ಟಿನಿಂದ ಬೆಂಬಲಿಸಬೇಕೆಂದು ಕೋರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್, ನಾನು ರಾಜಕೀಯದಲ್ಲಿ ತೊಡಗುವುದು ಬಹಳ ವಿರಳ. ಚುನಾವಣಾ ಸಂದರ್ಭದಲ್ಲಿ ಮಾತ್ರ ನಮ್ಮ ಪಕ್ಷದ ಬಗ್ಗೆ ಪ್ರಚಾರ ಮಾಡುತ್ತೇನೆ. ಇಂದು ಸಹ ತುಮಕೂರಿನ ಸಮಾವೇಶ ಇರುವುದರಿಂದ ಅಲ್ಲಿಗೆ ತೆರಳುತ್ತಿದ್ದೆ, ಸೋಂಪುರ ಹೋಬಳಿಯ ನಾಯಕರ ಮನೆಗೆ ಭೇಟಿ ನೀಡಿದ್ದೇನೆ. ಎಲ್ಲರೂ ಒಮ್ಮತದಿಂದ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೇನೆ ಎಂದರು.