ಮತದಾನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಅನೇಕ ಸಂಘ-ಸಂಘಟನೆಗಳು, ಅಂಗಡಿಗಳು ಮತದಾರರಿಗೆ ಆಫರ್ ನೀಡುತ್ತಿವೆ. ಮತದಾನ ಮಾಡಿ ಬಂದವರಿಗೆ ಆಫರ್‌ಗಳನ್ನು ನೀಡುತ್ತಿವೆ. ಯಾರೆಲ್ಲಾ, ಏನೆಲ್ಲಾ ಆಫರ್ ಕೊಟ್ಟಿದ್ದಾರೆ ಇಲ್ಲಿದೆ ನೋಡಿ. 

ತುಮಕೂರು (ಏ. 18): ಮತದಾನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರಿನ ಕೃಪಾ ಫುಡ್ಸ್ ಇಂಡಿಯಾ ತೊಗರಿಬೇಳೆ ಗಿರಣಿ ಕಾರ್ಖಾನೆ ಮತ ಹಾಕಿದವರಿಗೆ ಅರ್ಧ ಕೆ.ಜಿ ತೊಗರಿಬೇಳೆ ನೀಡಲು ಮುಂದಾಗಿದೆ.

Add Asianetnews Kannada as a Preferred SourcegooglePreferred

ಇದಕ್ಕಾಗಿ ಅರ್ಧ ಕೆ.ಜಿ ತೊಗರಿಬೇಳೆ ಪ್ಯಾಕೆಟ್ ಸಿದ್ಧವಾಗಿದ್ದು, ಮತ ಹಾಕಿದವರು ಶಾಯಿ ಹಾಕಿರುವ ಬೆರಳನ್ನು ತೋರಿಸಿ ಪಡೆಯಬಹುದಾಗಿದೆ. ತುಮಕೂರಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಉದ್ಯಮಿ ಎನ್.ಕೆ.ಬಸವರಾಜು ಘೋಷಿಸಿದರು.

ದಾವಣಗೆರೆ:

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಏ.23 ರಂದು ನಡೆಯುವ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ನಗರದ ಸರ್ ಎಂ.ವಿ.ಪದವಿ ಪೂರ್ವ ಕಾಲೇಜಿನ ನೌಕರರಿಗೆ ಒಂದು ದಿನದ ಹೆಚ್ಚುವರಿ ವೇತನ ನೀಡುವುದಾಗಿ ಕಾಲೇಜು ಆಡಳಿತ ಮಂಡಳಿ ಘೋಷಿಸಿದೆ. ಈ ವಿಷಯ ತಿಳಿಸಿದ ಕಾಲೇಜು ಕಾರ್ಯದರ್ಶಿ ಎಸ್.ಆರ್.ಶ್ರೀಧರ್, ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು. ಉತ್ತಮ ಸಮಾಜಕ್ಕಾಗಿ ಸ್ವಯಂ ಪ್ರೇರಣೆಯಿಂದ ಚುನಾವಣೆ ದಿನದಂದು ಮತಗಟ್ಟೆಗೆ ಎಲ್ಲಾ ಅರ್ಹ ಮತದಾರರೂ ತೆರಳಿ ಮತ ಚಲಾಯಿಸಬೇಕು. ಈ ಹಿನ್ನೆಲೆಯಲ್ಲಿ ಮತದಾನ ಮಾಡುವ ಸರ್ ಎಂವಿ ಪಿಯು ಕಾಲೇಜಿನ ಸಿಬ್ಬಂದಿಗೆ ಒಂದು ದಿನದ ಹೆಚ್ಚುವರಿ ಸಂಬಳ ನೀಡಲಿದ್ದೇವೆ ಎಂದರು.