ವಿದ್ಯುತ್‌ ಇಲ್ಲದೇ ಜೋಯಿಡಾ ಜಿಪಂ ಕ್ಷೇತ್ರದ ಮೈನೊಳ ಗೊಡಸೇತ, ಲಿಂಬುಡ ಸೇತ, ಕಾಮಶೆತಡಿ, ಪಾತಾಗುಡಿ, ಪಾಟ್ನೆ, ಅಣಶಿ , ಬಾಮಣಿ, ಸಿರವೊಳಿ, ಗಾಳ, ಹಲಕುಂಬಿ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಅನಂತ ದೇಸಾಯಿ

ಜೋಯಿಡಾ(ಜು.17): ತಾಲೂಕಿನ ಗ್ರಾಮೀಣ ಭಾಗ ಸೇರಿದಂತೆ ಬಹುತೇಕ ಕಡೆ ವಿದ್ಯುತ್‌ ಇಲ್ಲದೇ ಜನತೆ ತತ್ತರಿಸಿ ಹೋಗಿದ್ದಾರೆ. ವಿದ್ಯಾರ್ಥಿಗಳಂತೂ ಒಲೆಯಲ್ಲಿ ಉರಿಯುವ ಬೆಂಕಿಯ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುವ ದುಸ್ಥಿತಿ ಎದುರಾಗಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಒಲೆಯ ಮುಂದೆ ಕುಳಿತು ಓದುವ ದೃಶ್ಯ ಮನಕಲಕುವಂತಿದೆ. ಕಳೆದ 15 ದಿನಗಳಿಂದ ಇಲ್ಲಿನ ಗೋಡ್‌ಸೇತ್‌ ಗ್ರಾಮದಲ್ಲಿ ವಿದ್ಯಾರ್ಥಿಗಳ ಪಡಿಪಾಟಲು ಹೇಳತೀರದಾಗಿದೆ. ಒಲೆಯ ಮುಂದೆ ಬೆಂಕಿಯ ಝಳದಲ್ಲಿ ಓದುತ್ತಿದ್ದಾರೆ. ಮಳೆ ಹಾಗೂ ಬಿರುಗಾಳಿಯಿಂದ ತಾಲೂಕಿನ ಹಲವೆಡೆ ವಿದ್ಯುತ್‌ ಕಂಬ, ಮರಗಳು ಮುರಿದು ಬಿದ್ದಿದ್ದು, ತಾಲೂಕಿನ ಸಂಪರ್ಕ ವ್ಯವಸ್ಥೆ ಹಾಗೂ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. ಬಿದ್ದ ವಿದ್ಯುತ್‌ ಕಂಬ ದುರಸ್ತಿ ಮಾಡುವುದು, ಸರಿಪಡಿಸುವುದು ಹೆಸ್ಕಾಂಗೆ ಸಾಧ್ಯವಿಲ್ಲವಾಗಿದೆ. ಹೆಸ್ಕಾಂ ಈ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುತ್ತಿದೆ.

ಬಹುತೇಕ ಇಡೀ ತಾಲೂಕು ಕತ್ತಲೆಯಲ್ಲಿದೆ. ಮಳೆಯಿಂದಾಗಿ ಮನೆಗಳು ಸೋರುತ್ತಿವೆ. ಇದರ ನಡುವೆ ವಿದ್ಯುತ್‌ ಇಲ್ಲದ್ದರಿಂದ ಬಹಳಷ್ಟುನಲುಗಿ ಹೋಗಿದ್ದಾರೆ. ವಿದ್ಯುತ್‌ ಇಲ್ಲದ ಕಾರಣ ತಾಲೂಕಿನಲ್ಲಿ ಬಿಎಸ್‌ಎನ್‌ಎಲ್‌ ಸಂಪರ್ಕ ಕೂಡ ಸಂಪೂರ್ಣ ಬಂದ್‌ ಆಗಿದೆ. ಇಲ್ಲಿ ಬೇರೆ ಸಂಪರ್ಕ ಸಾಧನಗಳೇ ಇಲ್ಲದಾಗಿದೆ

ಮಹಾರಾಷ್ಟ್ರದ ಶಿವಾಜಿ ಪಾಠದಲ್ಲಿ ಬಂದ ಬೆಳವಡಿ ಮಲ್ಲಮ್ಮ..!

