* ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಹಿಜಾಬ್‌ ಪ್ರಕರಣ ಸುಖಾಂತ್ಯ* ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದ ತೀರ್ಪು ಕೊಟ್ಟ ಕೋರ್ಟ್* ಕೋರ್ಟ್​ ತೀರ್ಪು ಪಾಲಿಸಲ್ಲ ಎಂದ ವಿದ್ಯಾರ್ಥಿನಿಯರು

ಉಡುಪಿ, (ಮಾ.15): ಭಾರಿ ವಿವಾದಕ್ಕೆ ಕಾರಣವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಹಿಜಾಬ್‌ ಪ್ರಕರಣಕ್ಕೆ (Hijab Row) ಸಂಬಂಧಿಸಿದಂತೆ ಹೈಕೋರ್ಟ್‌ ಇಂದು (ಮಂಗಳವಾರ) ಬೆಳಗ್ಗೆ ತೀರ್ಪು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದಿದೆ. ಅಲ್ಲದೇ ಶಾಲೆಗೆ ಕೇಸರಿ ಶಾಲು, ಹಿಜಾಬ್ ಆಗಲಿ ಯಾವುದೂ ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸರ್ಕಾರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶವನ್ನು ಕೋರ್ಟ್‌ ಎತ್ತಿ ಹಿಡಿದಿದೆ (Karnataka Hijab Verdict).

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ಶಾಲಾ-ಕಾಲೇಜುಗಳಿಗೆ (Schools And Colleges)ಹಿಜಾಬ್​ ಧರಿಸಿಕೊಂಡು ಹೋಗಲು ಅವಕಾಶ ಕೊಡಬೇಕು ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದ ಉಡುಪಿ (Udupi) ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 6 ಮುಸ್ಲಿಂ ವಿದ್ಯಾರ್ಥಿನಿಯರು (Muslim Students) ಸುದ್ದಿಗೋಷ್ಠಿ ನಡೆಸಿದ್ದು, ಅವರ ಅಭಿಪ್ರಾಯಗಳು ಈ ಕೆಳಗಿನಂತಿವೆ.

Karnataka Hijab Verdict ನಮಗೆ ಹಿಜಾಬ್ ಮುಖ್ಯ, ಪರೀಕ್ಷೆ ಅಲ್ಲ ಎಂದು ಎಕ್ಸಾಂ ಬಿಟ್ಟು ಹೊರನಡೆದ ಬಾಲಕಿಯರು!

ಹಿಜಾಬ್​ ಇಲ್ಲದೆ ಕಾಲೇಜಿಗೆ ಹೋಗೋದಿಲ್ಲ. ಕುರಾನ್​ ಹೇಳಿದ್ದೇ ನಮಗೆ ಫೈನಲ್​. ನಮ್ಮ ಹಕ್ಕು ಪಡೆಯೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಎಂದು ವಿದ್ಯಾರ್ಥಿನಿಯರು ಸ್ಪಷ್ಟಪಡಿಸಿದರು.

ಹಿಜಾಬ್ ಪರ ಹೋರಾಟಗಾರ್ತಿ ಆಲಿಯಾ ಅಸಾದಿ ಮಾತನಾಡಿ, ನಮಗೆ ಕೋರ್ಟ್​ನಲ್ಲಿ ನ್ಯಾಯ ಸಿಗುವ ಭರವಸೆ ಇತ್ತು. ಆದರೆ ನಮ್ಮ ವಿರುದ್ಧ ತೀರ್ಪು ಬಂದಿದೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್​ ಇಲ್ಲದೆ ಕಾಲೇಜಿಗೆ ಬರಲ್ಲ. ಹೆಣ್ಣುಮುಕ್ಕಳು ಮನೆಯಿಂದ ಹೊರಬರುವಾಗ ತಲೆ-ಎದೆಭಾಗವನ್ನು ಮುಚ್ಚಬೇಕು ಎಂದು ಕುರಾನ್​ನಲ್ಲಿ ಬರೆದಿದೆ ಎಂದರು.

Hijab Row: ಕೋರ್ಟ್‌ ತಲುಪಿದ 6 ವಿದ್ಯಾರ್ಥಿಗಳಿಗೆ ಶಾಸಕ ರಘುಪತಿ ಭಟ್ ಅಚ್ಚರಿಯ ಮನವಿ!

 ಕುರಾನ್​ ಹೇಳಿದ ಮೇಲೆ ನಮಗೆ ಅದೇ ಫೈನಲ್, ಅದೇ ನಮ್ಮ ಸಂವಿಧಾನ. ನಮ್ಮ ಹಕ್ಕು ಪಡೆಯೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ. ನಮಗೆ ಹಿಜಾಬ್​ ಅತ್ಯವಶ್ಯಕ. ಅದಕ್ಕಾಗಿಯೇ ಈ ಹೋರಾಟ. ರಾಜಕೀಯ ಉದ್ದೇಶಕ್ಕಾಗಿ ಇದನ್ನು ದೊಡ್ಡದು ಮಾಡಲಾಯಿತು. ಕಾಲೇಜಿನ ಕಾಂಪೌಂಡಿನ ಒಳಗೆ ಈ ಸಮಸ್ಯೆಯನ್ನ ಬಗೆಹರಿಸಬಹುದಿತ್ತು ಎಂದು ಹೇಳಿದರು.

