ಲೋಕಸಭಾ ಚುನಾವಣೆ ಬೆನ್ನಲ್ಲೇ ಕೈ ಸೇರಿದ 20 ಮುಖಂಡರು
ಲೋಕಸಭಾ ಚುನಾವಣೆ ದೇಶದಲ್ಲಿ ಈಗಾಗಲೇ ಆರಂಭವಾಗಿದ್ದು, ಇದೇ ವೇಳೆ ಕಾಂಗ್ರೆಸ್ ಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ. ಒಟ್ಟು 20 ವಿವಿಧ ಪಕ್ಷಗಳ ಮುಖಂಡರು ಪಕ್ಷ ಸೇರಿದ್ದಾರೆ.
ನವದೆಹಲಿ : ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿರುವ ಬೆನ್ನಲ್ಲೆ ದೇಶದ ವಿವಿಧ ಪಕ್ಷಗಳಲ್ಲಿ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ.
ಈಗಾಗಲೇ ದೇಶದಲ್ಲಿ ಲೋಕಸಭಾ ಚುನಾವಣಾ ಸಮರ ಆರಂಭವಾಗಿದೆ. ಇತ್ತ ದಿಲ್ಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಪಕ್ಷದ 20 ಮುಖಂಡರು ಕಾಂಗ್ರೆಸ್ ಸೇರಿದ್ದಾರೆ.
ಆಮ್ ಆದ್ಮಿ ಹಾಗೂ ಬಹುಜನ ಸಮಾಜವಾದಿ ಪಕ್ಷದ 20 ಮುಖಂಡರು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಪಕ್ಷಕ್ಕೆ ವಿವಿಧ ಪಕ್ಷಗಳ ಮುಖಂಡರನ್ನು ಬರಮಾಡಿಕೊಂಡು ಮಾತನಾಡಿದ ಶೀಲಾ ದೀಕ್ಷಿತ್ ಇವರೆಲ್ಲರೂ ಕಾಂಗ್ರೆಸ್ ಕುಟುಂಬದ ಹೊಸ ಸದಸ್ಯರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಉನ್ನತ ಸ್ಥರಕ್ಕೆ ಏರಲು ಸಹಕರಿಸೋಣ ಎಂದಿದ್ದಾರೆ.
ಇನ್ನು ಪಕ್ಷ ಸೇರಿದ ಬಳಿಕ ಮಾತನಾಡಿರುವ ಮುಖಂಡರು ಕಾಂಗ್ರೆಸ್ ಬಡವರಿಗಾಗಿ ಸಾಕಷ್ಟು ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದೆ. ನಾವೆಲ್ಲರೂ ಕೂಡ ಬಯಸುವುದು ಇದನ್ನೇ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೈ ಹಿಡಿದಿರುವುದಾಗಿ ಹೇಳಿದ್ದಾರೆ.