'ರಾಹುಲ್ ಗಾಂಧಿ ಬಿಜೆಪಿಯ ಸ್ಟಾರ್ ಕ್ಯಾಂಪೇನರ್, ದಾಖಲೆ ಬೇಕಾ?'
ಸಿಎಂ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮೇಲೆ ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ವಾಗ್ದಾಳಿ ಮಾಡಿದ್ದಾರೆ.
ಬೆಳಗಾವಿ(ಏ. 19) ಮೂರು ವಿಷಯ ಮುಂದಿಟ್ಟುಕೊಂಡು ಈ ಸಲ ಬಿಜೆಪಿ ಚುನಾವಣೆ ಎದುರಿಸುತ್ತಿದೆ. ಮೋದಿ ಸರ್ಕಾರದ ಸಾಧನೆ, ರಾಜ್ಯದ ಮೈತ್ರಿ ಸರ್ಕಾರದ ವೈಫಲ್ಯ, ಬಿಜೆಪಿ ಸಂಘಟನೆ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ. ಮೋದಿ ಅಲೆಗೆ ಎಚ್ಡಿಕೆ, ಸಿದ್ದರಾಮಯ್ಯ ನಿರಸನಗೊಂಡಿದ್ದಾರೆ ಎಂದು ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.
ಮೈತ್ರಿ ಪಕ್ಷಗಳ ಕಾರ್ಯಕರ್ತರೂ ಮೋದಿ ಹೆಸರು ಜಪಿಸುತ್ತಿದ್ದಾರೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಕೊಟ್ಟ ಅನುದಾನ ಯುಪಿಎ ಅವಧಿಯಲ್ಲಿ ಬಿಡುಗಡೆ ಆದ ಅನುದಾನ ಬಗ್ಗೆ ಶ್ವೇತಪತ್ರ ಹೊರಡಿಸಬೇಕಲು. ಇಲ್ಲವಾದರೆ ಸುಳ್ಳು ಆರೋಪ ಮಾಡುತ್ತಿರುವ ನಿಮ್ಮ ವಿರುದ್ಧ ಕರಾಳ ಪತ್ರ ಹಂಚಬೇಕಾಗುತ್ತದೆ ಎಂದರು.
ಅಮೃತ ಯೋಜನೆ, ಮೆಟ್ರೊ ಯೋಜನೆ, ಕುಡಿಯುವ ನೀರಿಗೆ, ಹೆದ್ದಾರಿ ಅಭಿವೃದ್ಧಿಗೆ ನೀರಾವರಿ ಯೋಜನೆಗೆ, ಸ್ವಚ್ಛ ಭಾರತ ಮಿಷನ್ ಗೆ ಸೇರಿದಂತೆ ಲಕ್ಷಾಂತರ ಕೋಟಿ ರಾಜ್ಯಕ್ಕೆ ಅನುದಾನ ಬಂದಿದೆ ಬೇಕಾದರೆ ಶ್ವೇತ ಪತ್ರ ಹೊರಡಿಸಿ ಎಂದು ಸವಾಲು ಹಾಕಿದರು.
ಲೋಕ ಸಮರಕ್ಕೂ ಮುನ್ನವೇ ಬೆಳಗಾವಿಯಲ್ಲಿ ರಾಜಕಾರಣದ ದಂಗಲ್
ಮೈತ್ರಿ ಸರ್ಕಾರ ದುರಾಡಳಿತಕ್ಕೆ ರಾಜ್ಯದ ಜನತೆ ಬೇಸತ್ತಿದ್ದಾರೆ. ರಾಹುಲ್ ಪ್ರಧಾನಿಗೆ ಸೂಕ್ತವಲ್ಲ ಎಂದು ಮೈತ್ರಿ ಪಕ್ಷದವರೇ ಆಡುತ್ತಿದ್ದಾರೆ. ರಾಹುಲ್ ಸ್ಟಾರ್ ಕ್ಯಾಂಪೇನರ್ ಕಾಂಗ್ರೆಸ್ಸಿಗೆ ಅಲ್ಲ ಬದಲಾಗಿ ಬಿಜೆಪಿಗೆ ಎಂದು ಲಿಂಬಾವಳಿ ವ್ಯಂಗ್ಯವಾಡಿದರು.
ರಾಹುಲ್ ಎಲ್ಲೆಲ್ಲಿ ಪ್ರಚಾರ ನಡೆಸಿದ್ದಾರೋ ಅಲ್ಲೆಲ್ಲಾ ಬಿಜೆಪಿ ಗೆಲ್ಲಲಿದೆ. ಮೊದಲನೇ ಫೇಸ್ ಅಲ್ಲಿ ಪ್ರಚಾರಕ್ಕೆ ಏಕೆ ಕರ್ನಾಟಕಕ್ಕೆ ಬರಲಿಲ್ಲ. ಸುಮಲತಾ ವಿರುದ್ಧ ಇಡೀ ಪಕ್ಷವೇ ನಿಂತಿತ್ತು . ಬಜೆಟ್ ನಲ್ಲಿ ಕರ್ನಾಟಕ ಮರೆತಂತೆ ಪ್ರಚಾರದಲ್ಲಿ ಇಡೀ ಕರ್ನಾಟಕ ಮರೆತಿದ್ದಾರೆ ಎಂದು ಆರೋಪಿಸಿದರು.
ಕಾರ್ಯಕರ್ತರನ್ನು ಉಚ್ಛಾಟನೆ ಮಾಡುವಲ್ಲಿ ಕೆಪಿಸಿಸಿ ಅಧ್ಯಕ್ಷರು ಬ್ಯುಸಿ ಆಗಿದ್ದಾರೆ. ಒಂದು ಕಡೆ ನಾನೇ ಮುಂದಿನ ಸಿಎಂ ಎಂದಿರುವ ಸಿದ್ದರಾಮಯ್ಯ, ಇನ್ನೊಂದು ಕಡೆ ಸಿಎಂ ಎಚ್ಡಿಕೆ ಅಳುತ್ತಿರುವುದು ಯಾವ ಪುರುಷಾರ್ಥಕ್ಕೆ? ನಿಖಿಲ್ ಸೊಲ್ತಿರುವುದಕ್ಕಾ? ದೇವೇಗೌಡ್ರು ಕ್ಷೇತ್ರ ಬದಲಿಸಿದಕ್ಕಾ? ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನರಿಗಾಗಿ ಅತ್ತಿದ್ರೆ ನಾವು ಒಪ್ಪಿಕೊಳ್ಳುತ್ತಿದ್ದೇವು, ಆದ್ರೆ ಕಾಂಗ್ರೆಸ್ ಕಾಟಕ್ಕೆ ಅತ್ತು, ನಾನು ಭಾವನಾತ್ಮಕ ಜೀವಿ ಅಂದ್ರೆ ಹೆಂಗೆ? ಅಳುವುದನ್ನು ನಿಲ್ಲಿಸಿ, ಒಳ್ಳೆಯ ಆಡಳಿಯ ನಡೆಸಲಿ ಎಂದು ಸಲಹೆ ನೀಡಿದರು.