*  ಮೀನುಗಾರರಿಗೆ ವಿದ್ಯಾಸಿರಿ ಜೊತೆ ಮತ್ಸ್ಯಸಿರಿ*  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಬ್ರಹ್ಮಕಲಶ ಪುಣ್ಯೋತ್ಸವದಲ್ಲಿ ಸಿಎಂ ಭಾಗಿ*  ಮತ್ಸ್ಯಾಶ್ರಯ ಗೃಹ ನಿರ್ಮಾಣ  

ಉಡುಪಿ(ಏ.12): ರಾಜ್ಯದ ಮೀನುಗಾರ ಸಮುದಾಯದವರಿಗೂ ವಿದ್ಯಾ ಸಿರಿ ಯೋಜನೆ(Vidya Siri Project) ವಿಸ್ತರಿಸುವುದರ ಜೊತೆಗೆ ಹೊಸದಾಗಿ ಮತ್ಸ್ಯ ಸಿರಿ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದಾರೆ. ಕಾಪು ತಾಲೂಕು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಬ್ರಹ್ಮಕಲಶ ಪುಣ್ಯೋತ್ಸವದ ಸಭೆಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ರೈತರ(Farmers) ಮಕ್ಕಳಿಗೆ 8 ನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣವರೆಗೆ ಈ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ವೇತನ(Scholarships) ನೀಡಲಾಗುತಿದ್ದು, ಇನ್ನು ಮುಂದೆ ಮೀನುಗಾರರ(Fishermen) ಮತ್ತು ನೇಕಾರರ(Weavers) ಮಕ್ಕಳಿಗೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

Karnataka Politics: ದೆಹಲಿಯಲ್ಲಿ ಸಿಎಂ ಬೊಮ್ಮಾಯಿ ಮಿಂಚಿನ ಸಂಚಾರ..!

ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಪ್ರೋತ್ಸಾಹಿಸುವ ಉದ್ದೇಶದಿಂದ ತಲಾ 1.50 ಕೋಟಿ ರು. ಮೌಲ್ಯದ 100 ಹೈ ಸ್ಪೀಡ್‌ ಮೀನುಗಾರಿಕಾ ಬೋಟ್‌ಗಳನ್ನು ಕರಾವಳಿಯ ಮೂರು ಜಿಲ್ಲೆಯ ಮೀನುಗಾರರಿಗೆ ನೀಡುವ ಮತ್ಸ್ಯಸಿರಿ ಯೋಜನೆಯನ್ನು ಈ ಸಾಲಿನಿಂದಲೇ ಜಾರಿಗೊಳಿಸಲಾಗುತ್ತಿದೆ, ಇದರಲ್ಲಿ ಶೇ. 40 ಕೇಂದ್ರ ಸರ್ಕಾರ, ಶೇ. 10 ಫಲಾನುಭವಿಗಳು ಮತ್ತು ಉಳಿದ ವೆಚ್ಚವನ್ನು ರಾಜ್ಯ ಸರ್ಕಾರ(Government of Karnataka) ಭರಿಸಲಿದೆ ಎಂದು ಪ್ರಕಟಿಸಿದರು.

ಮತ್ಸ್ಯಾಶ್ರಯ ಗೃಹ ನಿರ್ಮಾಣ: 

ಉಡುಪಿ(Udupi) ಜಿಲ್ಲೆಯ ಮೀನುಗಾರರಿಗೆ 5,000 ಮತ್ಸ್ಯಾಶ್ರಯ ಮನೆಗಳನ್ನು ರಾಜೀವ ಗಾಂಧಿ ವಸತಿ ನಿಗಮದ ಮೂಲಕ ನಿರ್ಮಿಸಿ ಕೊಡಲಾಗುವುದು, ವರ್ಷದೊಳಗೆ ಕರಾವಳಿಯ 8 ಬಂದರುಗಳ ಹೂಳೆತ್ತಲಾಗುವುದು, ಪ್ರತಿ ಗ್ರಾ.ಪಂ.ಗಳಲ್ಲಿ ಮೀನು ಕೃಷಿಗೆ ಒಂದು ಕೆರೆ ಮೀಸಲಿಡಲಾಗುವುದು, ಮೀನುಗಾರಿಕಾ ಬೋಟುಗಳಿಗೆ ನೀಡುವ ಡೀಸೆಲ್‌ ಸಬ್ಸಿಡಿಯನ್ನು 1 ಲಕ್ಷ ಲೀ. ನಿಂದ 2 ಲಕ್ಷ ಲೀ.ಗೆ ಹೆಚ್ಚಿಸಲಾಗುವುದು ಎಂದು ಅವರು ವಿವರಿಸಿದರು.

Karnataka Politics: ಸಿಎಂ ಬೊಮ್ಮಾಯಿ ಮೂಕ ಬಸವ ಆಗಿದ್ದಾರೆ: ಪ್ರಿಯಾಂಕ್‌ ಖರ್ಗೆ

ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ಹಿಂದುಳಿದ ವರ್ಗದ ಇಲಾಖೆಯಿಂದ ಹಾಸ್ಟೆಲ್‌ ನಿರ್ಮಿಸಲಾಗುವುದು, ಮಹಿಳಾ ಮೀನುಗಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವುದಕ್ಕೆ ಪಟ್ಟಣ ಸಹಕಾರಿ ಬ್ಯಾಂಕುಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದ ಮುಖ್ಯಮಂತ್ರಿ, ಉಚ್ಚಿಲ ಮಹಾಲಕ್ಷ್ಮಿ ದೇವಳದ ಮೂಲಭೂತ ಸೌಕರ್ಯಗಳಿಗೆ 5 ಕೋಟಿ ರು. ಬಿಡುಗಡೆ ಮಾಡುವುದಾಗಿ ಘೋಷಿಸಿದರು. ಮ್ಯೂಸಿಯಂ ಸ್ಥಾಪನೆಗೆ ಆರ್ಥಿಕ ಸಹಾಯ ನೀಡುವುದಾಗಿ ಭರವಸೆ ನೀಡಿದರು

ಸಾರಿಗೆ ಸಚಿವ ಶ್ರೀರಾಮುಲು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್‌.ಅಂಗಾರ, ಶಾಸಕರಾದ ವೇದವ್ಯಾಸ್‌ ಕಾಮತ್‌, ಬಿ.ಎಂ.ಸುಕುಮಾರ್‌ ಶೆಟ್ಟಿ, ರಘುಪತಿ ಭಟ್‌, ಭರತ್‌ ಶೆಟ್ಟಿ, ಲಾಲಾಜಿ ಮೆಂಡನ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ, ಬಿಜೆಪಿ ರಾಷ್ಟ್ರೀಯ ಹಿಂದುಳಿದ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್‌ ಸುವರ್ಣ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌, ಕಿದಿಯೂರು ಉದಯ್‌ ಕುಮಾರ್‌ ಶೆಟ್ಟಿ, ಉದ್ಯಮಿ ಆನಂದ್‌ ಕುಂದರ್‌, ದ.ಕ. ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ.ಆಮೀನ್‌ ಇದ್ದರು.
ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಡೋಜ ಜಿ.ಶಂಕರ್‌ ಸ್ವಾಗತಿಸಿ, ಬೇಡಿಕೆಗಳನ್ನು ಮಂಡಿಸಿದರು. ಸುಧಾಕರ್‌ ಕುಂದರ್‌ ವಂದಿಸಿದರು. ದಾಮೋದರ ಶರ್ಮ ನಿರೂಪಿಸಿದರು.