Asianet Suvarna News Asianet Suvarna News

Uttara Kannada: ಶಾಲೆಗೆ ತೆರಳಲು ವಿದ್ಯಾರ್ಥಿಗಳ 18 ಕಿಮೀ ಕಾಲ್ನಡಿಗೆ..!

*   ಕಾರವಾರ ತಾಲೂಕಿನ ಕುಗ್ರಾಮ ಶಿರ್ವೆ ವಿದ್ಯಾರ್ಥಿಗಳ ಪರದಾಟ
*   ರಸ್ತೆ ಇದ್ದರೂ ಬಸ್‌ ಸೌಕರ್ಯ ಇಲ್ಲ 
*  ಶಾಲೆಗೆ ನಡೆದುಕೊಂಡು ಹೋಗಿ ಬರಲು ದಿನಕ್ಕೆ 6 ಗಂಟೆ ಬೇಕು
 

Students Faces Bus Problems in Uttara Kannada grg
Author
Bengaluru, First Published Feb 18, 2022, 8:50 AM IST | Last Updated Feb 18, 2022, 8:50 AM IST

ಕಾರವಾರ(ಫೆ.18): ರಾಜ್ಯಾದ್ಯಂತ(Karnataka) ಹಿಜಾಬ್‌(Hijab), ಕೇಸರಿ(Saffron) ಗದ್ದಲ ತಾರಕಕ್ಕೇರಿದೆ. ಪ್ರತಿಭಟನೆಗಳಾಗುತ್ತಿವೆ. ಪರೀಕ್ಷೆ ನಿರಾಕರಿಸುತ್ತಿದ್ದಾರೆ. ಆದರೆ ಈ ಊರಿನ ಮಕ್ಕಳು ಇದಾವುದರ ಪರಿವೆಯೇ ಇಲ್ಲದೆ ಶಿಕ್ಷಣಕ್ಕಾಗಿ ಪ್ರತಿದಿನ 18 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಅಕ್ಷರ ಕಲಿಯಲು ಪರದಾಡುತ್ತಿದ್ದಾರೆ.

ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಶಿರ್ವೆಯ ಶಾಲಾ-ಕಾಲೇಜು ವಿದ್ಯಾರ್ಥಿಗಳು(Students) ಪ್ರತಿನಿತ್ಯ ಶಿಕ್ಷಣ(Education) ಪಡೆಯಲು ದಟ್ಟವಾದ ಕಾಡಿನ ನಡುವೆ 18 ಕಿ.ಮೀ. ಪಾದಯಾತ್ರೆ ನಡೆಸುತ್ತಾರೆ. ಶಿರ್ವೆಯಿಂದ ಶಾಲೆಗೆ ಹೋಗಲು 9 ಕಿ.ಮೀ. ಬರುವಾಗ 9 ಕಿ.ಮೀ. ಹೀಗೆ 18 ಕಿ.ಮೀ. ಹೆಜ್ಜೆ ಹಾಕಲೇಬೇಕು.

ಫೆ.16ರಿಂದ ಕಾಲೇಜು ಪುನರಾರಂಭ, ಪದವಿ ಕಾಲೇಜಿಗೆ ಸಮವಸ್ತ್ರ ಕಡ್ಡಾಯವಲ್ಲ, ಆದ್ರೆ ಒಂದು ಕಂಡೀಷನ್

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡುತ್ತಿರುವ ಉಚಿತ ಬೈಸಿಕಲ್‌ ವಿತರಣೆಯನ್ನು ಸರ್ಕಾರ ಸ್ಥಗಿತ ಮಾಡಿದೆ. ಇದರಿಂದ ಶಿರ್ವೆಯ ವಿದ್ಯಾರ್ಥಿಗಳಿಗೆ ಬೈಸಿಕಲ್‌ ಸೌಲಭ್ಯ ಇಲ್ಲದೆ ಈಗ ಕಾಲ್ನಡಿಗೆ ಮೂಲಕ ಬರುವುದು ಅನಿವಾರ್ಯವಾಗಿದೆ.

ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದಲ್ಲಿ 18 ವಿದ್ಯಾರ್ಥಿಗಳು ಕೇರವಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿನಲ್ಲಿ(College) 9 ವಿದ್ಯಾರ್ಥಿಗಳು ಹಾಗೂ ಸಿದ್ದರ ಐಟಿಐದಲ್ಲಿ ಒಬ್ಬ ವಿದ್ಯಾರ್ಥಿ ಓದುತ್ತಿದ್ದಾರೆ. ಅಷ್ಟೆ ಮಾತ್ರವಲ್ಲದೆ ಆ ಗ್ರಾಮಸ್ಥರು ಬೇರೆ ಕಡೆ ಕೂಲಿ ಕೆಲಸವನ್ನು ಮಾಡಬೇಕಾದರೆ ತಮ್ಮ ಗ್ರಾಮದಿಂದ ಬೇರೆ ಗ್ರಾಮದ ಕಡೆ ತಮ್ಮ ಗ್ರಾಮದಲ್ಲಿ ಯಾವುದೇ ಸಾರಿಗೆ ಸೌಕರ್ಯ ಇಲ್ಲದೆ ಕಾಲ್ನಡಿಗೆ ಮೂಲಕ ಹೋಗಿ ಬರುವ ಶಿಕ್ಷೆ ಅನುಭವಿಸುತ್ತಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ ಕಾಲ್ನಡಿಗೆ ಮೂಲಕ ನಡೆದು ಸರಿಯಾಗಿ ಸಮಯಕ್ಕೆ ಶಾಲಾ ಕಾಲೇಜಿಗೆ ಇವರು ತಲುಪಬೇಕು. ಒಟ್ಟಾರೆ ದಿನಕ್ಕೆ 6 ಗಂಟೆ ಕಾಲ್ನಡಿಗೆ ಮೂಲಕ ಹೋಗಿ ಬರಲು ಸಮಯ ಹೋಗುತ್ತದೆ. ನಡೆದು ನಡೆದು ಆಯಾಸ ಬೇರೆ. ಇದರಿಂದ ಶಿರ್ವೆ ಗ್ರಾಮದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾಭ್ಯಾಸ(Study) ಮಾಡಲು ಸಹ ಸಮಯಾವಕಾಶ ಸಿಗದಂತಾಗಿದೆ.

ದೇವಳಮಕ್ಕಿ ಗ್ರಾಮದಿಂದ ಶಿರ್ವೆ ಗ್ರಾಮದ ತನಕ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ ಅಡಿಯಲ್ಲಿ ಅಂದಾಜು 4 ಕೋಟಿ 35 ಲಕ್ಷ ವೆಚ್ಚದಲ್ಲಿ ಹೊಸದಾದ ಡಾಂಬರೀಕರಣ ರಸ್ತೆ ಸಂಪರ್ಕ ಇದ್ದರೂ ಸಹ ಇನ್ನೂ ತನಕ ಬಸ್‌(Bus) ಸಂಚಾರ ಆರಂಭಿಸಿಲ್ಲ. ಇದರಿಂದ ಊರಿನ ಎಲ್ಲ ಜನತೆ ಪರದಾಡುವಂತಾಗಿದೆ ಎಂದು ಅಲ್ಲಿನ ಗ್ರಾಮಸ್ಥರು ತಮ್ಮ ಅಳಲು ತೊಡಿಕೊಂಡಿದ್ದಾರೆ.

ಶಿಕ್ಷಣ ಇಲಾಖೆ(Department of Education) ಕುಗ್ರಾಮದ ವಿದ್ಯಾರ್ಥಿಗಳು ಯಾವುದೇ ಕಾರಣ ಇಲ್ಲದೇ ಶಿಕ್ಷಣದಲ್ಲಿ ವಂಚಿತರಾಗಬಾರದು ಅಂತ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಶಿರ್ವೆ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ವ್ಯವಸ್ಥೆಯೇ ಇಲ್ಲ. ಶಿಕ್ಷಣ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಕೂಡಲೇ ಗಮನಹರಿಸಬೇಕಿದೆ.

Hijab Row: ಹಿಜಾಬ್ ಇಲ್ಲದೇ ಮಕ್ಕಳನ್ನು ಶಾಲೆಗೆ ಕಳಿಸಲ್ಲ, ಮನೆಯಲ್ಲೇ ಕೂರಿಸ್ತೀವಿ: ಪೋಷಕರು

ಶಿರ್ವೆ ಗ್ರಾಮದ ಯಾವೊಬ್ಬ ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಹಲವು ವರ್ಷಗಳಿಂದ ಅವರು ಕಾಲ್ನಡಿಗೆ ಮೂಲಕ ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಯಾವುದೇ ಕಷ್ಟವಾಗದಂತೆ ಸಂಬಂಧ ಪಟ್ಟ ಅಧಿಕಾರಿಗಳು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂದು ವಿನಂತಿಸುತ್ತಿದ್ದೇನೆ ಅಂತ ದೇವಳಮಕ್ಕಿ ಗ್ರಾಮದ ಯುವ ಮುಖಂಡ ಪ್ರಜ್ವಲ್‌ ಬಾಬುರಾಯ ಶೇಟ್‌ ತಿಳಿಸಿದ್ದಾರೆ.  

ನಾವು ಪ್ರತಿದಿನ 18 ಕಿ.ಮೀ. ನಡೆದು ವಿದ್ಯಾಲಯಕ್ಕೆ ಹೋಗಿ ಬರಬೇಕು. ಪ್ರತಿದಿನ ಸುಸ್ತು, ಕಾಲುನೋವು ಆಗುತ್ತಿದೆ. ಬಸ್‌ ಸಂಚಾರ ಕಲ್ಪಿಸಿ ನಮ್ಮ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ ಅಂತ ಭವಾನಿ ಸುಬ್ರಾಯ ಗೌಡ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios