ಸುಮಲತಾ ಪರ ಜೈ: ಯೂತ್ ಕಾಂಗ್ರೆಸ್ ನ 6 ಪದಾಧಿಕಾರಿಗಳು ಸಸ್ಪೆಂಡ್
ಸುಮಲತಾ ಅಂಬರೀಶ್ ಬೆನ್ನಿಗೆ ನಿಂತಿರುವ ಮಂಡ್ಯ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತಿದೆ. ಇಂದು ಬರೊಬ್ಬರಿ ಯುವ ಕಾಂಗ್ರೆಸ್ನ 6 ಪದಾಧಿಕಾರಿಗಳನ್ನು ಉಚ್ಚಾಟಿಸಲಾಗಿದೆ.
ಮಂಡ್ಯ/ಬೆಂಗಳೂರು, (ಮಾ.24): ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಜೈ ಎನ್ನುತ್ತಿರುವ ಯುವ ಕಾಂಗ್ರೆಸ್ನ 6 ಪದಾಧಿಕಾರಿಗಳನ್ನು ಉಚ್ಚಾಟಿಸಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಗೀತಾ ರಾಜಣ್ಣ ಆದೇಶ ಹೊರಡಿಸಿದ್ದಾರೆ.
ಯುವ ಕಾಂಗ್ರೆಸ್ನ ಜಿಲ್ಲಾ ಉಪಾಧ್ಯಕ್ಷ ಅರವಿಂದ್ ಕುಮಾರ್, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್, ನಾಗಮಂಗಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶರತ ರಾಮಣ್ಣ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಿಜಯ್ ಕುಮಾರ್, ಮಳವಳ್ಳಿ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಕೃಷ್ಣೇಗೌಡ, ಮಳವಳ್ಳಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಮಹದೇವ ಪ್ರಸಾದ್ ಉಚ್ಚಾಟನೆಗೊಂಡವರು.
ಸುಮಲತಾಗೆ ಬೆಂಬಲ: ಬಿಗ್ ಲೀಡರ್ ಬಿಟ್ಟು ಗುಬ್ಬಿ ಮೇಲೆ ಕಾಂಗ್ರೆಸ್ ಬ್ರಹ್ಮಾಸ್ತ್ರ
ಇದಕ್ಕೂ ಮುನ್ನ ನಾಮಪತ್ರ ಸಲ್ಲಿಸಲು ಸುಮಲತಾ ಅಂಬರೀಶ್ ಅವರಿಗೆ ಸಹಕರಿಸಿದ್ದಕ್ಕಾಗಿ ಹಾಗೂ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಕಾಂಗ್ರೆಸ್, ಇಂಡುವಾಳು ಸಚ್ಚಿದಾನಂದ ಅವರನ್ನು ಉಚ್ಚಾಟಿಸಿತ್ತು.