Asianet Suvarna News Asianet Suvarna News

Uttara Kannada: ಭಟ್ಕಳ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ!

ತಾಲೂಕಿನಲ್ಲಿ ನಿಗದಿತ ಅವಧಿಗಿಂತ ಮೊದಲೇ ಶಾಲೆಗಳು ಆರಂಭವಾಗುತ್ತಿದ್ದು, ಶಾಲಾರಂಭದ ಸಿದ್ಧತಾ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸನ್ನದ್ಧವಾಗಿದೆ. ಆದರೆ ಶಿಕ್ಷಕರ ಕೊರತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸವಾಲಾಗಿ ಪರಿಣಮಿಸಿದೆ.

Shortage of teachers at Bhatkal Primary School in Uttara Kannada gvd
Author
Bangalore, First Published May 12, 2022, 6:51 PM IST

ರಾಘವೇಂದ್ರ ಹೆಬ್ಬಾರ

ಭಟ್ಕಳ (ಮೇ.12): ತಾಲೂಕಿನಲ್ಲಿ ನಿಗದಿತ ಅವಧಿಗಿಂತ ಮೊದಲೇ ಶಾಲೆಗಳು (Schools) ಆರಂಭವಾಗುತ್ತಿದ್ದು, ಶಾಲಾರಂಭದ ಸಿದ್ಧತಾ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸನ್ನದ್ಧವಾಗಿದೆ. ಆದರೆ ಶಿಕ್ಷಕರ ಕೊರತೆ (Shortage of Teachers) ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಕೆಲವು ಶಾಲೆಗಳಲ್ಲಿ ಕುಡಿಯುವ ನೀರಿಗೂ (Drinking Water) ತೊಂದರೆ ಇದ್ದು, ಬಿಸಿಯೂಟ ತಯಾರಿಸಲು ಬೇರೆ ಕಡೆಯಿಂದ ನೀರು ತರಬೇಕಾದ ಪರಿಸ್ಥಿತಿ ಎದುರಾಗಲಿದೆ. ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (Govt School) 81, ಕಿರಿಯ ಪ್ರಾಥಮಿಕ ಶಾಲೆ 94 ಸೇರಿದಂತೆ ಒಟ್ಟು 175 ಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, 8500ಕ್ಕೂ ಅಧಿಕ ಮಕ್ಕಳಿದ್ದಾರೆ.

175 ಶಾಲೆಗಳಲ್ಲಿ 618 ಶಿಕ್ಷಕರು ಇರಬೇಕಿತ್ತು. 495 ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲೇ ಅಧಿಕ ಎಂಬಂತೆ 123 ಶಿಕ್ಷಕರ ಕೊರತೆ ಭಟ್ಕಳದಲ್ಲಿದೆ. ಈ ಸಲ ಭಟ್ಕಳದಿಂದ 35 ಶಿಕ್ಷಕರು ವರ್ಗಾವಣೆಗೊಂಡು ಹೊರಗೆ ಹೋದರೆ, ಹೊರಗಿನಿಂದ ಕೇವಲ 12 ಶಿಕ್ಷಕರು ಮಾತ್ರ ಇಲ್ಲಿಗೆ ಬಂದಿದ್ದಾರೆ. ಕೆಲವು ಶಾಲೆಗಳಲ್ಲಿನ ಶಿಕ್ಷಕರು ವರ್ಗಗೊಂಡು ಶಿಕ್ಷಕರೇ ಇಲ್ಲದ್ದರಿಂದ ಶಿಕ್ಷಕರಿರುವ ಎರಡು ಶಾಲೆಯಿಂದ ಒಬ್ಬರನ್ನು ಖಾಲಿ ಇರುವ ಕಡೆ ನಿಯೋಜಿಸಲಾಗಿದೆ. ಶಿಕ್ಷಕರ ನೇಮಕಾತಿ ಸರ್ಕಾರದಿಂದ ಇನ್ನಷ್ಟೇ ಆಗಬೇಕಿದ್ದು, ಅಲ್ಲಿಯವರೆಗೆ ಅತಿಥಿ ಶಿಕ್ಷಕರೇ ಪಾಠ ಮಾಡುವ ಸ್ಥಿತಿ ಒದಗಿಬರಲಿದೆ. 

ತನ್ನ ತಾಯಿಯನ್ನು ಕೊಂದವರ ಮೇಲೆ ನಾಯಿಯ ಸೇಡು!

