Asianet Suvarna News Asianet Suvarna News

ವಿಜಯಪುರ: ಮೊರಾರ್ಜಿ ಶಾಲೆಯ ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು..!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳದ ಮೊರಾರ್ಜಿ ಶಾಲೆಯ ವಿದ್ಯಾರ್ಥಿ, ಪಾಲಕರಿಂದ ವ್ಯವಸ್ಥೆ ವಿರುದ್ಧ ಆಕ್ರೋಶ

Students Protested against the Morarji  School at Indi in Vijayapura grg
Author
First Published Feb 1, 2023, 9:30 PM IST

ತಾಂಬಾ(ಫೆ.01):  ಮಧ್ಯಾಹ್ನದ ಊಟದಲ್ಲಿ ಬಾಲಹುಳಗಳು, ಝರಿಹುಳಗಳು ಬರುತ್ತಿವೆ. ಹಸಿಬಿಸಿ ಚಪಾತಿ ಮಾಡುತ್ತಾರೆ. ಅರೇ ಬೆಂದ ಅನ್ನ ಹಾಕುತ್ತಾರೆ ಎಂದು ಆರೋಪಿಸಿ ಬಂಥನಾಳದ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಶಿಕ್ಷಣಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳ ವಿರುದ್ಧ ಧಿಕ್ಕಾರ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು. ಕಾಯಿಪಲ್ಲೆಯನ್ನು ವಾರಕ್ಕೊಮ್ಮೆ ತಂದು ಅದನ್ನೇ ಬಳಸುತ್ತಾರೆ. ಕೊಳೆತ ಈರುಳ್ಳಿ ಹಾಕಿ ಅಡುಗೆ ಮಾಡುತ್ತಾರೆ. ಒಂದು ವರ್ಷದಲ್ಲಿ ಎರಡೇ ಸಲ ಕಟಿಂಗ್‌ ಮಾಡಿಸುತ್ತಾರೆ. ಹೀಗೆ ಒಂದರ ಮೇಲೋಂದು ಸಮಸೆÜ್ಯಗಳನ್ನು ಹೇಳಿ ನಮ್ಮ ಗೋಳು ಆ ಭಗವಂತನಿಗೆ ಗೊತ್ತು ಎಂದು ಮಕ್ಕಳು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು.

ಶಿಕ್ಷಕರಿಗೆ ಲೆಕ್ಕ ಕೊಡುತ್ತೇವೆ ಮಾಡಲಿ:

ಗಣಿತ ಶಿಕ್ಷಕ ಗಣೇಶ ರಾಠೋಡ ಅವರಿಗೆ ಲೆಕ್ಕವೇ ಬರುವುದಿಲ್ಲ. ಇಂಗ್ಲಿಷ್‌ ಶಿಕ್ಷಕರಾದ ಮುತ್ತುರಾಜ ಮಾದರ ಅವರು ಗ್ರಾಮರ್‌ ಹೇಳಲು ಬರುವುದಿಲ್ಲ. ಅವರಿಗೆ ಒಂದು ಲೆಕ್ಕವನ್ನು ಹೇಳುತ್ತೇವೆ ಅವರು ಬಿಡಿಸಿದರೆ ಅವರೇ ಇರಲಿ ಇಲ್ಲವಾದರೆ ಬಿಟ್ಟು ಹೋಗಲಿ ಎಂದು ಸವಾಲು ಹಾಕಿದರು. ಅವರಿಗೆ ಪ್ರಶ್ನೆಯನ್ನು ಕೇಳಿದರೆ ಹೊಡೆಯಲು ಹಾಗೂ ಅಸಭ್ಯವಾಗಿ ಮಾತನಾಡುತ್ತಾರೆ. ಕೂಡಲೇ ಈ ಶಿಕ್ಷಕರನ್ನು ಬೇರೆಡೆ ಕಳುಹಿಸಿ ಜಾಣ ಶಿಕ್ಷಕರನ್ನು ನೇಮಿಸಬೇಕು. ದೈಹಿಕ ಶಿಕ್ಷಕಿ ಶೋಭಾ ಕಾಂಬಳೆ ಅವರು ರಾತ್ರಿ 12 ಗಂಟೆಗೆ ಬಂದು ನಮ್ಮ ಕೋಣೆಯಲ್ಲಿ ಇಣುಕಿ ನೋಡುತ್ತಾರೆ. ಹೀಗಾಗಿ ನಮಗೆ ಭಯ ಹುಟ್ಟಿದೆ. ಮೇಲಧಿಕಾರಿಗಳು ಬಂದರು ನಮ್ಮ ಗೋಳು ಕೇಳುವುದೇ ಇಲ್ಲ. ನೀವಾದರೂ ನಮ್ಮ ಸಮಸ್ಯೆ ಬಗೆಹರಿಸಿ ಎಂದು ವಿದ್ಯಾರ್ಥಿಗಳು ಮಾಧ್ಯಮದವರ ಮುಂದೆ ಬೇಡಿಕೊಂಡರು.

