ಕೊನೆಗೂ ತಾವು ಸಿನಿಮಾದವರು ಅಂತ ಒಪ್ಪಿಕೊಂಡ ಕುಮಾರಸ್ವಾಮಿ..!
ಸಿನಿಮಾದವರು ಹಾಗೆ, ಹೀಗೆ ಅಂತೆಲ್ಲ ದರ್ಶನ್ , ಯಶ್ ಹಾಗೂ ಸುಮಲತಾ ಅಂಬರೀಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಕುಮಾರಸ್ವಾಮಿ ಇದೀಗ ತಾವು ಸಿನಿಮಾದವರು ಎಂದು ಒಪ್ಪಿಕೊಂಡಿದ್ದಾರೆ.
ಮಂಡ್ಯ, (ಏ.15): ಮಂಡ್ಯದಲ್ಲಿ ಆರೋಪ-ಪ್ರತ್ಯಾರೋಪಗಳು ತಾರಕ್ಕೇರಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ದಳಪತಿಗಳು ವೈಯಕ್ತಿ ಟೀಕೆಗಳಿಂದ ವಾಗ್ದಾಳಿ ನಡೆಸಿದ್ದರೆ.
ಅದರಲ್ಲೂ ಸುಮಲತಾ ಪರ ಪ್ರಚಾರ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಅಂತೂ ಸಿಎಂ ಕುಮಾರಸ್ವಾಮಿ ಸೇರಿದಂತೆ ಇತರೆ ಜೆಡಿಎಸ್ ನಾಯರು ಕಿಡಿಕಾರಿದ್ದಾರೆ.
ಮನೆ ಹೆಣ್ಣುಮಗಳ ಬಗ್ಗೆ ಮಾತಾಡಿದ್ರೆ ಸುಮ್ಮನೆ ಇರಲ್ಲ ಎಂದ ಯಶ್
ಸಿನಿಮಾದವರ ಡ್ರಾಮ ನಡೆಯಲ್ಲ. ಮಂಡ್ಯಕ್ಕೆ ಸಿನಿಮಾದವರ ಕೊಡುಗೆ ಏನು..? ಮಂಡ್ಯದಲ್ಲಿ ಚಿತ್ರನಟರ ಪ್ರಚಾರ ಮಾತ್ರಕ್ಕೆ ಮತ ಬರಲ್ಲ. ಅಂತೆಲ್ಲ ದರ್ಶನ್, ಯಶ್ ಹಾಗೂ ಸುಮಲತಾ ವಿರುದ್ಧ ಕೆಂಡಾಕಾರಿದ್ದರು.
ಆದ್ರೆ ಇದೀಗ ಕುಮಾರಸ್ವಾಮಿ ಅವರು ತಾವೂ ಸಹ ಸಿನಿಮಾದವರು ಅಂತ ಒಪ್ಪಿಕೊಂಡಿದ್ದಾರೆ. ಇಂದು (ಸೋಮವಾರ) ಕೆ.ಆರ್.ಪೇಟೆಯಲ್ಲಿ ಪುತ್ರ ನಿಖಿಲ್ ಪರ ಪ್ರಚಾರದಲ್ಲಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿಯ ಆಕ್ರೋಶದ ಕಟ್ಟೆ ಹೊಡೆದಿದ್ದು, ನಟ ಯಶ್ ಹಾಗೂ ಸುಮಲತಾ ಅಂಬರೀಶ್ ವಿರುದ್ಧ ಹಿಗ್ಗಾಮುಗ್ಗಾ ಹರಿಹಾಯ್ದರು.
ರೊಚ್ಚಿಗೆದ್ದು ಮಾತನಾಡಿದ ಕುಮಾರಸ್ವಾಮಿ, ಈಗ ಸಿನಿಮಾದವರು ಬಂದು ಮಂಡ್ಯದ ಜನರ ಸ್ವಾಭಿಮಾನದ ಬಗ್ಗೆ ಮಾತನಾಡುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಂಡು ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ಬಂದಿದ್ದರು.
ನಾನೂ ಕೂಡ ಚಿತ್ರ ನಿರ್ಮಾಪಕನಾಗಿದ್ದವನು. ನನ್ನಂತಹ ನಿರ್ಮಾಪಕ ಇಲ್ಲದಿದ್ದರೆ ಇವರೆಲ್ಲ ಎಲ್ಲಿ ಬದುಕುತ್ತಾರೆ ಎಂದು ಹೇಳುವ ಮೂಲಕ ತಾವೂ ಸಿನಿಮಾದವರು ಎಂದು ಒಪ್ಪಿಕೊಂಡರು.
ಒಟ್ಟಿನಲ್ಲಿ ಮೊದಲು ಸಿನಿಮಾದವರು ಹಾಗೆ ಹೀಗೆ ಅಂತೆಲ್ಲ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಕುಮಾರಸ್ವಾಮಿ ಇದೀಗ ತಾವು ಸಿನಿಮಾದವರು ಎಂದು ಒಪ್ಪಿಕೊಂಡಿದ್ದಾರೆ.