ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಹಾಗೂ, ದೇವೇಗೌಡರ ಪರಮಾಪ್ತ ಜೆಡಿಎಸ್ ತೊರೆದಿರುವ ಹಿಂದಿನ ಲೆಕ್ಕಚಾರವೇ ಬೇರೆ ಇದೆ. ಈ ಬಗ್ಗೆ ಕುಮಾರಸ್ವಾಮಿ ಅವರೇ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು, (ಮಾ.16): ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ದಿಢೀರ್ ಜೆಡಿಎಸ್ಗೆ ಗುಡ್ ಬೈ ಹೇಳಿ ಬಿಎಸ್ಪಿ ಸೇರಿದ್ದಾರೆ. ದಶಕಗಳಿಂದ ಜೆಡಿಎಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಬೇಸರ ಅವರಲ್ಲಿತ್ತು ಎನ್ನಲಾಗಿದೆ.
ಇದೇ ಕಾರಣಕ್ಕೀಗ ಪಕ್ಷ ತೊರೆದು ಮಾಯಾವತಿಯವರ ಬಿಎಸ್ಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಂಚಾಲಕರೂ ಆಗಿದ್ದ ಡ್ಯಾನಿಶ್, ದೇವೇಗೌಡರ ಪರಮಾಪ್ತ ಕೂಡಾ ಆಗಿದ್ದರು.
ಆದ್ರೆ ಕುಮಾರಸ್ವಾಮಿ ಅವರ ಟ್ವೀಟ್ ಮಾಡಿರುವುದನ್ನು ಗಮನಿಸಿದ್ರೆ ದೇವೇಗೌಡ್ರ ಸಮ್ಮತಿ ಮೇರೆಗೆ ಡ್ಯಾನಿಶ್ ಬಿಎಸ್ಪಿ ಸೇರಿದ್ದಾರೆ ಎನ್ನುವ ಅರ್ಥ ಕಲ್ಪಿಸುತ್ತಿದೆ.
'ಡ್ಯಾನಿಶ್ ಅಲಿ ಬಿಎಸ್ಪಿ ಸೇರ್ಪಡೆಯಾಗಿದ್ದಾರೆ. ಬಿಎಸ್ಪಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿದರೆ ಡ್ಯಾನಿಶ್ ಅಲಿ ಗೆಲುವು ಸಾಧಿಸಬಹುದು.
ಅದರ ಜತೆಗೆ ಬಿಎಸ್ಪಿ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಬಾಂಧವ್ಯವೂ ಬೆಳೆಯಲಿದೆ' ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದ್ರೆ ಇದು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
