ಫಲಿತಾಂಶಕ್ಕೂ ಮುನ್ನವೇ ಜಗನ್ ‘ಸಿಎಂ ಕಚೇರಿ’ ಅಮರಾವತಿಗೆ ಶಿಫ್ಟ್!
ತೆಲುಗು ದೇಶಂ ಪಕ್ಷವನ್ನು ಮಣಿಸಿ ಅಧಿಕಾರಕ್ಕೆ ಬರುವ ಪೂರ್ಣ ವಿಶ್ವಾಸ| ಫಲಿತಾಂಶಕ್ಕೂ ಮುನ್ನವೇ ಜಗನ್ ‘ಸಿಎಂ ಕಚೇರಿ’ ಅಮರಾವತಿಗೆ ಶಿಫ್ಟ್!|
ಹೈದರಾಬಾದ್[ಮೇ.15]: ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷವನ್ನು ಮಣಿಸಿ ಅಧಿಕಾರಕ್ಕೆ ಬರುವ ಪೂರ್ಣ ವಿಶ್ವಾಸದಲ್ಲಿರವ ವೈ.ಎಸ್.ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ಮೋಹನ್ ರೆಡ್ಡಿ, ಮುಖ್ಯಮಂತ್ರಿ ಕಚೇರಿಯನ್ನು ಹೈದರಾಬಾದ್ನಿಂದ ಅಮರಾವತಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
ಅಮರಾವತಿಗೆ ಹೊಂದಿಕೊಂಡಿರುವ ತದೆಪಲ್ಲಿಯಲ್ಲಿ ಸುಮಾರು ಒಂದು ಎಕರೆ ಜಾಗದಲ್ಲಿ ಬೃಹತ್ ಮನೆ ಹಾಗೂ ಮುಖ್ಯಮಂತ್ರಿ ಕಚೇರಿಯನ್ನು ಜಗನ್ ನಿರ್ಮಿಸಿದ್ದು, ಮೇ 23ರಂದು ಹೊರಬೀಳಲಿರುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣಾ ಫಲಿತಾಂಶಕ್ಕೆ ಎರಡ ದಿನ ಇರುವಾಗಲೇ ಹೊಸ ಮನೆಗೆ ತೆರಳಲಿದ್ದಾರೆ.
ಒಂದು ವೇಳೆ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದರೆ ತಮ್ಮ ನಿವಾಸವನ್ನೇ ಮುಖ್ಯಮಂತ್ರಿ ಕಚೇರಿಯನ್ನಾಗಿ ಪರಿವರ್ತಿಸಲಿದ್ದಾರೆ. ಜಗನ್ ಅವರು ಸದ್ಯ ಹೈದರಾಬಾದ್ನಲ್ಲಿರುವ ಬಂಜಾರಾ ಹಿಲ್ಸ್ನಲ್ಲಿರುವ ಲೋಟಸ್ ಪೊಂಡ್ ನಿವಾಸದಲ್ಲಿ ತಮ್ಮ ಪಕ್ಷದ ಕಚೇರಿಯನ್ನೂ ನಿರ್ವಹಿಸುತ್ತಿದ್ದಾರೆ.