ಅಂಗನವಾಡಿ ಶಿಕ್ಷಣ ಮಧ್ಯಾಹ್ನ 1 ಗಂಟೆಗೆ ಮುಕ್ತಾಯ: ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದ ಸರ್ಕಾರ

ಸತ್ಯ ಹೇಳದಂತೆ ಆಣೆ ಪ್ರಮಾಣ:

ನಮಗೆ ಆಣೆ-ಪ್ರಮಾಣವನ್ನು ಮಾಡಿಸಿದ್ದಾರೆ. ಯಾರಾದರು ಬಂದು ಕೇಳಿದರೆ ಎಲ್ಲವೂ ಸರಿಯಿದೆ ಎಂದು ಹೇಳಬೇಕು. ಇಲ್ಲವಾದರೆ ನಮ್ಮ ಪ್ರತಿಯೊಬ್ಬ ಶಿಕ್ಷಕರ ಕೈಯಲ್ಲಿ 20 ಅಂಕಗಳು ಇರುತ್ತವೆ ಎಂದು ಹೆದರಿಸುತ್ತಾರೆ. ಇಲ್ಲಿ ಇರುವವರೆಗೂ ಶಿಕ್ಷಕರ ಮಾತನ್ನೇ ಕೇಳುತ್ತೇವೆ. ನಮಗೆ ಏನು ಬೇಕಾದರೂ ಮುಖ್ಯ ಶಿಕ್ಷಕರಿಗೆ ಹೇಳುತ್ತೇವೆ. ಅಧಿಕಾರಿಗಳಾಗಲಿ, ಪಾಲಕರ ಮುಂದೆ ಹೇಳುವದಿಲ್ಲ ಎಂದು ಕ್ರೀಡಾ ಜ್ಯೋತಿಯನ್ನು ಮುಟ್ಟಿಆಣೆ ಪ್ರಮಾಣವನ್ನು ಮಾಡಿಸಿದ್ದಾರೆ ಎಂದು ಕಣ್ಣೀರು ಸುರಿಸುತ್ತಾ ತಮ್ಮ ಸಹಿಗಳನ್ನು ಒತ್ತಾಯ ಪೂರ್ವಕವಾಗಿ ಬರೆಸಿಕೊಂಡಿದ್ದಾರೆ ಆರೋಪಿಸಿದರು.

ಈ ಹಿಂದೆ ಸಮಾಜ ಕಲ್ಯಾಣ ಅಧಿಕಾರಿಗಳು ಬಂದಾಗ ನಮ್ಮ ಬಾಯಿಯಿಂದ ಸುಳ್ಳು ಹೇಳಿಸಿದ್ದಾರೆ. ಈ ಶಾಲೆಯಲ್ಲಿ ದಿನಾಲೂ ನರಕವನ್ನು ಅನುಭವಿಸುತ್ತಿದ್ದೇವೆ. ಈಗ ಪರೀಕ್ಷೆ ಸಮಯ ಕೂಡಲೇ ಇಂಗ್ಲಿಷ್‌ ಮತ್ತು ಗಣಿತ ಶಿಕ್ಷಕರನ್ನು ನೇಮಿಸಬೇಕು ಎಂದು ಮಕ್ಕಳು ಹಾಗೂ ಪಾಲಕರು ಆಗ್ರಹಿಸಿದರು.

ಕೋರ್ಚ್‌ನಲ್ಲಿ ಪ್ರಮಾಣ ಮಾಡಿಸಿದ ಹಾಗೆ ಮಕ್ಕಳ ಕಡೆಯಿಂದ ಒತ್ತಾಯಮಾಡಿ ಆಣೆ, ಪ್ರಮಾಣ ಮಾಡಿಸಿರುವ ಶಿಕ್ಷಕರನ್ನು ತನಿಖೆಮಾಡಬೇಕು. ಯಾರಿಗೂ ಹೇಳದೆ ಗುಪ್ತವಾಗಿ ಮಹಿಳಾ ಕಲ್ಯಾಣ ಅಧಿಕಾರಿಗಳು ಬಂದು ಪರಿಶೀಲಿಸಿದಾಗ ಸತ್ಯಾವಂಶವನ್ನು ಹೊರಬರುತ್ತದೆ ಅಂತ ವಿದ್ಯಾರ್ಥಿ ಪಾಲಕ ಷಣ್ಮುಖ ಹಿರೋಳ ತಿಳಿಸಿದ್ದಾರೆ. 

Guest Lecture: ಫೆ.9ರೊಳಗೆ ಹೊಸ ಅತಿಥಿ ಉಪನ್ಯಾಸಕರ ನೇಮಕ

ಆ ಶಾಲೆಯಲ್ಲಿ ರಾಜಕೀಯ ನಡೆದಿದೆ. ಹೀಗಾಗಿ ಒಬ್ಬ ಶಿಕ್ಷಕನನ್ನು ತೆಗೆದುಹಾಕಿದ್ದೇನೆ. ಕೂಡಲೇ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಅಂತ ವಿಜಯಪುರ ಸಮಾಜ ಕಲ್ಯಾಣ ಅಧಿಕಾರಿ ರಾಮನಗೌಡ ಕನ್ನೊಳ್ಳಿ ಹೇಳಿದ್ದಾರೆ. 

ಊಟದ ಸಮಸ್ಯೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಶಿಕ್ಷಕರ ಕೊರತೆ ನಿಗಿಸಲಾಗುವುದು. ಹುಡುಗರ ಕೋಣೆಗೆ ರಾತ್ರಿ ಹೊತ್ತು ಹೋಗುವ ಶಿಕ್ಷಕಿ ಕೂಡಲೇ ತೆಗೆದು ಹಾಕಲಾಗುವುದು ಅಂತ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ತಿಳಿಸಿದ್ದಾರೆ. 

Follow Us:
Download App:
  • android
  • ios