ಅಧಿಕಾರಿ ವರ್ಗ ಇತ್ತ ಕಣ್ಣು ಕೂಡ ಹಾಯಿಸುತ್ತಿಲ್ಲ. ಸರ್ಕಾರ ಸೀಮೆ ಎಣ್ಣೆಯನ್ನು ಕೂಡ ನೀಡುತ್ತಿಲ್ಲ. ರಾತ್ರಿ ಕತ್ತಲಲ್ಲೇ ಊಟ, ಮಾಡಿ ಮಲಗುವ ಪರಿಸ್ಥಿತಿ ಇದೆ. ಹುಳ-ಹುಪ್ಪಡಿ ಬಂದಾಗ ಇವರ ಸ್ಥಿತಿ ಹೇಳತೀರದಾಗಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದಿವೆ. ಜೋಯಿಡಾದ ಜನರು ನಾಡಿಗೆ ವಿದ್ಯುತ್‌ ನೀಡಿ ತಾವು ಕತ್ತಲೆಯಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಇನ್ನಾದರೂ ಸರ್ಕಾರ ಅಂಡರ್‌ಗ್ರೌಂಡ್‌ ಕೇಬಲ್‌ ವಿದ್ಯುತ್‌ ನೀಡುವ ಮೂಲಕ ಜೋಯಿಡಾದ ಜನರಿಗೆ ಬೆಳಕು ನೀಡುವ ಪ್ರಯತ್ನ ಮಾಡಬೇಕಾಗಿದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ವಿದ್ಯುತ್‌ ಇಲ್ಲದೇ ಜೋಯಿಡಾ ಜಿಪಂ ಕ್ಷೇತ್ರದ ಮೈನೊಳ ಗೊಡಸೇತ, ಲಿಂಬುಡ ಸೇತ, ಕಾಮಶೆತಡಿ, ಪಾತಾಗುಡಿ, ಪಾಟ್ನೆ, ಅಣಶಿ , ಬಾಮಣಿ, ಸಿರವೊಳಿ, ಗಾಳ, ಹಲಕುಂಬಿ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.

ಅನುಮತಿ ಇಲ್ಲದೆ ನಕಲಿ ಶಾಲೆ, ಆರ್ಕಿಡ್ ದಿ ಇಂಟರ್ ನ್ಯಾಷನಲ್ ವಿರುದ್ಧ ಕೇಸ್

ವಿದ್ಯುತ್‌ ಸಮಸ್ಯೆ ಬಗೆಹರಿಸಲು ಯಾವ ಗ್ರಾಪಂ ಕೂಡ ತನ್ನ ಕಾರ್ಯ ಕ್ಷೇತ್ರದಲ್ಲಿ ಕೆಇಬಿ ಪವರ್‌ಮ್ಯಾನ್‌ಗಳಿಗೆ ಸಹಕರಿಸಲು ಸಿಬ್ಬಂದಿ ನೀಡಿಲ್ಲ. ಈ ಬಗ್ಗೆ ಶಾಸಕರೇ ಕೆಡಿಪಿ ಸಭೆಯಲ್ಲಿ ಹೇಳಿದ್ದರೂ ಯಾರೂ ಇತ್ತ ಗಮನ ಹರಿಸುತ್ತಿಲ್ಲ.

ಉಳವಿ ಕ್ರಾಸ್‌ನಿಂದ ಒಳಭಾಗದ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕವಿಲ್ಲ. ಕಳೆದ 15 ದಿನಗಳಿಂದ ಕತ್ತಲೆಯಲ್ಲೇ ಇದ್ದೇವೆ. ವಿದ್ಯುತ್‌ ಸಂಪರ್ಕ ಕಲ್ಪಿಸಿ ಎಂದು ಮನವಿ ಮಾಡಿದರೆ, 10 ನಿಮಿಷದಲ್ಲಿ ಸರಿ ಮಾಡುತ್ತೇವೆ ಎಂದು ಹೆಸ್ಕಾಂನವರು ಹೇಳುತ್ತಾರೆ. ಅಷ್ಟೇ ಮುಗಿಯಿತು. ಸಮಸ್ಯೆಗೆ ಪರಿಹಾರ ಮಾತ್ರ ಸಿಗುತ್ತಿಲ್ಲ. ರೈತರ, ಮಕ್ಕಳ, ಗ್ರಾಮಸ್ಥರ ಕಷ್ಟ ಕೇಳುವವರೇ ಇಲ್ಲ ಅಂತ ಅಜಿತ್‌ ಎನ್‌. ವೆಳಿಪ್‌ ತಿಳಿಸಿದ್ದಾರೆ. 

ಭಾರಿ ಗಾಳಿ-ಮಳೆಯಿಂದ ವಿದ್ಯುತ್‌ ಲೈನ್‌ ಹಾಳಾಗಿವೆ. ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಜನರು ಸಹಕರಿಸಬೇಕು ಅಂತ ಜೋಯಿಡಾ ಹೆಸ್ಕಾಂ ಶಾಖಾಧಿಕಾರಿ ಕಲ್ಯಾಣಿ ಹೇಳಿದ್ದಾರೆ.