Asianet Suvarna News Asianet Suvarna News

Udupi: ತರಗತಿ ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಬಂದಿದ್ದಕ್ಕೆ ನೇಣಿಗೆ ಶರಣಾದ ವಿದ್ಯಾರ್ಥಿನಿ

ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಗೆ ಖಾಸಗಿ ಶಿಕ್ಷಣ ಸಂಸ್ಥೆಯು ಉಚಿತ ಸೀಟು ನೀಡಿತ್ದತು. ಆದರೆ, ತರಗತಿ ಪರೀಕ್ಷೆಯಲ್ಲಿ 10 ಅಂಕ ಕಡಿಮೆ ಪಡೆದುಕೊಂಡಿದ್ದಕ್ಕೆ ಕಾಲೇಜು ಪ್ರಾಂಶುಪಾಲರು ಗದರಿಸಿದ್ದಕ್ಕೆ ಮನನೊಂದು ರ್‍ಯಾಂಕ್‌ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

Student surrendered for getting less than 10 marks
Author
First Published Nov 29, 2022, 7:30 PM IST

ಉಡುಪಿ (ನ.29): ಹೈಸ್ಕೂಲ್ ನಲ್ಲಿ ಆಕೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ಹಾಗಾಗಿ ಅದೇ ಶಿಕ್ಷಣ ಸಂಸ್ಥೆಯವರು ಫಸ್ಟ್ ಪಿಯುಸಿಗೆ ಉಚಿತ ಸೀಟ್ ಕೊಡಿಸಿದ್ದರು. ಉಚಿತ ಶಿಕ್ಷಣ ನೀಡುತ್ತಿರುವ ವಿಚಾರವನ್ನೇ ಮುಂದಿಟ್ಟುಕೊಂಡು ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಆಕೆಯನ್ನು ಪ್ರಾಚಾರ್ಯರು ಮತ್ತು ಉಪನ್ಯಾಸಕರು ಹೀಯಾಳಿಸಿದರು. ಇದಕ್ಕೆ ತೀವ್ರವಾಗಿ ಮನನೊಂದ ಹದಿ ಹರೆಯದ, ಟಾಪರ್ ವಿದ್ಯಾರ್ಥಿನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉಡುಪಿ ಜಿಲ್ಲೆಯ ಪೆರ್ಡೂರು ಮೂಲದ ತೃಪ್ತಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಇವಳು ಸುರೇಶ್ ಮೆಂಡನ್ ಮತ್ತು ಹೇಮಾ ದಂಪತಿಗಳ ಎರಡನೇಯ ಪುತ್ರಿ. ಹೆಬ್ರಿಯ ಎಸ್. ಆರ್, ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಳು. ತೃಪ್ತಿಯ ಶೈಕ್ಷಣಿಕ ವಿಚಾರದಲ್ಲಿ ಯಾವುದೇ ಆಕ್ಷೇಪಗಳು ಕೂಡ ಇರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಮೊದಲು ಪಡೆಯುತ್ತಿದ್ದ ಅಂಕಕ್ಕಿಂತ 10 ಅಂಕ ಕಡಿಮೆ ಬಂದ ಹಿನ್ನಲೆಯಲ್ಲಿ, ಆಕೆಗೆ ಪ್ರಾಂಶುಪಾಲರು ಗದರಿಸಿದ್ದರು. ಎಲ್ಲ ವಿದ್ಯಾರ್ಥಿಗಳು ಇದ್ದಾಗ ಪ್ರಾಂಶುಪಾಲರು ಗದರಿಸಿದರೆಂದು ಮನನೊಂದು ಕೊಂಡ ಹುಡುಗಿ ಆತ್ಮಹತ್ಯೆ ಶರಣಾಗಿದ್ದಾಳೆ. ಕಾಲೇಜು ಮುಗಿಸಿ ಪೆರ್ಡೂರುನಲ್ಲಿರುವ ತನ್ನ ಮನೆಗೆ ಬಂದವಳು ಮನನೊಂದು ನೇಣಿಗೆ ಶರಣಾಗಿದ್ದಾಳೆ. ಸದ್ಯ ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.\

 

