ತರಕಾರಿ ಬೆಲೆ ಗಗನಕ್ಕೇರಿದ ಪರಿ​ಣಾ​ಮ ಮಧ್ಯಾಹ್ನ ಬಿಸಿಯೂಟಕ್ಕೆ ತಿಳಿಸಾರು, ಟೊಮೆಟೋ ಬೆಲೆ ಭಾರಿ ತುಟ್ಟಿ​ಯಾ​ಗಿ​ರುವ ಕಾರಣ ಹುಣ​ಸೇ​ಹಣ್ಣು ಬಳ​ಕೆ. 

ಲಿಂಗಸುಗೂರು(ಜು.15):  ತರಕಾರಿ ಬೆಲೆ ಗಗನಕ್ಕೇರಿದ ಪರಿಣಾಮ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟಕ್ಕೆ ತರಕಾರಿ ಬದಲು ತಿಳಿಸಾರು ಬಡಿ​ಸು​ವ ಸ್ಥಿತಿ ನಿರ್ಮಾಣಗೊಂಡಿದೆ. ತಾಲೂಕಿನಲ್ಲಿ 1 ರಿಂದ 10ನೇ ತರಗತಿ ವರೆಗೆ ಒಟ್ಟು 66,7072 ಮಕ್ಕಳು ಇದ್ದಾರೆ. ಬೆಳಗ್ಗೆ ಹಾಲು, ಮೊಟ್ಟೆ, ಬಾಳೆಹಣ್ಣು, ಶೇಂಗಾ ನೀಡಲಾಗುತ್ತದೆ. ಮಧ್ಯಾಹ್ನ ಬಿಸಯೂಟಕ್ಕೆ ಅನ್ನ ಸಾಂಬಾರ್‌ ನೀಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಒಂದು ಊಟಕ್ಕೆ ಒಟ್ಟು 4.97 ಖರ್ಚು ಮಾಡುತ್ತದೆ. ಟೊಮೆಟೋ ಬೆಲೆ ಗಗನಕ್ಕೇರಿದ್ದರಿಂದ ಊಟದಲ್ಲಿ ಟೊಮೆ​ಟೋ ಬದಲು ಹುಣಸೆಹಣ್ಣು ಬಳಸಲಾಗುತ್ತದೆ. ಶಾಲೆಗಳಿಗೆ ಬಿಸಯೂಟದ ತರಕಾರಿ, ಅಡುಗೆ ಅನಿಲ ಸೇರಿ ಬಿಸಿಯೂಟ ನೌಕರರು ಕೈಯಿಂದ ಹಣ ಹಾಕಿ ಖರೀದಿಸಿ ತರುತ್ತಾರೆ. ಹಲವು ತಿಂಗಳು ಕಳೆದರೂ ಖರ್ಚು ಮಾಡಿದ ಹಣ ಬಾರದೇ ಮಧ್ಯಾಹ್ನ ಬಿಸಿಯೂಟದ ಅಡುಗೆದಾರರು ಬೆದರಿ​ದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತರಕಾರಿ, ಅಡುಗೆ ಅನಿಲ 1 ರಿಂದ 5ನೇ ತರಗತಿಗೆ 4.97, ರುಪಾಯಿ, 6 ರಿಂದ 10ನೇ ತರಗತಿಗೆ 8.17 ರುಪಾಯಿ ನೀಡಲಾಗುತ್ತದೆ. ಕಳೆದ ಮುರ್ನಾಲ್ಕು ತಿಂಗಳುಗಳಿಂದ ಸಾದಿಲ್ವಾರು ಹಣ ಬಿಡಗಡೆಯಾಗಿಲ್ಲ. ತುಟ್ಟಿತರಕಾರಿ ತಂದು ಬಿಸಿಯೂಟಕ್ಕೆ ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಊಟದ ರುಚಿ ತಪ್ಪಿದೆ.

ತರಕಾರಿಗಳ ಬೆಲೆ ಏರಿಕೆಯಿಂದಾಗಿ ಅಂಗನವಾಡಿ ಕೇಂದ್ರಗಳಿಗೆ ಎಫೆಕ್ಟ್: ಬಿಸಿಯೂಟದಲ್ಲಿ ಪೌಷ್ಠಿಕಾಂಶದ ಕೊರತೆ

ಜೂನ್‌-ಜುಲೈ ತಿಂಗಳಲ್ಲಿ ಶಾಲೆಗಳ ದಾಖಲಾತಿ ಹೆಚ್ಚುತ್ತಾ ಇದೆ. ದಿನವಹಿ ವಿದ್ಯಾರ್ಥಿಗಳ ಸಂಖ್ಯೆಯೂ ಏರು ಮುಖವಾಗುತ್ತಿದೆ. ಇದರ ಮಧ್ಯೆ ಕಡಿಮೆ ಸಂಬಳಕ್ಕೆ ದುಡಿಯುವ ಬಿಸಿಯೂಟದ ನೌಕರರಿಗೆ ಮಧ್ಯಾಹ್ನ ಬಿಸಿಯೂಟದ ನಿರ್ವಹಣೆ ತ್ರಾಸಾದಾಯಕವಾಗಿದ್ದು, ತರ​ಕಾರಿ ಬೆಲೆ ಗಗ​ನ​ಕ್ಕೇ​ರಿ​ರು​ವು​ದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಈರುಳ್ಳಿ, ಬೀನ್ಸ್‌, ​ಗ​ಜ್ಜ​ರಿ, ​ಟೊ​ಮೆ​ಟೋ ಸೇರಿ ತರಕಾರಿ ಬೆಲೆ ಹೆಚ್ಚಾಗಿದ್ದು ಮಕ್ಕಳಿಗೆ ತರಕಾರಿ ಬದಲು ತಿಳಿಸಾರು ಬಡಿ​ಸು​ವಂತಾ​ಗಿ​ದೆ.

ತಾಲೂಕಿನಲ್ಲಿ ಶಾಲೆಗೆ ಮಕ್ಕಳ ಹಾಜರಾತಿ ಶೇ. 90ರಷ್ಟುಇದೆ. ಕೆಲವಡೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಮಧ್ಯಾಹ್ನ ಬಿಸಿಯೂಟದಲ್ಲಿ ಟೊಮೆಟೋ ಸೇರಿ ಹೆಚ್ಚು ಬೆಲೆ ತರಕಾರಿಗಳ ಕೈಬಿಟ್ಟು ಹುಣಸೆಹಣ್ಣು ಸೇರಿ ಬೆಲೆ ಕಡಿಮೆ ಇರುವ ತರಕಾರಿ ಬಳಕೆ ಮಾಡಲಾಗುತ್ತಿದೆ. ಹಲವು ಸಂಕಷ್ಟಗಳ ಮಧ್ಯ ಮಕ್ಕಳ ಹಿತದೃಷ್ಟಿಯಿಂದ ಬಿಸಿಯೂಟ ನಿರ್ವಹಣೆ ಮಾಡುತ್ತಿದ್ದೇವೆ ಅಂತ ಲಿಂಗಸುಗೂರು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗನಗೌಡ ಪಾಟೀಲ್‌ ತಿಳಿಸಿದ್ದಾರೆ.