ಸಾಧನೆ ಮಾಡಿದ್ರೆ ಮೋದಿ ಏಕೆ ಮೈತ್ರಿ ಮಾಡಿಕೊಳ್ಳುತ್ತಿದ್ದರು?
ಭಯಗೊಂಡು ಮೈತ್ರಿಗೆ ಮುಂದಾಗಿದ್ದಾರೆ| ಸಾಧನೆ ಮಾಡಿದ್ರೆ ಮೋದಿ ಏಕೆ ಮೈತ್ರಿ ಮಾಡಿಕೊಳ್ಳುತ್ತಿದ್ದರು?
ಶಿವಮೊಗ್ಗ[ಮಾ.18]: ಕಳೆದ ಬಾರಿ 282 ಸ್ಥಾನಗಳ ಮೂಲಕ ಬಹುಮತ ಗಳಿಸಿ, ಬಳಿಕ ತಾವು ಮಹಾನ್ ಸಾಧನೆ ಮಾಡಿದ್ದೇನೆಂದು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಹಾಗಿದ್ದರೆ ಈ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಜೊತೆ, ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಹೊಂದಾಣಿಕೆ ಮಾತುಕತೆಗೆ ಹೋಗಬೇಕಾದ ಸ್ಥಿತಿಯಾದರೂ ಯಾಕೆ ಬಂತು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು.
ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದೇವೇಗೌಡ ಅವರು ಪ್ರಧಾನಿ ಮೋದಿ ಕಾರ್ಯ ವೈಖರಿ ವಿರುದ್ಧ ವಾಗ್ದಾಳಿ ನಡೆಸಿದರು. ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಗುರಿಯನ್ನು ಮೋದಿ ಹೊಂದಿದ್ದಾರೆ. ಅವರು ಅಷ್ಟೊಂದು ಸಾಧನೆ ಮಾಡಿದ್ದೇ ಹೌದಾಗಿದ್ದರೆ ಅವರ ಗೆಲುವು ಕಳೆದ ಬಾರಿಗಿಂತ ಸುಲಭವಾಗಿರುತ್ತಿತ್ತು. ಇವರ ಆಡಳಿತವನ್ನು ಜನ ಮೆಚ್ಚಿದ್ದರೆ ಗೆಲ್ಲಿಸುತ್ತಿದ್ದರು.
ಆದರೆ ನಿಜ ಏನೆಂಬುದು ಮೋದಿಯವರಿಗೆ ಗೊತ್ತಿದೆ. ಹೀಗಾಗಿ ಭಯಗೊಂಡು ಮೈತ್ರಿಗೆ ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.