ಬಾಬ್ರಿ ಧ್ವಂಸದಲ್ಲಿ ನಾನೂ ಭಾಗಿಯಾಗಿದ್ದೆ: ಪ್ರಜ್ಞಾ
ಮಾಲೆಗಾಂವ್ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಬಾಬ್ರಿ ಧ್ವಂಸದಲ್ಲಿ ತಾನೂ ಭಾಗಿಯಾಗಿದ್ದೆ ಎಂಬ ಹೇಳಿಕೆ ನೀಡಿದ್ದಾರೆ.
ನವದೆಹಲಿ[ಏ.22]: 26/11 ದಾಳಿ ಪ್ರಕರಣದ ಹೀರೋ ಹೇಮಂತ್ ಕರ್ಕರೆ ಅವರು ನನ್ನ ಶಾಪದಿಂದಾಗಿಯೇ ಸಾವನ್ನಪ್ಪಿದ್ದರು ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಭೋಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮಾಡಿದ ಘಟನೆಯಲ್ಲಿ ತಾವೂ ಭಾಗಿಯಾಗಿದ್ದಾಗಿ ಘೋಷಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಈ ಕುರಿತು ಹೇಳಿಕೆ ನೀಡಿರುವ ಸಾಧ್ವಿ, ಘಟನೆ ನಡೆದ ದಿನ ನಾನು ಕೂಡಾ ಬಾಬ್ರಿ ಮಸೀದಿ ಮೇಲೆ ಹತ್ತಿ ಅದನ್ನು ಧ್ವಂಸಗೊಳಿಸಲು ಕೈಜೋಡಿಸಿದ್ದೆ. ದೇವರು ನನಗೆ ಆ ಅವಕಾಶ ಮತ್ತು ಶಕ್ತಿ ಕೊಟ್ಟಿದಕ್ಕೆ ನನಗೆ ಹೆಮ್ಮೆ ಇದೆ. ಅಲ್ಲದೆ ಬಾಬ್ರಿ ಮಸೀದಿ ಧ್ವಂಸ ಆಗಿದ್ದಕ್ಕೆ ನನಗೆ ಯಾವುದೇ ಪಶ್ಚಾತಾಪವಿಲ್ಲ. ಅಷ್ಟಕ್ಕೂ ನಾನೇಗೆ ಮಸೀದಿ ಧ್ವಂಸಗೊಂಡ ಬಗ್ಗೆ ವಿಷಾದ ಹೊಂದಬೇಕು? ವಾಸ್ತವವಾಗಿ ನನಗೆ ಘಟನೆ ಬಗ್ಗೆ ಹೆಮ್ಮೆ ಇದೆ. ಕೆಲವು ಸಮಾಜಘಾತುಕ ಶಕ್ತಿಗಳು ರಾಮದೇಗುಲವನ್ನು ಪ್ರವೇಶಿಸಲು ಯತ್ನಿಸಿದ್ದವು. ನಾವು ಅವರನ್ನು ಹೊರದಬ್ಬಲೇ ಬೇಕಿತ್ತು. ಈ ಘಟನೆ ದೇಶದ ಆತ್ಮಗೌರವವನ್ನು ಎತ್ತಿಹಿಡಿದಿತ್ತು. ಶೀಘ್ರವೇ ನಾವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಿದ್ದೇವೆ ಎಂದು ಹೇಳಿದ್ದಾರೆ.
ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.