ಟಿಕೆಟ್ ಗಾಗಿ ಈಶ್ವರಪ್ಪ ಸಂಪರ್ಕಿಸಿದ್ದರು, ಆದರೆ...!: ರೇವಣ್ಣ ಹೇಳಿದ ಸೀಕ್ರೆಟ್ ಏನು?
ಟಿಕೆಟ್ಗಾಗಿ ಈಶ್ವರಪ್ಪ ನಮ್ಮ ಬಳಿ ಬಂದಿದ್ದರು: ರೇವಣ್ಣ| ರಾಘವೇಂದ್ರ ಸೋಲಿಸಲು ಈಶ್ವರಪ್ಪ ಕೆಲಸ ಮಾಡ್ತಿದ್ದಾರೆ
ಶಿವಮೊಗ್ಗ[ಏ.22]: 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದುಕೊಳ್ಳಲು ಒದ್ದಾಡಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕೊನೆ ಹಂತದಲ್ಲಿ ನಮ್ಮ ಜೊತೆ ಮಾತುಕತೆಗೆ ಕುಳಿತುಕೊಂಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಅವರಿಗೆ ಬಿಜೆಪಿಯಿಂದ ಟಿಕೆಟ್ ಪ್ರಕಟಗೊಂಡಿತ್ತು ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡಿದ್ದ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಎಂದು ಕಟ್ಟಿಕೊಂಡು ಓಡಾಡುತ್ತಿದ್ದರು. ಕೊನೆಗೆ ಇದನ್ನೆಲ್ಲಾ ಬಿಟ್ಟಬಳಿಕವೂ ಅವರಿಗೆ ಟಿಕೆಟ್ ನೀಡದಿರಲು ಪಕ್ಷದ ಕೆಲ ನಾಯಕರು ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ನಮ್ಮ ಜೊತೆ ಮಾತುಕತೆಗೆ ಬಂದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿಗೆ ಏನನ್ನೂ ಈಗ ಹೇಳುವುದಿಲ್ಲ. ಸಂದರ್ಭ ಬಂದಾಗ ಮಾತನಾಡುತ್ತೇನೆ ಎಂದು ಹೇಳಿದರು.
ಯಡಿಯೂರಪ್ಪ ಅವರ ಕಾಟ ತಾಳಲಾರದೆ ಹಲವಾರು ಬಾರಿ ಈಶ್ವರಪ್ಪನವರು ತಮ್ಮ ನೋವನ್ನು ನನ್ನ ಬಳಿ ತೋಡಿಕೊಂಡಿದ್ದಾರೆ. ಈಗ ಅವರಿಗೆ ರಾಜ್ಯದಲ್ಲಿ ಬಿಜೆಪಿಯಿಂದ ಒಬ್ಬರೇ ಒಬ್ಬ ಕುರುಬರಿಗೆ ಟಿಕೆಟ್ ನೀಡಿಲ್ಲ ಎಂಬ ಸಿಟ್ಟಿದೆ. ಆ ಸಿಟ್ಟನ್ನು ಈ ಚುನಾವಣೆಯಲ್ಲಿ ರಾಘವೇಂದ್ರ ಅವರನ್ನು ಸೋಲಿಸುವ ಮೂಲಕ ತೀರಿಸಿಕೊಳ್ಳುವ ಸಾಧ್ಯತೆ ಇದೆ. ಈಶ್ವರಪ್ಪ ಮಾತ್ರವಲ್ಲ, ಬಿಜೆಪಿಯಲ್ಲಿ ಹಲವರು ಇದೇ ರೀತಿ ರಾಘವೇಂದ್ರ ಅವರನ್ನು ಸೋಲಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾನು ಮತ್ತು ಈಶ್ವರಪ್ಪ ಒಳ್ಳೆಯ ಗೆಳೆಯರು. ಅವರ ಮೇಲೆ ನನಗೆ ಯಾವ ದ್ವೇಷ, ಸಿಟ್ಟು ಇಲ್ಲ. ಬೇಕಾದಷ್ಟುಸಲ ನಾವು ಪರಸ್ಪರ ಸಹಾಯ ಮಾಡಿಕೊಂಡಿದ್ದೇವೆ. ರಾಜಕೀಯ ಎಂದ ಮೇಲೆ ಒಪ್ಪಿಕೊಳ್ಳುವುದು, ಅಪ್ಪಿಕೊಳ್ಳುವುದು ಎರಡೂ ಇರುತ್ತದೆ. ಯಾವುದೂ ಶಾಶ್ವತ ಅಲ್ಲ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಕ್ಕೆ ಅಭ್ಯರ್ಥಿ ಸಿಗಲಿಲ್ಲವೇ?:
ರಾಷ್ಟ್ರೀಯ ಪಕ್ಷ ಎಂದು ಬೀಗುವ ಬಿಜೆಪಿಗೆ ಹಾಸನ ಮತ್ತು ಮಂಡ್ಯದಲ್ಲಿ ಅಭ್ಯರ್ಥಿಯೇ ಸಿಗಲಿಲ್ಲ ಎಂದರೆ ನಾಚಿಕೆಯಾಗಬೇಕು. ಮಂಡ್ಯದಲ್ಲಿ ಸುಮಲತಾ ಮನೆಗೆ ಹೋಗಿ ಕೈ ಕಾಲು ಹಿಡಿದು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಡ ಹೇರಿದರು. ಬಳಿಕ ತಮ್ಮ ಬೆಂಬಲ ಘೋಷಿಸಿದರು. ಹಾಸನದಲ್ಲಿ ಚಲಾವಣೆ ಕಳೆದುಕೊಂಡಿದ್ದ ಕಾಂಗ್ರೆಸ್ನ ವ್ಯಕ್ತಿಯನ್ನು ಕರೆ ತಂದು ಟಿಕೆಟ್ ನೀಡಿದರು ಎಂದು ಟೀಕಿಸಿ, ಪ್ರಧಾನ ಮಂತ್ರಿಯೊಬ್ಬರು ಒಂದು ರಾಜ್ಯಕ್ಕೆ ಬಂದು ಪಕ್ಷೇತರ ಅಭ್ಯರ್ಥಿಯ ಪರ ಮತ ಯಾಚಿಸುತ್ತಾರೆ ಎಂದರೆ ಅದಕ್ಕಿಂತ ಇದು ಕೂಡ ನಾಚಿಕೆಗೇಡಿನ ಸಂಗತಿ ಎಂದರು.