ಎಚ್.ಡಿ.ಕೋಟೆ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ

ಎಲ್ಲರ ಮುಂದೆ ಅವಮಾನ: ಪ್ರಸ್ತುತ ಪಿಯು ಕಾಲೇಜಿನಲ್ಲಿರುವ ಪ್ರೌಢಶಾಲೆಯಲ್ಲಿಯೇ ತೃಪ್ತಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿದ್ದಳು. ಈಕೆಯು ಗಳಿಸಿದ ಅಂಕದ ಆಧಾರದಲ್ಲಿ ಉಚಿತ ಶಿಕ್ಷಣ ವ್ಯವಸ್ಥೆ ಮಾಡಲಾಗಿತ್ತು. ಉಚಿತ ಶಿಕ್ಷಣ ಕೊಟ್ಟರು ಅನ್ನೋ ಕಾರಣಕ್ಕೆ ಮಕ್ಕಳನ್ನು ಅವಮಾನಿಸುವುದು ಎಷ್ಟು ಸರಿ ಎಂದು ತೃಪ್ತಿ ಕುಟುಂಬದವರು ಕೇಳುತ್ತಿದ್ದಾರೆ. ಎಸ್. ಆರ್ ಪಿಯು ಕಾಲೇಜಿನಲ್ಲಿ ಅತ್ಯಂತ ಒತ್ತಡದ ಶಿಕ್ಷಣ ವ್ಯವಸ್ಥೆ ಇದೆ . ಭಾನುವಾರವು ಸೇರಿದಂತೆ ರಜಾ ದಿನಗಳಲ್ಲೂ ಕೂಡ ತರಗತಿ ನಡೆಸುತ್ತಾರೆ. ಶಿಕ್ಷಣದ ಒತ್ತಡದ ಜೊತೆಗೆ ಅವಮಾನವನ್ನು ಸಹಿಸಲಾರದೆ ನನ್ನ ಮಗಳು ಸಾಯುವಂತಾಗಿದೆ ಎಂದು ತಂದೆ ಕಣ್ಣೀರ ಹಾಕಿದ್ದಾರೆ. ಪ್ರಥಮ ಪಿಯು ನಲ್ಲೂ ಉತ್ತಮ ಅಂಕ ಪಡೆಯುತ್ತಿದ್ದ ತೃಪ್ತಿಗೆ, ಅವಮಾನವೇ ಆಘಾತ ಕೊಟ್ಟಿದೆ. ಉಳಿದ ವಿದ್ಯಾರ್ಥಿಗಳ ಮುಂದೆ ಆದ ಅವಮಾನವನ್ನು ತಡೆದುಕೊಂಡಿಲ್ಲ ಎನ್ನುವುದು ಮನೆಯವರ ದೂರು ಆಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಡವಟ್ಟು, 9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯ

ವಿದ್ಯಾರ್ಥಿನಿಯಿಂದ ದುಡುಕಿನ ನಿರ್ಧಾರ: ಉಚಿತ ಸೀಟು ನೀಡಿದ ವಿದ್ಯಾರ್ಥಿಗಳಿಗೆ ಇದೇ ರೀತಿ ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಹೆತ್ತವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಸಂಸ್ಥೆ, ಮನೆಯವರ ದೂರಿನಲ್ಲಿರುವಂತೆ ಯಾವುದೇ ರೀತಿಯ ಘಟನೆ ನಡೆದಿಲ್ಲ. ತೃಪ್ತಿ ಓದಿನಲ್ಲಿ ಮುಂದೆಯಿದ್ದಳು. ಶೇ.95 ಅಂಕ ಪಡೆದಿದ್ದಳು. ನಮ್ಮ ವಿದ್ಯಾರ್ಥಿನಿ ದುಡುಕಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಸಂಸ್ಥೆಗೆ ಈ ಬಗ್ಗೆ ನೋವಿದೆ ಎಸ್‌.ಆರ್. ಪಿಯು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.

ಒಟ್ಟಾರೆಯಾಗಿ ಮುಂದೆ ಬಾಳಿ ಬದುಕ ಬೇಕಾಗಿದ್ದ ಹೆಣ್ಣು ಮಗಳೊಬ್ಬಳು ಹೆತ್ತವರಿಂದ ದೂರವಾಗಿದೆ. ಪೊಲೀಸ್ ರು ತನಿಖೆ ನಡೆಸುತ್ತಿದ್ದು, ಯಾವ ಕಾರಣಕ್ಕೆ ತೃಪ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಇನ್ನಷ್ಟೆ ತಿಳಿದು ಬರಬೇಕಿದೆ.

Follow Us:
Download App:
  • android
  • ios