ಕರ್ನಾಟಕ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆಪ್ತ ಹಾಗೂ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡ ಕಾಂಗ್ರೆಸ್ ಸೇರಲಿದ್ದಾರೆಯೇ?. ಹಾವೇರಿ-ಗದಗ ಲೋಕಸಭಾ ಚುನಾವಣೆಗೆ ಕೆಲವು ದಿನಗಳು ಬಾಕಿ ಇರುವಾಗ ಈ ಪ್ರಶ್ನೆ ಹುಟ್ಟಿಕೊಂಡಿದ್ದು, ಬಿಜೆಪಿಗೆ ಶಾಕ್ ಕೊಟ್ಟಂತಾಗಿದೆ.

ಗದಗ (ಏ.08) : ಲೋಕಸಭಾ ಚುನಾವಣೆಯ ಮತದಾನದ ದಿನಾಂಕ ಇನ್ನೇನು ಹತ್ತಿರವಾಗ್ತಿದ್ದಂತೆ, ಪಕ್ಷಾಂತರ ಪರ್ವ ಜೋರಾಗಿದೆ. 

Add Asianetnews Kannada as a Preferred SourcegooglePreferred

ತಮ್ಮ ಪುತ್ರ .ಆರ್.ಪಾಟೀಲ್ ನನ್ನು ಶತಾಯಗತಾಯವಾಗಿ ಗೆಲ್ಲಿಸಲು ಎಚ್‌.ಕೆ.ಪಾಟೀಲ್ ಅವರು ಗದಗ ಕ್ಷೇತ್ರದ ಮಾಜಿ ಶಾಸಕ, ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡನಿಗೆ ಗಾಳ ಹಾಕಿದ್ದಾರೆ.

ಗದಗ ಕ್ಷೇತ್ರದ ಪ್ರಭಾವಿ ಬಿಜೆಪಿ ನಾಯಕ ಶ್ರೀಶೈಲಪ್ಪ ಬಿದರೂರ ಅವರನ್ನು ಕಾಂಗ್ರೆಸ್ ಗೆ ಕರೆತರಲು ಎಚ್.ಕೆ.ಪಾಟೀಲ್ ಭರ್ಜರಿ ಕಸರತ್ತು ನಡೆಸಿದ್ದಾರೆ.

ಬಿಜೆಪಿಯಿಂದ ಶಿವಕುಮಾರ್ -ಕಾಂಗ್ರೆಸ್ ನಿಂದ ಪಾಟೀಲ್ : ನೇರ ಹಣಾಹಣಿ

ಈಗಾಗಲೇ ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು ಶ್ರೀಶೈಲಪ್ಪ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಎಚ್.ಕೆ.ಪಾಟೀಲ್ ಅವರ ಜತೆ ಮಾತುಕತೆ ನಡೆಸಿದ ಬಳಿಕ ಶ್ರೀಶೈಲಪ್ಪ ಬಿದರೂರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.

ಈ ಹಿಂದೆ ಜನತಾ ಪರಿವಾರದಲ್ಲಿದ್ದ ಬಿದರೂರ ನಂತರ ಬಿಜೆಪಿ ಸೇರಿದ್ದರು. ಇದೀಗ ಹಳೆಯ ಗೆಳೆಯರಾದ ಶ್ರೀಶೈಲಪ್ಪ ಬಿದರೂರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಒಂದಾಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ. ಒಂದು ವೇಳೆ ಶ್ರೀಶೈಲಪ್ಪ ಕಾಂಗ್ರೆಸ್ ಸೇರಿದರೆ ಗದಗ-ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ನಷ್ಟವಾಗಲಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀಶೈಲಪ್ಪ ಬಿದರೂರ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು. ಆದ್ದರಿಂದ, ಅವರು ಈ ಚುನಾವಣೆಯಲ್ಲಿ ತಟಸ್ಥರಾಗಿ ಉಳಿದಿದ್ದರು. ಗದಗ ಮತ್ತು ರೋಣ ಕ್ಷೇತ್ರದ ವ್ಯಾಪ್ತಿಯಲ್ಲಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದು, ಸಾಕಷ್ಟು ಪ್ರಭಾವ ಇಟ್ಟುಕೊಂಡಿದ್ದಾರೆ.

ಏಪ್ರಿಲ್ 23ರಂದು ಗದಗ-ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಹಾಲಿ ಸಂಸದ ಶಿವಕುಮಾರ ಉದಾಸಿ ಅಭ್ಯರ್ಥಿ. ಕಾಂಗ್ರೆಸ್‌-ಜೆಡಿಎಸ್ ಅಭ್ಯರ್ಥಿಯಾಗಿ ಡಿ.ಆರ್.ಪಾಟೀಲ್ ಅವರು ಕಣದಲ್ಲಿದ್ದಾರೆ.