ಎರಡು ದೋಣಿಯಲ್ಲಿ ದೇವೇಗೌಡ: ತುಮಕೂರು, ಬೆಂಗ್ಳೂರು ಉತ್ತರದಲ್ಲಿ ಸ್ಪರ್ಧೆ?
ಅದೂ ಬೇಕು, ಇದೂ ಬೇಕು ಎನ್ನುತ್ತಿರುವ ದೊಡ್ಡ ಗೌಡರು?| ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಜೆಡಿಎಸ್ ವರಿಷ್ಠ?| ಬೆಂಗಳೂರು ಉತ್ತರ, ತುಮಕೂರು ಕ್ಷೇತ್ರದಿಂದ ದೇವೇಗೌಡ ಸ್ಪರ್ಧೆ?| ಎರಡೂ ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ ದಳಪತಿ?|
ಬೆಂಗಳೂರು(ಮಾ.24): ದೊಡ್ಡ ಗೌಡರ ಸ್ಪರ್ಧೆ ಅಲ್ಲೋ, ಇಲ್ಲೋ ಎಂದು ಇಡೀ ರಾಜ್ಯವೇ ಮಾತನಾಡಿಕೊಳ್ಳುತ್ತಿದೆ. ಈ ಮಧ್ಯೆ ಅದೂ ಬೇಕು, ಇದೂ ಬೇಕು ಎಂಬ ಬೇಡಿಕೆ ಪದ್ಮನಾಭನಗರದಿಂದ ಹೊರ ಬಂದಂಗಿದೆ.
ಹೌದು, ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೋ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
"
ಈ ಮಧ್ಯೆ ದೇವೇಗೌಡ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಹುತೇಕ ತುಮಕೂರು ಕ್ಷೇತ್ರ ಖಚಿತವಾಗಿದ್ದರೂ, ದೊಡ್ಡ ಗೌಡರು ಬೆಂಗಳೂರು ಉತ್ತರದಲ್ಲೂ ಅದೃಷ್ಟ ಪರೀಕ್ಷೆ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.
ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧ್ಯ ಎಂಬ ಆಶಾಭಾವನೆ ಜೆಡಿಎಸ್ ಪಾಳೆಯದಲ್ಲಿದ್ದು, ಪಕ್ಷದ ವರಿಷ್ಠರನ್ನು ಕಣಕ್ಕಿಳಿಸುವ ಮೂಲಕ ಎರಡೂ ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಇರಾದೆ ಇದೆ ಎನ್ನಲಾಗಿದೆ.