ಇದನ್ನು ಸಹ ಆದಷ್ಟು ಶೀಘ್ರದಲ್ಲಿ ನೇಮಕಾತಿ ಮಾಡಿಕೊಂಡರೆ ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಉತ್ತಮ.ತಾಲೂಕಿನ 8 ಶಾಲೆಗಳಲ್ಲಿ 17 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಇದನ್ನು ನೆಲಸಮ ಮಾಡಲು ಆದೇಶಿಸಲಾಗಿದೆ. 795 ಕೊಠಡಿಗಳ ಪೈಕಿ 556 ಕೊಠಡಿಗಳು ಉತ್ತಮವಾಗಿದ್ದು, 118 ಕೊಠಡಿಗಳು ಸಣ್ಣ ಪ್ರಮಾಣದ ದುರಸ್ತಿ ಕಾಣಬೇಕಾದರೆ, 76 ಕೊಠಡಿಗಳು ದೊಡ್ಡ ಪ್ರಮಾಣದ ದುರಸ್ತಿ ಕಾಣಬೇಕಿದೆ. ಈಗಾಗಲೇ ಕೊಠಡಿಗಳ ದುರಸ್ತಿಗಾಗಿ .2.73 ಕೋಟಿ ಅನುದಾದನ ಕೇಳಿ ಪ್ರಸ್ತಾವನೆ ಕಳುಹಿಸಲಾಗಿದೆ.

ಬಿಇಓ ಕಚೇರಿ ಕಟ್ಟಡವೇ ಶಿಥಿಲ!: ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿ ಕಚೇರಿ 40-50 ವರ್ಷ ಹಳೆಯದಾಗಿದ್ದು,ಶೀಘ್ರ ಇದರ ದುರಸ್ತಿ ಕಾರ್ಯ ಆಗಬೇಕಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹೊರಗಿನಿಂದ ನೋಡಲು ಸುಂದರವಾಗಿದ್ದರೂ ಒಳಗೆ ಸಾಕಷ್ಟುದುರಸ್ತಿ ಕಾಣಬೇಕಿದೆ. ಮೇಲ್ಚಾವಣಿಯ ಸ್ಲಾ್ಯಬ್‌ ಸರಳು ಕಾಣಲಾರಂಭಿಸಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಯ ಕೊರತೆಯೂ ಇದೆ.

ಸೌಲಭ್ಯ ವಂಚಿತ ಶಾಸಕರ ಮಾದರಿ ಶಾಲೆ: ಭಟ್ಕಳ ಪಟ್ಟಣದ ಹೃದಯಭಾಗವಾದ ಸೋನಾರ ಕೇರಿಯಲ್ಲಿರುವ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಕಳೆದಿದೆ. ಕೊಠಡಿ, ಕುಡಿಯುವ ನೀರು, ಕಾಂಪೌಂಡ್‌, ರಂಗಮಂದಿರ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕಾಗಿದೆ.

ಉತ್ತರ ಕನ್ನಡ: ಶಿಥಿಲಾವಸ್ಥೆಯಲ್ಲಿದೆ ಶಾಲಾ ‌ಕೊಠಡಿಗಳು, ಆತಂಕದಲ್ಲಿ ಪೋಷಕರು..!

ಮೇ 16ರಿಂದ ಶಾಲಾರಂಭವಾಗಲಿದೆ. ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗದಂತೆ ಶೀಘ್ರ ಅತಿಥಿ ಶಿಕ್ಷಕರ ನೇಮಕವೂ ಆಗಲಿದೆ. ಶಾಲೆಗಳಿಗೆ ಸೌಕರ್ಯ ಒದಗಿಸಲು ಅನುದಾನ ಕೇಳವಾಗಿದೆ.
-ದೇವಿದಾಸ ಮೊಗೇರ, ಭಟ್ಕಳ ಕ್ಷೇತ್ರಶಿಕ್ಷಣಾಧಿಕಾರಿ

ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಭರ್ತಿ, ಮೂಲಭೂತ ಸೌಲಭ್ಯ ಒದಗಿಸಿದರೆ ಮಕ್ಕಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದೆ. ಸೋನಾರ ಕೇರಿಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದುರಸ್ತಿಪಡಿಸಿ ಮೇಲ್ದರ್ಜೆಗೇರಿಸಬೇಕು.
-ವೆಂಕಟೇಶ ನಾಯ್ಕ ಆಸರಕೇರಿ, ಎಸ್ಡಿಎಂಸಿ ಅಧ್ಯಕ್ಷ

Follow Us:
Download App:
  • android
  • ios