ಮಿತ್ರ ಪಕ್ಷದವರು ಹಣ ನೀಡದ್ದಕ್ಕೆ ಮತಗಟ್ಟೆ ಬಾಗಿಲಿಗೇ ಬೆಂಕಿ! ಕೋಲಾರದ ಶ್ರೀನಿವಾಸಪುರ ತಾಲೂಕಿನಲ್ಲಿ ಘಟನೆ | ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಬೇರೊಂದು ಕೊಠಡಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ. 

ಕೋಲಾರ (ಏ. 18): ಮತದಾನಕ್ಕೆ ಒಂದೇ ದಿನ ಬಾಕಿ ಇದೆ ಎನ್ನುವಾಗ ಮತಗಟ್ಟೆಯ ಬಾಗಿಲಿಗೆ ಬೆಂಕಿ ಹಚ್ಚಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಲೋಚರುಪಲ್ಲಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡರೊಬ್ಬರ ಕೈಯಲ್ಲಿ ಮತದಾರರಿಗೆ ಹಂಚಲು ಹಣ ನೀಡಲಾಗಿತ್ತು ಎನ್ನಲಾಗಿದೆ. ಆದರೆ, ಆ ವ್ಯಕ್ತಿ ಗ್ರಾಮದಲ್ಲಿ ಜೆಡಿಎಸ್‌ಗೆ ಸೇರಿದ ಮತದಾರರಿಗೆ ಹಣ ವಿತರಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಆ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ಚುನಾವಣೆ ನಡೆಯುವುದೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆ(ಸಂಖ್ಯೆ 94) ಬಾಗಿಲಿಗೇ ಬೆಂಕಿ ಹಚ್ಚಿದ್ದಾರೆನ್ನಲಾಗಿದೆ.

ಪ್ರತ್ಯೇಕ ಕೊಠಡಿ: ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಗುರುವಾರ ನಡೆಯಲಿರುವ ಮತದಾನದ ವೇಳೆ ಯಾವುದೇ ತೊಂದರೆಯಾಗದಂತೆ ಅದೇ ಶಾಲೆಯಲ್ಲಿ ಬೇರೆ ಕೊಠಡಿಯೊಂದನ್ನು ವ್ಯವಸ್ಥೆ ಮಾಡಿದ್ದಾರೆ.