ಕಾಲೇಜಿಗೆ ಗೈರಾಗಿದ್ದರೂ ಪರೀಕ್ಷೆಗೆ ಸಿದ್ಧತೆ ನಡೆಸಿದ್ದೇವೆ. ನಾವು ಹಿಜಾಬ್​ ತೆಗೆಯುವುದಿಲ್ಲ, ನಮಗೆ ಶಿಕ್ಷಣ ಕೂಡ ಮುಖ್ಯ. ಸರ್ಕಾರ ಕೋರ್ಟ್ ಮೇಲೆ ಒತ್ತಡ ಹಾಕಿದೆ. ಒತ್ತಡ ಇದ್ದದ್ದಕ್ಕೆ ಇಂದು ಹಿಜಾಬ್ ವಿರುದ್ಧ ತೀರ್ಪು ಬಂದಿದೆ. ಇದು ಅಸಂವಿಧಾನಿಕವಾದ ತೀರ್ಪು ಎಂದು ಆಲಿಯಾ ಅಸಾದಿ ಆರೋಪಿಸಿದರು.

ಇನ್ನು ವಿದ್ಯಾರ್ಥಿನಿ ಅಲ್ಮಾಸ್ ಮಾತನಾಡಿ, ನಮಗಿಲ್ಲಿ ನ್ಯಾಯ ಇಲ್ಲ ಅನ್ನಿಸುತ್ತಿದೆ. ಎರಡು ತಿಂಗಳು ಸಮಸ್ಯೆ ಅನುಭವಿಸಿದೆವು. ನಮ್ಮನ್ನು ಬೇರೆಯೇ ರೀತಿಯಲ್ಲಿ ನೋಡುತ್ತಿದ್ದಾರೆ. ನಾವು ಡಿಸಿ, ಡಿಡಿಪಿಐ ಭೇಟಿ ಮಾಡಿದರೂ ನ್ಯಾಯ ಸಿಗಲಿಲ್ಲ. ನಮಗೆ ನಮ್ಮ ನ್ಯಾಯ ಸಿಗಲಿಲ್ಲ. ನಾವು ಜಾತ್ಯಾತೀತ ದೇಶದಲ್ಲಿದ್ದೇವೆ. ಎಲ್ಲಾ ಧರ್ಮಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದರು.

6 ವಿದ್ಯಾರ್ಥಿಗಳಿಗೆ ಶಾಸಕ ರಘುಪತಿ ಭಟ್ ಮನವಿ
ರಾಜ್ಯ ಸರ್ಕಾರ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವಂತೆ ನೀಡಿರುವ ಆದೇಶ ಕಾನೂನು ಬಧ್ಧವಾಗಿದೆ ಎಂದಿರುವ ತ್ರಿಸದಸ್ಯ ಪೀಠ, ತರಗತಿಗಳಿಗೆ ಹಿಜಾಬ್, ಕೇಸರಿ ಶಾಲು ಹೀಗೆ ಯಾವುದೂ ಧರಿಸಲು ಅವಕಾಶ ಇಲ್ಲ ಎಂದಿದೆ. ಅಲ್ಲದೇ ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದೂ ಉಲ್ಲೇಖಿಸಿದೆ. ಹೀಗಿರುವಾಗ ಈ ವಿವಾದ ಆರಂಭವಾಗಿದ್ದ ಜಿಲ್ಲೆ, ಉಡುಪಿಯ ಶಾಸಕ ರಘುಪತಿ ಭಟ್ ಕೋರ್ಟ್‌ ಮೆಟ್ಟಿಲೇರಿದ ವಿದ್ಯಾರ್ಥಿಗಳಿಗೆ ಮಹತ್ವದ ಸಂದೇಶ ನೀಡಿದ್ದಾರೆ.

ಹೌದು ಸುವರ್ಣ ನ್ಯೂಸ್ ಮೂಲಕ ಶಾಸಕ ರಘುಪತಿ ಭಟ್ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿದ ಆರು ವಿದ್ಯಾರ್ಥಿಗಳ ಬಳಿ ಅಚ್ಚರಿಯ ಮನವಿ ಮಾಡಿಕೊಂಡಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿಯರ ಬಗ್ಗೆ ಕಹಿ ಇಲ್ಲ. ನಾಳೆಯಿಂದ ಎಂದಿನಂತೆ ನೀವೆಲ್ಲ ಕಾಲೇಜಿಗೆ ಬನ್ನಿ. ಮತಾಂಧ ಶಕ್ತಿಗಳ ಮಾತಿಗೆ ನೀವೆಲ್ಲ ಬಲಿಯಾಗಬೇಡಿ. ಹೈಕೋರ್ಟ್ ಆದೇಶವನ್ನು ಪಾಲಿಸಿ, ಕಾಲೇಜಿಗೆ ಬನ್ನಿ ಎಂದಿದ್ದಾರೆ.