ಈಶ್ವರಪ್ಪಗೆ ಜೀವ ಬೆದರಿಕೆ ಕರೆ : ಶಿವಮೊಗ್ಗ ಎಸ್ ಪಿಗೆ ದೂರು
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಟಿಕೆಟ್ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕೆ.ಎಸ್ ಈಶ್ವರಪ್ಪ ನೀಡಿದ ಹೇಳಿಕೆಯೊಂದರ ಸಂಬಂಧ ಅವರಿಗೆ ಬೆದರಿಕೆ ಕರೆಯೊಂದು ಬಂದಿದ್ದು, ಈ ಸಂಬಂಧ ದೂರು ನೀಡಿದ್ದಾರೆ.
ಶಿವಮೊಗ್ಗ : ಬಿಜೆಪಿ ನಾಯಕ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ನವರಿಗೆ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಶಿವಮೊಗ್ಗ ಎಸ್ ಪಿಗೆ ದೂರು ನೀಡಿದ್ದಾರೆ.
ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಆಗಮಿಸುವ ವೇಳೆಯಲ್ಲಿ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆ ಶಿವಮೊಗ್ಗ ಎಸ್.ಪಿ ಡಾ. ಅಶ್ವಿನಿ ಯವರಿಗೆ ದೂರು ನೀಡಿದ್ದಾರೆ.
ದೂರವಾಣಿ ಕರೆ ಮಾಡಿದ ವ್ಯಕ್ತಿ ನಿಮಗೆ ಏನು ಮಾಡಬೇಕೆಂದು ನನಗೆ ಗೊತ್ತು ಎಂದು ಉರ್ದು ಮಿಶ್ರಿತ ಕನ್ನಡ ಭಾಷೆಯಲ್ಲಿ ಬೆದರಿಕೆ ಒಡ್ಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಪ್ರಚಾರದ ವೇಳೆ ಮಾತನಾಡುತ್ತಾ ಕೆ.ಎಸ್. ಈಶ್ವರಪ್ಪ ಮುಸ್ಲಿಮರಿಗೆ ನಮ್ಮ ಬಗ್ಗೆ ವಿಶ್ವಾಸವಿಲ್ಲ. ಆದ್ದರಿಂದ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದಿದ್ದರು. ಈ ನಿಟ್ಟಿನಲ್ಲಿ ತಮಗೆ ಬೆದರಿಕೆ ಒಡ್ಡಿದ್ದಾಗಿ ಈಶ್ವರಪ್ಪ ತಿಳಿಸಿದರು.
ಅಲ್ಲದೇ ಆತ ಮಾತನಾಡಿದ ರೀತಿಯಲ್ಲೇ ತಾವು ಪ್ರತಿಕ್ರಿಯಿಸಿದ್ದು, ಬಳಿಕ ದೂರವಾಣಿ ಕರೆ ಕಡಿತಗೊಂಡಿದ್ದಾಗಿ ತಿಳಿಸಿದರು.