'ವಿಪಕ್ಷಗಳು ಪಿಎಂ ಅಭ್ಯರ್ಥಿ ಘೋಷಿಸಲಿ ಆಗ ಬೆತ್ತಲಾಗುವೆ'
ವಿಪಕ್ಷಗಳು ಪಿಎಂ ಅಭ್ಯರ್ಥಿ ಘೋಷಿಸಲಿ ಆಗ ಬೆತ್ತಲಾಗುವೆ ಎನ್ನುವ ಮೂಲಕ ಸವಾಲೆಸೆದಿದ್ದಾರೆ.
ಮುಂಡಗೋಡ[ಏ.15]: ಮಹಾಗಠಬಂಧನ ನಾಯಕರಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳುವ ಯೋಗ್ಯತೆ ಇಲ್ಲ. ಮೋದಿ ಹಟಾವೋ ಎಂದು ಘೋಷಿಸುತ್ತಿರುವವರಿಗೆ ನಾಚಿಕೆಯಾಗಬೇಕು, ಮಹಾಗಠಬಂಧನದಲ್ಲಿರುವ ಯಾವುದಾದರೂ ಒಂದು ಪಕ್ಷದ ನಾಯಕರು ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ. ನಾನು ಅವರ ಮುಂದೆ ಬೆತ್ತಲೆಯಾಗಿ ನಿಲ್ಲುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಸವಾಲು ಹಾಕಿದರು.
ತಾಲೂಕಿನ ಹುನಗುಂದ ಹಾಗೂ ಚಿಗಳ್ಳಿಯಲ್ಲಿ ಭಾನುವಾರ ಮಾತನಾಡಿ, ಈ ಬಾರಿ ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಮತ ಹಾಕಲು ಮತ ಯಂತ್ರದಲ್ಲಿ ಕೈನೇ ಇಲ್ಲದಂತಾಗಿದೆ. ಮೇ 23ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಅಂದೇ ವಿರೋಧಿಗಳ ಸಾಮೂಹಿಕ ಸಮಾರಾಧನೆ ನಡೆಯಲಿದೆ. ದೇವೇಗೌಡ, ಅಖಿಲೇಶ್ ಯಾದವ್, ರಾಹುಲ್, ಮಮತಾ ಬ್ಯಾನರ್ಜಿ, ಮಾಯಾವತಿ ಹೀಗೆ ಎಲ್ಲ ಮಹಾಗಠಬಂಧನ ನಾಯಕರ ವಿಸರ್ಜನೆ ನಡೆಯಲಿದೆ ಎಂದರು.
ಇದು ಬಿಜೆಪಿ ಮಾಡಿದ್ದಲ್ಲ. ಬದಲಾಗಿ ತಾವೇ ಸ್ವಯಂಪ್ರೇರಿತವಾಗಿ ಮಾಡಿಕೊಂಡಿರುವುದು, 60 ವರ್ಷದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಅವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಇಂದು ಮೋದಿ ಹವಾ ಕೂಡ ಇರುತ್ತಿರಲಿಲ್ಲ. ಮೈತ್ರಿ ನಾಯಕರು ಅವರವರೇ ಹೊಡೆದಾಡಿಕೊಂಡು ಸೋತು ಹೋಗುತ್ತಾರೆ. 60 ವರ್ಷ ದೇಶಕ್ಕೆ ಮಾಡಿದ ಅನ್ಯಾಯದ ಶಿಕ್ಷೆಯೇ ಇದಾಗಲಿದೆ ಎಂದರು.