‘ಲೋಕ ಸಮರದಲ್ಲಿ 22 ಸ್ಥಾನ, ಉಪ ಚುನಾವಣೇಲೂ ಗೆಲವು BJPಯದ್ದೇ’
ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಇದೇ ಸಂದರ್ಭದಲ್ಲಿ ಹಲವು ಪಕ್ಷಗಳ ನಾಯಕರಲ್ಲಿ ಗೆಲುವಿನ ವಿಶ್ವಾಸ ಹೆಚ್ಚಿದೆ.
ಚಿಂಚೋಳಿ : ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ವಿವಿಧ ಪಕ್ಷಗಳ ಮುಖಂಡರಲ್ಲಿ ತಮ್ಮದೇ ಗೆಲುವಿನ ವಿಶ್ವಾಸವಿದೆ.
ಇತ್ತ ತೆಲಂಗಾಣದ ತಾಂಡೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ 22 ಸ್ಥಾನ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಚಿಂಚೋಳಿಯಲ್ಲಿ ವಿಧಾನಸಭಾ ಉಪಸಮರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಅವಿನಾಶ್ ಜಾಧವ್ ಗೆಲುವು ನಿಶ್ಚಿತ. ಇನ್ನು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ್ ಖರ್ಗೆ, ಎಚ್.ಡಿ ದೇವೇಗೌಡ , ಕೆ.ಎಚ್.ಮುನಿಯಪ್ಪ ಸೋಲು ಖಚಿತ ಎಂದರು.
ಯಡಿಯೂರಪ್ಪಗೆ ಸಿಎಂ ಪದವಿ ಹುಚ್ಚು ಹಿಡಿದಿದೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಇಂತಹ ಹೇಳಿಕೆಗಳಿಗೆಲ್ಲಾ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ನೂರು ಮಾತನಾಡುತ್ತಾರೆ. ನಾನು ಸಿಎಂ ಆಗುತ್ತೇನೆ ಎಂದೂ ಎಲ್ಲಿಯೂ ಹೇಳಿಕೊಂಡಿಲ್ಲ ಎಂದರು.
ಇನ್ನು ಇದೇ ವೇಳೆ ಸಿಎಂ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿ, ಚಿಂಚೋಳಿ ದತ್ತು ಪಡೆಬ ವಿಚಾರ ಈಗ ಬಂದಿದೆಯಾ. ಒಂದು ವರ್ಷದಿಂದ ಅವರು ಏನು ಮಾಡಿದ್ದಾರೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.