ನಿಖಿಲ್ ಸೋಲಿಸಿ ನನ್ನ ಮುಗಿಸಲು ಯತ್ನ: ಕುಮಾರಸ್ವಾಮಿ
ನಿಖಿಲ್ ಸೋಲಿಸಿ ನನ್ನ ಮುಗಿಸಲು ಯತ್ನ| ಬೆನ್ನಿಗೆ ಚೂರಿ ಹಾಕೋರ ಬಗ್ಗೆ ಮಾತಾಡಿದ್ದೆನೆ, ಚೆಲುವರಾಯ ಕುರಿತು ಅಲ್ಲ: ಸಿಎಂ
ಮಂಗಳೂರು[ಏ.08]: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ನನ್ನನ್ನು ಮುಗಿಸುವ ಪಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿ, ಕಾರ್ಕಳ, ಮಂಗಳೂರಿನಲ್ಲಿ ಮೈತ್ರಿ ಪ್ರಚಾರ ಸಭೆ ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ರಾಜಕಾರಣದ ಬಗ್ಗೆ ಮಾತನಾಡಿದರು.
ಮಂಡ್ಯದಲ್ಲಿ ಯಾರಾರಯರು ಏನೇನು ಮಾಡುತ್ತಾರೆ ಎಂಬುದು ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದಲೂ ಎಲ್ಲವೂ ನಡೆಯುತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದ ಕೂಡಲೇ ರಾಜಕೀಯ ಆರಂಭವಾಗಿದ್ದು ಅಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಮಗೆ ಮಂಡ್ಯದಲ್ಲಿ ಸ್ಟ್ರಾಟಜಿ ಮೂಲಕ ಚುನಾವಣೆ ಎದುರಿಸುವ ಅಗತ್ಯ ಇಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ. ಅಲ್ಲಿನ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ಡ್ರಾಮಾವೂ ಅಲ್ಲಿ ನಡೆಯುವುದಿಲ್ಲ. ಮಂಡ್ಯ ಮಾತ್ರವಲ್ಲ ಮೈಸೂರಲ್ಲೂ ಮೈತ್ರಿ ಅಭ್ಯರ್ಥಿ ಸೋಲಲು ಬಿಡುವುದಿಲ್ಲ. ರಾಜ್ಯದಲ್ಲಿ ಎಲ್ಲೂ ಗೊಂದಲ ಆಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನಾನು ಅವರ ಬಗ್ಗೆ ಮಾತೇ ಆಡಿಲ್ಲ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ ಎಂದು ಉತ್ತರಿಸಿದರು.
ಮಾಧ್ಯಮಗಳ ವಿರುದ್ಧ ಆಕ್ರೋಶ:
ಇದೇ ವೇಳೆ ಮಾಧ್ಯಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಮಾಧ್ಯಮಗಳಿಗೆ ಎಥಿP್ಸ… ಇದೆಯಾ ಎಂದು ಪ್ರಶ್ನಿಸಿದರು. ಮಂಡ್ಯದಲ್ಲಿ ಚುನಾವಣೆ ಗೆಲ್ಲೋ ಬಗ್ಗೆ ಮಾಧ್ಯಮದವರಿಗೆ ಸಂಶಯವಿರಬಹುದು, ನನಗಿಲ್ಲ. ಮಾಧ್ಯಮ ವ್ಯವಸ್ಥಾಪಕರು ನನ್ನ ಮೇಲೆ ಯಾಕೆ ಕೋಪ ಮಾಡಿದ್ದಾರೆ ಗೊತ್ತಿಲ್ಲ. ನನ್ನ ವಿರುದ್ಧವಾಗಿ ತೋರಿಸ್ತಿದ್ದಾರೆ. ಮಂಡ್ಯದ ಬಗ್ಗೆ ನನ್ನ ಹೇಳಿಕೆ ಒಂದೆಡೆ ಹಾಕಿದ್ರೆ, ಮತ್ತೊಂದೆಡೆ ಬೇರೆ ಹಾಕ್ತಾರೆ. ದೇಶದಲ್ಲಿ ಚುನಾವಣೆಯು ಮಂಡ್ಯದಲ್ಲಿ ಮಾತ್ರ ನಡೆಯುತ್ತಿರುವಂತೆ ಆಡ್ತಿದ್ದಾರೆ. ನಮ್ಮ ಶಾಸಕರು ಮಂಡ್ಯದಲ್ಲಿ ಇದ್ದಾರೆ. ಅವರು ಬೇರೆಡೆ ಹೋಗಿ ಪ್ರಚಾರ ಮಾಡೋದಕ್ಕಾಗುತ್ತಾ? ನನಗೆ ಸಾಕಷ್ಟುರೀತಿ ಟಾರ್ಚರ್ ಮಾಡಿದ್ದೀರಿ. ಮೈತ್ರಿ ಸರ್ಕಾರ ರಚನೆಯಾದ ದಿನದಿಂದ ಹಿಂಸೆ ನೀಡಿದ್ದೀರಿ. ನಿಮ್ಮ ಹಿಂಸೆಯ ಮಟ್ಟವನ್ನು 9 ತಿಂಗಳ ಘಟನೆಗಳನ್ನು ರಿವೈಂಡ್ ಮಾಡಿ ನೋಡ್ಕೊಳ್ಳಿ ಎಂದರು.
ಆಯುಷ್ಮಾನ್ ಭಾರತಕ್ಕೆ 950 ಕೋಟಿ ರಾಜ್ಯ ಸರ್ಕಾರ ನೀಡಿದೆ. ಕೇಂದ್ರದ ಕೊಡುಗೆ ಕೇವಲ 350 ಕೋಟಿ. ಆದರೆ ಯೋಜನೆಯಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಪ್ರಕಟಿಸಲಾಗಿದೆ. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಒಂಬತ್ತು ತಿಂಗಳಿಂದ ಕಿರುಕುಳ:
ಸರ್ಕಾರ ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಎಂದು ಗಡುವುಗಳನ್ನು ನೀಡಿ ನನಗೆ ಸಾಕಷ್ಟುಕಿರುಕುಳ ನೀಡಲಾಗುತ್ತಿದೆ ಎಂದು ವಿಪಕ್ಷ ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು. ಕಳೆದ ಒಂಭತ್ತೂವರೆ ತಿಂಗಳಿನಲ್ಲಿ ನಾನು ಮಾಡಿದ ಒಳ್ಳೆ ಕೆಲಸಗಳ ಬಗ್ಗೆ ಪ್ರಚಾರ ಅಂತೂ ದೊರಕಿಲ್ಲ. ನೋವುಗಳ ಮೇಲೆ ನೋವುಗಳನ್ನು ಕಟ್ಟಿಕೊಂಡು, ಒಂದು ದಿನವೂ ನೆಮ್ಮದಿಯಿಂದ ಆಡಳಿತ ಮಾಡಲು ವಿಪಕ್ಷದವರು ಬಿಟ್ಟಿಲ್ಲ ಎಂದರು.