ತನ್ನ ಕ್ರಿಮಿನಲ್ ಪ್ರಕರಣದ ಬಗ್ಗೆ 4 ಪುಟದ ಜಾಹೀರಾತು ನೀಡಿದ ಬಿಜೆಪಿ ಅಭ್ಯರ್ಥಿ!
ತನ್ನ ಮೇಲಿನ ಕೇಸಿನ ಬಗ್ಗೆ 4 ಪುಟಗಳ ಜಾಹೀರಾತು ಪ್ರಕಟಿಸಿದ ಬಿಜೆಪಿ ಅಭ್ಯರ್ಥಿ. ಅಷ್ಟಕ್ಕೂ ಆ ಅಭ್ಯರ್ಥಿ ಯಾರು? 4 ಪುಟ ತಗುಲಿದ್ದೇಕೆ? ಇಲ್ಲಿದೆ ವಿವರ
ತಿರುವನಂತಪುರಂ[ಏ,22]: ಶಬರಿಮಲೆ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಬಿಜೆಪಿ ಮುಖಂಡ, ಪಟ್ಟಣಂತಿಟ್ಟಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ತಮ್ಮ ವಿರುದ್ಧ 242 ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಬಗ್ಗೆ ನಾಲ್ಕು ಪುಟಗಳ ಜಾಹೀರಾತೊಂದನ್ನು ನೀಡಿದ್ದಾರೆ. ಬಿಜೆಪಿ ಮುಖವಾಣಿ ‘ಜನ್ಮಭೂಮಿ’ ಪತ್ರಿಕೆಯಲ್ಲಿ ನಾಲ್ಕು ಪುಟಗಳ ಜಾಹೀರಾತು ಪ್ರಕಟಗೊಂಡಿದೆ. 242 ಪ್ರಕರಣಗಳ ಪೈಕಿ 222 ಪ್ರಕರಣಗಳು ಶಬರಿಮಲೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿವೆ.
ಅಂತೆಯೇ ಈ ಎಲ್ಲಾ ಮಾಹಿತಿಗಳಿರುವ 60 ಸೆಕೆಂಡ್ಗಳ ಜಾಹೀರಾತನ್ನು ಪಕ್ಷಕ್ಕೆ ಸೇರಿದ ‘ಜನ್ಮಟೀವಿ’ಯಲ್ಲೂ ಪ್ರಸಾರ ಮಾಡಲಾಗಿದೆ. ಒಂದು ವೇಳೆ ಬೇರೆ ಪತ್ರಿಕೆಗಳ ಒಂದೇ ಆವೃತ್ತಿಯಲ್ಲಿ ಈ ಜಾಹೀರಾತು ನೀಡಿದ್ದರೆ ಕನಿಷ್ಠ 60 ಲಕ್ಷ ರು. ಬೇಕಾಗುತ್ತಿತ್ತು. ಟೀವಿ ಚಾನೆಲ್ಗಳಿಗೆ ಇದಕ್ಕಿಂತ ಜಾಸ್ತಿ ಹಣವನ್ನು ವ್ಯಯಿಸಬೇಕಿತ್ತು. ಶಬರಿಮಲೆ ಪ್ರಕರಣದಲ್ಲಿ 22 ದಿನ ಜೈಲುವಾಸ ಅನುಭವಿಸಿ ಬಂದಿರುವ ಸುರೇಂದ್ರನ್ ಚುನಾವಣಾ ಆಯೋಗದ ಸೂಚನೆ ಮೇರೆಗೆ ಈ ಜಾಹೀರಾತು ನೀಡಿದ್ದಾರೆ.
ಒಂದೊಮ್ಮೆ ಜಾಹೀರಾತು ನೀಡದೇ ಇದ್ದಲ್ಲಿ ನಾಮಪತ್ರ ಅನರ್ಹಗೊಳ್ಳುವ ಸಾಧ್ಯತೆ ಇತ್ತು. ಈ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ತಮ್ಮ ಮೇಲಿನ ಕೇಸಿನ ಕುರಿತು 3 ಬಾರಿ ಜಾಹೀರಾತು ನೀಡುವುದನ್ನು ಕಡ್ಡಾಯ ಮಾಡಲಾಗಿದೆ.