ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಆದರೂ ಕೂಡ ಟಿಕೆಟ್ ಹಂಚಿಕೆ ಸಮಸ್ಯೆ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಬಗೆಹರಿದಿಲ್ಲ. ಮೂರು ಕ್ಷೇತ್ರಗಳ ಟಿಕೆಟ್ ಹಂಚಿಕೆಯು ಕಾಂಗ್ರೆಸ್ ಗೆ ಕಗ್ಗಂಟಾಗಿದೆ. 

ಬೆಂಗಳೂರು: ಕಗ್ಗಂಟಾಗಿರುವ ದಾವಣಗೆರೆ, ಧಾರವಾಡ ಹಾಗೂ ಬೆಳಗಾವಿ-ಚಿಕ್ಕೋಡಿ ವಿಚಾರಗಳ ಬಗ್ಗೆ ಸ್ಥಳೀಯರ ಜತೆ ಸಮಾಲೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ರಾಹುಲ್ ಗಾಂಧಿ ಅವರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಮಾವೇಶದ ವೇಳೆ ರಾಜ್ಯ ನಾಯಕರ ಜತೆ ಈ ಬಗ್ಗೆ ಚರ್ಚಿಸಿದ ರಾಹುಲ್, ದಾವಣಗೆರೆ ಧಾರವಾಡ ದಲ್ಲಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಮತ್ತು ಬಿಜೆಪಿಯಿಂದ ಪಕ್ಷ ಸೇರಲು ಸಜ್ಜಾಗಿರುವ ರಮೇಶ್ ಕತ್ತಿಗೆ ಗೆ ಅವಕಾಶ ಕಲ್ಪಿಸುವ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿ ನಿರ್ಧರಿಸುವಂತೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಇನ್ನು ಬಿಜೆಪಿಯಿಂದ ರಮೇಶ್ ಕತ್ತಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಈಗಾಗಲೇಹಂಚಿಕೆಯಾಗಿರುವ ಚಿಕ್ಕೋಡಿ, ಬೆಳಗಾವಿ ಟಿಕೆಟ್ ಬದಲಾವಣೆ ಕುರಿತು ಸ್ಥಳೀಯ ಪರಿಸ್ಥಿತಿ ಆಧರಿಸಿ ರಾಜ್ಯ ನಾಯಕರೇ ತೀರ್ಮಾನ ಕೈಗೊಳ್ಳುವಂತೆ ರಾಹುಲ್ ಸೂಚಿಸಿದರು ಎನ್ನಲಾಗಿದೆ . 

ಮೂಲಗಳ ಪ್ರಕಾರ ರಮೇಶ್ ಕತ್ತಿ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ನೀಡಿದರೆ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ,ಅವರಿಗಾಗಿ ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಅವರನ್ನು ಚಿಕ್ಕೋಡಿಯಿಂದ ಬೆಳಗಾವಿಗೆ ಸ್ಥಳಾಂತರಿಸ ಬೇಕು. ಬೆಳಗಾವಿಯಲ್ಲಿ ಈಗಾಗಲೇ ಟಿಕೆಟ್ ನೀಡಲಾಗಿರುವ ಸಾಧೂನವರ ಅವರನ್ನುಕಣದಿಂದ ಹಿಂದಕ್ಕೆ ಸರಿಯುವಂತೆ ಮಾಡಬೇಕು. ಇದಾಗ್ಯೂ ಫಲಿತಾಂಶ ಬಂದ ನಂತರ ಮತ್ತೆ ಬಿಜೆಪಿ ಸೇರ್ಪಡೆಯಾದರೆ ಏನುಮಾಡುವುದೆಂಬ ಚಿಂತೆ ಕೈ ನಾಯಕರದ್ದಾಗಿದೆ.

ಒಂದು ವೇಳೆ ಕಾಂಗ್ರೆಸ್ ರಮೇಶ್ ಕತ್ತಿ ಅವರ ಬೇಡಿಕೆಗೆ ಒಪ್ಪದಿದ್ದರೆ ಆಗ ಅವರು ಪಕ್ಷೇತರವಾಗಿ ನಿಲ್ಲುವ ಸಾಧ್ಯತೆಯಿದೆ. ರಮೇಶ್ ಕತ್ತಿ ಪಕ್ಷೇತರರಾಗಿ ಸ್ಪರ್ಧಿಸಿದರೆ ಅದರಿಂದ ಬಿಜೆಪಿ ಮತ ವಿಭಜನೆಯಾಗಿ ಕಾಂಗ್ರೆಸ್‌ಗೆ ಲಾಭವಾಗುತ್ತದೆ. ಹೀಗಾಗಿ ರಮೇಶ್ ಕತ್ತಿ ಅವರಿಗಾಗಿ ಕ್ಷೇತ್ರಗಳನ್ನು ಅದಲು-ಬದಲು ಮಾಡುವ ಸರ್ಕಸ್ ನಡೆಸುವುದಕ್ಕಿಂತ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಪರಿಸ್ಥಿತಿಯ ಲಾಭ ಪಡೆಯುವುದೇ
ಸೂಕ್ತ ಎಂಬ ಚಿಂತನೆಯೂ ಕಾಂಗ್ರೆಸ್ ನಾಯಕರಿಗೆ ಇದೆ ಎನ್ನಲಾಗಿದೆ.

ಧಾರವಾಡ, ದಾವಣಗೆರೆ: ಇನ್ನು, ದಾವಣಗೆರೆ ವಿಚಾರದಲ್ಲಿ ಶಾಮನೂರು ಕುಟುಂಬದ ಎಸ್. ಎಸ್. ಮಲ್ಲಿಕಾರ್ಜುನ್ ಸ್ಪರ್ಧಿಸುವ ಅಥವಾ ಪರ್ಯಾಯ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ರಾಜ್ಯ ನಾಯಕರೇ ಮತ್ತೊಮ್ಮೆ ಸಭೆ ಸೇರಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.