ಮಾಜಿ ಸಚಿವ ಎ. ಮಂಜು ಅವರು ಬಿಜೆಪಿ ಸೇರ್ಪಡೆ ವಿಚಾರ| ಸಿದ್ದರಾಮಯ್ಯ ಮನೆಗೆ ಹಾಸನ ಕಾಂಗ್ರೆಸ್ ಮುಖಂಡರು ದೌಡು

ಬೆಂಗಳೂರು[ಮಾ.17]: ಹಾಸನ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎ. ಮಂಜು ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಹಾಸನ ಕಾಂಗ್ರೆಸ್ ಮುಖಂಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಬೆಂಗಳೂರಿನ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಭೇಟಿ ನೀಡಿದ ಹಾಸನ ಮುಖಂಡರು, ಹಾಸನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು. ಇದೀಗ ನಾವೇ ಜೆಡಿಎಸ್ ಪರ ಮತ ಕೇಳುವಂತಾಗಿದೆ. ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸಿದ್ದರೂ ಒಂದು ಗೌರವ ಇತ್ತು. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡಿರುವುದರಿಂದ ಎಲ್ಲರಿಗೂ ಬೇಸರವಾಗಿದೆ. ಹೀಗಾಗಿಯೇ ಎ. ಮಂಜು ಕೂಡ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದರು.

ಈ ವೇಳೆ ಸಿದ್ದರಾಮಯ್ಯ, ಇದು ಹೈಕಮಾಂಡ್ ನಿರ್ಧಾರ. ಮೈತ್ರಿ ಧರ್ಮ ಪಾಲನೆಯಲ್ಲಿ ನೀವೆಲ್ಲಾ ಮೈತ್ರಿ ಅಭ್ಯರ್ಥಿ ಪರವಾಗಿಯೇ ಪ್ರಚಾರ ನಡೆಸಬೇಕು ಎಂದು ಹೇಳಿ ಕಳುಹಿಸಿದರು ಎಂದು ತಿಳಿದುಬಂದಿದೆ. ಎ.ಮಂಜು ಕಾಂಗ್ರೆಸ್ ಬಿಟ್ಟರೆ ನಮ್ಮ ನಾಯಕರಲ್ಲ: ಸಭೆ ಬಳಿಕ ಮಾತನಾಡಿದ ವಿಧಾನಪರಿಷತ್ ಸದಸ್ಯ ಗೋಪಾಲಸ್ವಾಮಿ, ಎ.ಮಂಜು ಕಾಂಗ್ರೆಸ್‌ನಲ್ಲಿ ಇರುವವರೆಗೂ ನಮ್ಮ ನಾಯಕರು. ಅವರು ಕಾಂಗ್ರೆಸ್ ಬಿಟ್ಟು ಹೋದರೆ ನಮ್ಮ ನಾಯಕರಲ್ಲ. ಮಂಜು ಬಿಜೆಪಿ ಸೇರುವ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಹೇಳಿದರು.