ಮೋದಿ ನಡೆಯಿಂದ ಬೇಸತ್ತ ಶ್ರೀಗಳು ಅವರ ವಿರುದ್ಧ ವಾರಾಣಸಿಯಿಂದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ
Add Asianetnews Kannada as a Preferred Source

ವಾರಾಣಸಿ[ಏ.23]: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಾರಾಣಸಿ ಕ್ಷೇತ್ರದಲ್ಲಿ ಮಗದೊಂದು ಸವಾಲು ಎದುರಾಗಿದೆ. ಈಗ ಮೋದಿ ವಿರುದ್ಧವೇ ಅಲ್ಲಿನ ಸ್ವಾಮೀಜಿಗಳು ತೊಡೆತಟ್ಟಿದ್ದು, ಕಾಶಿ ವಿಶ್ವನಾಥ ಧಾಮ(ಕಾರಿಡಾರ್) ಯೋಜನೆಯನ್ನು ವಿರೋಧಿಸಿ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.
ಮೋದಿ ಮಹತ್ವಾಕಾಂಕ್ಷೆಯ ಯೋಜನೆಗಾಗಿ ದೇವಾಲಯಗಳನ್ನು ತೆರವುಗೊಳಿಸಬೇಕಾಗಿ ಬರುತ್ತದೆ ಎಂಬ ಕಾರಣಕ್ಕಾಗಿಯೇ ಇಲ್ಲಿನ ರಾಮರಾಜ್ಯ ಪರಿಷತ್ ಸದಸ್ಯರು ಯೋಜನೆಗೆ ಆಕ್ಷೇಪ ಎತ್ತಿದ್ದು, ಈಗ ಇದೇ ಕಾರಣವನ್ನೇ ಮುಂದಿಟ್ಟುಕೊಂಡು ಮೋದಿ ವಿರುದ್ಧ ಲೋಕಸಭಾ ಚುನಾವಣಾ ಅಖಾಡಕ್ಕೆ ತಮ್ಮದೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ.
ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ನೇತೃತ್ವದಲ್ಲಿ ಶಂಕರಾಚಾರ್ಯರ ಪೀಠಕ್ಕೆ ಸೇರಿದ ಜ್ಯೋತಿಷ್ಯ ಮತ್ತು ಶಾರದಾ ದ್ವಾರಕಾಪೀಠ ಸ್ವಾಮಿ ಸ್ವರೂಪಾನಂದ ಸರಸ್ವತಿ ಉಪಸ್ಥಿತಿಯಲ್ಲಿ ಭಾನುವಾರ ನಡೆದ ಅಖಿಲ ಭಾರತೀಯ ರಾಮರಾಜ್ಯ ಪರಿಷತ್ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
