ಈಡೇರಿದ ಸುಮಲತಾ ಅಂಬರೀಶ್ ಬೇಡಿಕೆ: ಮಂಡ್ಯ ಡಿಸಿ ಎತ್ತಂಗಡಿ..!
ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಎತ್ತಂಗಡಿ| ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಂತೆ ಮಂಡ್ಯ ಡಿಸಿ ವರ್ಗಾವಣೆ| ಮಂಡ್ಯ ಡಿಸಿ ಮಂಜುಶ್ರೀ ಯಾವುದೇ ಸ್ಥಳ ತೋರಿಸದೇ ಟ್ರಾನ್ಸ್ ಫರ್| ಮಂಡ್ಯ ನೂತನ ಡಿಸಿಯಾಗಿ ಸಿ.ಕೆ. ಜಾಫರ್ ನೇಮಕ| ನಿಖಿಲ್ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಡಿಸಿ ವಿರುದ್ಧ ದೂರು ನೀಡಿದ್ದ ಸುಮಲತಾ|
ಮಂಡ್ಯ, [ಏ.09]: ಮಂಡ್ಯ ಲೋಕಸಭಾ ಕ್ಚೇತ್ರದಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಂತೆ ರಾಜ್ಯ ಸರ್ಕಾರ ಮಂಡ್ಯ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡಿದ್ದು, ನೂತನ ಡಿಸಿಯಾಗಿ ಸಿ.ಕೆ. ಜಾಫರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮಂಡ್ಯ ಡಿಸಿ ವಿರುದ್ಧ ದೂರುಗಳ ಸುರಿಮಳೆ
ನಿಖಿಲ್ ನಾಮಪತ್ರ ಸಲ್ಲಿಕೆ ವಿಚಾರ ಸೇರಿದಂತೆ ಮಂಜುಶ್ರೀ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು. ಈ ಬಗ್ಗೆ ಮಂಡ್ಯ ಲೋಕಸಭಾ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಚುನಾವಣಾ ಆಯೋಗ, ಮಂಡ್ಯ ಡಿಸಿಯನ್ನು ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.
ಈ ಹಿನ್ನಲೆಯಲ್ಲಿ ಇಂದು [ಮಂಗಳವಾರ] ಮಂಜುಶ್ರೀ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಸುಮಲತಾ ಅಂಬರೀಶ್ ಬೇಡಿಕೆ ಈಡೇರಿದಂತಾಗಿದೆ.
ಮೊನ್ನೇ ಅಷ್ಟೇ ಮಂಡ್ಯ ಜಿಲ್ಲಾ ಪಮಚಾಯತ್ ಸಿಇಒ ವರ್ಗಾವಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು. ಅಷ್ಟೇ ಅಲ್ಲದೇ ಮಂಡ್ಯ ಲೋಕಸಭಾ ಸಾಮಾನ್ಯ ವೀಕ್ಷಕರಾಗಿ ಐಪಿಎಸ್ ಅಧಿಕಾರಿ, ಬೆಂಗಳೂರು ದಕ್ಷಿಣ ಡಿಸಿಪಿ ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.