ಈಶಾನ್ಯ ಗೆದ್ದುಕೊಟ್ಟ ಬಿಸ್ವಾಗೆ ಬಿಜೆಪಿಯಿಂದ ಸಿಕ್ತು ಬಹುದೊಡ್ಡ 'ಆಫರ್'!
ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪಿಸಿದ ಸಚಿವ ಹಿಮಂತಾ ಬಿಸ್ವಾ ಶರ್ಮಾ| ಲೋಕಸಭಾ ಚುನಾವಣೆಗೆ ಬಿಜೆಪಿ ಕೊಡ್ತು ಬಹುಮಾನ!
ಗುವಾಹಟಿ[ಮಾ.17]: ಈಶಾನ್ಯ ಭಾರತ ಹಾಗೂ ವಿಶೇಷವಾಗಿ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಬೇರು ಬಿಡಲು ಕಾರಣೀಭೂತರಾದ ಅಸ್ಸಾಂ ಸಚಿವ ಹಿಮಂತಾ ಬಿಸ್ವಾ ಶರ್ಮಾ ಅವರಿಗೆ ತಮ್ಮಿಷ್ಟದ ದೇಶದ ಯಾವುದೇ ಕ್ಷೇತ್ರದಲ್ಲಿ ಚುನಾವಣಾ ಅಖಾಡಕ್ಕಿಳಿಯುವಂತೆ ಬಿಜೆಪಿ ಆಫರ್ ನೀಡಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ರಂಜೀತ್ ದಾಸ್ ಅವರು, ‘2019ರ ಲೋಕಸಭಾ ಚುನಾವಣೆಯಲ್ಲಿ ಸಚಿವ ಹಿಮಂತಾ ಬಿಸ್ವಾ ಶರ್ಮಾ ಅವರಿಗೆ ದೇಶದ ಯಾವುದೇ ಕ್ಷೇತ್ರದಿಂದಲೂ ಕಣಕ್ಕಿಳಿಯುವಂತೆ ಬಿಜೆಪಿ ಹೈಕಮಾಂಡ್ ನನಗೆ ಸೂಚಿಸಿದೆ. ಈ ಸಂದರ್ಭದಲ್ಲಿ ಇದೊಂದು ಒಳ್ಳೇಯ ನಿರ್ಧಾರ. ಆದರೆ, ಬಿಸ್ವಾ ಅವರಿಗೆ ಅಸ್ಸಾಂನಿಂದಲೇ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದೇನೆ,’ ಎಂದರು.
ಏತನ್ಮಧ್ಯೆ, ಬಿಸ್ವಾ ಅವರು ತೇಜ್ಪುರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಲಿದ್ದಾರೆ. ಆದಾಗ್ಯೂ, ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್ ಶಾ ಅವರಿಂದ ಘೋಷಣೆಯಾಗುವುದಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.