ವಿಶೇಷ ಅಧಿವೇಶನಕ್ಕೆ ಬಿಜೆಪಿ ಆಗ್ರಹ : ಅಧಿಕಾರ ಕಳೆದುಕೊಳ್ಳುತ್ತಾ ಕೈ ಸರ್ಕಾರ ?
ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಫಲಿತಾಂಶಕ್ಕೆ ಇನ್ನೆರಡು ದಿನವಷ್ಟೇ ಬಾಕಿ ಇದೆ. ಇದೇ ವೇಳೆ ಕೈ ಸರ್ಕಾರಕ್ಕೆ ಭಾರಿ ಆತಂಕವೊಂದು ಎದುರಾಗಿದೆ.
ಭೋಪಾಲ್ : ದೇಶದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಹಲವು ಚುನಾವಣೋತ್ತರ ಸಮೀಕ್ಷೆಗಳು NDA ಹೆಚ್ಚಿನ ಬಹುಮತ ಪಡೆಯುವ ಭವಿಷ್ಯ ನುಡಿದಿದೆ.
ಇತ್ತ ಮಧ್ಯ ಪ್ರದೇಶದಲ್ಲಿಯೂ ಕೂಡ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸಮೀಕ್ಷೆಗಳು ಹೇಳಿದ್ದು, ಸದ್ಯ ಇಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಆತಂಕ ಎದುರಾಗಿದೆ.
ಇಲ್ಲಿನ ಕೈ ಸರ್ಕಾರ ಬಹುಮತ ಕಳೆದುಕೊಳ್ಳಲಿದ್ದು, ಈ ನಿಟ್ಟಿನಲ್ಲಿ ವಿಶೇಷ ಅಧಿವೇಶನ ಕರೆಯಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಮಧ್ಯ ಪ್ರದೇಶದ ವಿಪಕ್ಷ ಮುಖಂಡರಾದ ಗೋಪಾಲ್ ಭಾರ್ಗವ್ ಈ ಬಗ್ಗೆ ಗವರ್ನರ್ ಗೆ ಪತ್ರ ಬರೆದಿದ್ದು, ವಿಶೇಷ ಅಧಿವೇಸನವೊಂದನ್ನು ಕರೆಯಬೇಕು. ಯಾಕೆಂದರೆ ರಾಜ್ಯ ಸರ್ಕಾರದ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
2014ರಲ್ಲಿ ನಡೆದ ಚುನಾವಣೋತ್ತರ ಸಮೀಕ್ಷೆಗಳಂತೆ ಫಲಿತಾಂಶ ಬಂದಿತ್ತು. ಈ ಬಾರಿಯೂ ಸಮೀಕ್ಷೆಗಳು ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದಿವೆ. ಕಾಂಗ್ರೆಸ್ ಕೇಲ 2 ರಿಂದ 3 ಸ್ಥಾನ ಪಡೆಯಲಿದೆ ಎಂದಿದ್ದು, ಮತ್ತೆ ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನ ಪಡೆದು ಸರಳ ಬಹುಮತದೊಂದಿಗೆ ಬಹುಜನ ಸಮಾಕ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಬಿಜೆಪಿ 109 ಸ್ಥಾನ ಪಡೆದು ವಿಪಕ್ಷ ಸ್ಥಾನವನ್ನಲಂಕರಿಸಿತ್ತು.
ಇತ್ತ ಕರ್ನಾಟಕದಲ್ಲಿಯೂ ಕೂಡ ಸಮೀಕ್ಷೆಗಳು ನಿಜವಾದಲ್ಲಿ ಅಸ್ತಿತ್ವದಲ್ಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೂ ಸಮಸ್ಯೆ ಎದುರಾಗಬಹುದು ಎನ್ನಲಾಗಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.