ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಾಲಯ ಉದ್ಘಾಟನೆ| ಪೂಜೆ ಮಾಡುವ ಕಚೇರಿ ಉದ್ಘಾಟಿಸಿದ ಬಿಜೆಪಿ ನಾಯಕರು| ಕಾರ್ಯಾಲಯ ಉದ್ಘಾಟನೆಗೆ ಬಸನಗೌಡ ಪಾಟೀಲ ಯತ್ನಾಳ ಅವರಿಗಿಲ್ಲ ಆಹ್ವಾನ| ಯತ್ನಾಳ ಬಗ್ಗೆ ಪ್ರಶ್ನೆ ಕೇಳದಂತೆ ರಮೇಶ ಜಿಗಜಿಣಗಿ ಮನವಿ| ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ರಮೇಶ ಜಿಗಜಿಣಗಿ|

ವಿಜಯಪುರ(ಮಾ.28): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಾಲಯವನ್ನು ಉದ್ಘಾಟಿಸಲಾಗಿದೆ. ಪೂಜೆಯ ಮೂಲಕ ಕಾರ್ಯಾಲಯ ಉದ್ಘಾಟನೆ ಮಾಡಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೆಳೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಶಾಸಕರಾದಾ ಎ.ಎಸ್.ಪಾಟೀಲ್ ನಡಹಳ್ಳಿ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.

ಆದರೆ ಶಾಸಕ, ಬಿಜೆಪಿ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪಕ್ಷದ ಕಚೇರಿ ಉದ್ಘಾಟನೆಗೆ ಆಹ್ವಾನ ನೀಡದಿರುವುದು ಕುತೂಹಲ ಕೆರಳಿಸಿದೆ.

ಕಚೇರಿ ಉದ್ಘಾಟನೆ ಬಳಿಕ ಪತ್ರಕಾಗೋಷ್ಠಿ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ನನ್ನ ಮುಖ ನೋಡಿ ಮತ ನೀಡುವುದಕ್ಕಿಂತ ಮೋದಿ ಮುಖ ನೋಡಿ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿಯ ಕಾರ್ಯಕರ್ತರೇ ಮನೆಮನೆಗೆ ತಲುಪಿಸಲಿದ್ದು, ಈ ಬಾರಿ ತಮ್ಮ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಆಹ್ವಾನ ನೀಡದಿರುವ ಕುರಿತು ಕೇಳಿದ ಪ್ರಶ್ನೆಗೆ ವಿಚಲಿತರಾದ ರಮೇಶ ಜಿಗಜಿಣಗಿ, ನಿಮ್ಮ ಕಾಲು ಬೀಳ್ತಿನಿ ಅವರ ಕುರಿತು ಪ್ರಶ್ನೆ ಕೇಳಬೇಡಿ ಎಂದು ಪ್ರತಿಕ್ರಿಯಿಸಿದರು.

'ನಾನು ಅವರನ್ನು ಕರೆಯುವುದಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಪಕ್ಷದ ಕುರಿತು ಅಭಿಮಾನವಿದ್ದರೆ ಅವರೇ ಬರುತ್ತಾರೆ..'ಎಂದು ಜಿಗಜಿಣಗಿ ಮಾರ್ಮಿಕವಾಗಿ ನುಡಿದರು.

ಇದೇ ವೇಳೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 300 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ ರಮೇಶ, ಇದೇ ಏ.೨ರಂದು ತಾವು ನಾಮಪತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿದರು.