KPCC ಅಮಾನತು ಮಾಡುವುದಾದ್ರೆ ಮಾಡ್ಲಿ, ಬಿಜೆಪಿ ಅಭ್ಯರ್ಥಿ 2 ಲಕ್ಷ ಮತಗಳಿಂದ ಗೆಲ್ತಾರೆ'
ನಾನು ಕೊತ್ತೂರು ಮಂಜು, ಫುಟ್ಪಾತ್ ಮಂಜು ಅಲ್ಲ. ಕೊತ್ತೂರು ಮಂಜು ಏನೆಂದು ಎಲ್ಲರಿಗೂ ಗೊತ್ತಿದೆ. ನಾನು ನ್ಯಾಯ-ನೀತಿ, ಧರ್ಮ ಪಾಲನೆ ಮಾಡುವವನು. ನಾನು ಯಾರಿಗೂ ಮೋಸ ಮಾಡಿಲ್ಲ, ಕೆಟ್ಟದ್ದು ಬಯಸಿಲ್ಲ…ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಈ ಧಾಟಿಯಲ್ಲಿ ತಿರುಗೇಟು ನೀಡಿದ್ದು ಯಾರಿಗೆ ಗೊತ್ತೆ?
ಕೋಲಾರ, (ಮೇ.04): ಕಾಂಗ್ರೆಸ್ ಮಾಜಿ ಶಾಸಕ ಕೊತ್ತೂರು ಮಂಜುನಾಥ ಅವರು ಸ್ವಪಕ್ಷದ ಲೋಕಸಭಾ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಂದು (ಶನಿವಾರ) ಕೋಲಾರದಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ನೋಡಿಕೊಳ್ಳುವೆ ಎಂದಿದ್ದ ಲೋಕಸಭಾ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಚುನಾವಣೆ ಅಂದಾಗ ಯಾರಾದರೂ ಒಬ್ಬರ ಪರ ಕೆಲಸ ಮಾಡಬೇಕು. ಇದಕ್ಕೆ ನೋಡಿಕೊಳ್ತೀನಿ ಅಂದರೆ ನಾವು ನೋಡಿಕೊಳ್ತೀವಿ. ಅವರು ನೋಡಿಕೊಂಡಾದ ಮೇಲೆ ನಾವು ನೋಡಿಕೊಳ್ಳುತ್ತೇವೆ ಎಂದು ಕಿಡಿಕಾರಿದರು.
ಕೆಪಿಸಿಸಿಯಿಂದ ನೀಡಿರುವ ನೋಟಿಸ್ಗೆ ಸಂಬಂಧಿಸಿ ಮಾತನಾಡಿದ ಅವರು, ಅದು ಏನು ಡಿಸಿ-ಎಸಿ ಕೆಲಸ ಅಲ್ಲ. ಅಮಾನತುಗೊಳಿಸುವುದಾದರೆ ಮಾಡಲಿ ಎಂದು ಕಿಡಿಕಾರಿದರು. ಬಿಜೆಪಿ ಅಭ್ಯರ್ಥಿ ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಕಡ್ಡಿ ಮುರಿದಂತೆ ಹೇಳಿದರು.
ಮುನಿಯಪ್ಪ ಹಾಗೂ ಮಂಜುನಾಥ ಒಂದೇ ಪಕ್ಷದವರಾಗಿದ್ದರೂ ಲೋಕಸಭಾ ಚುನಾವಣೆ ಆರಂಭದಿಂದಲೂ ಒಂದು ರೀತಿಯಲ್ಲಿ ಹಾವು ಮುಂಗುಸಿ ತರ ಕಿತ್ತಾಡುತ್ತಿದ್ದಾರೆ.