ರಾಜ್ಯದ ಎಲ್ಲಾ ಸ ರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಿಎಂ ಪೋಷಣ್‌ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಮಕ್ಕಳಿಗೆ ‘ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸವಲತ್ತು ಮಕ್ಕಳಿಗೆ ಲಭಿಸಲಿದೆ.

ಬೆಂಗಳೂರು (ಡಿ.14) : ರಾಜ್ಯದ ಎಲ್ಲಾ ಸ ರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪಿಎಂ ಪೋಷಣ್‌ (ಮಧ್ಯಾಹ್ನದ ಬಿಸಿಯೂಟ) ಯೋಜನೆಯಡಿ ಮಕ್ಕಳಿಗೆ ‘ವಿಶೇಷ ಭೋಜನ ಮತ್ತು ಶಾಲೆಗಾಗಿ ನಾವು ನೀವು’ ಕಾರ್ಯಕ್ರಮ ಆಯೋಜಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸವಲತ್ತು ಮಕ್ಕಳಿಗೆ ಲಭಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕಾರ್ಯಕ್ರಮದಡಿ ದಾನಿಗಳು, ಟ್ರಸ್ಟ್‌, ಸಂಘ ಸಂಸ್ಥೆಗಳು, ಎಸ್‌ಡಿಎಂಸಿಗಳು, ಸಾರ್ವಜನಿಕರು ಸೇರಿದಂತೆ ಸಮುದಾಯದವರು ತಮ್ಮದೇ ಆರ್ಥಿಕ ಅಥವಾ ಆಹಾರ ಸಹಕಾರ, ನೆರವಿನೊಂದಿಗೆ ಮಕ್ಕಳಿಗೆ ಸಂಪೂರ್ಣ ವಿಶೇಷ ಭೋಜನ ವ್ಯವಸ್ಥೆ ಅಥವಾ ಬಿಸಿಯೂಟಕ್ಕೆ ಪೂರಕವಾಗಿ ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಈ ರೀತಿ ನೀಡುವ ಆಹಾರ ಸಂಪೂರ್ಣ ಸಸ್ಯಾಹಾರವಾಗಿರಬೇಕು ಹಾಗೂ ಬಿಸಿಯೂಟ ಯೋಜನೆಯಡಿ ಇಲಾಖೆ ಗುರುತಿಸಿರುವ ಆಹಾರ ಪದಾರ್ಥಗಳ ಪಟ್ಟಿಯಿಂದ ಕೂಡಿರಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

KARTET: ಮುಂದಿನ ವಾರಾಂತ್ಯದಲ್ಲಿ ಟಿಇಟಿ ಫಲಿತಾಂಶ ಪ್ರಕಟ : ಬಿ.ಸಿ. ನಾಗೇಶ್

ಈಗಾಗಲೇ ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್‌, ಚಂಡೀಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಜಾರಿಗೊಳಿಸಿರುವ ಈ ಕಾರ್ಯಕ್ರಮವನ್ನು ರಾಜ್ಯದಲ್ಲೂ ಪ್ರಸಕ್ತ ಸಾಲಿನಿಂದ ಜಾರಿಗೆ ತರುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌.ವಿಶಾಲ್‌ ಸುತ್ತೋಲೆ ಹೊರಡಿಸಿದ್ದಾರೆ.

ವಿಶೇಷವಾಗಿ ಊರಿನ ಹಬ್ಬ, ಜಾತ್ರೆ, ತೇರು, ರಾಷ್ಟ್ರೀಯ ಹಬ್ಬಗಳು, ಜನ್ಮದಿನ, ಜಯಂತಿ, ವಿವಾಹ, ವಾರ್ಷಿಕೋತ್ಸವ ಸೇರಿದಂತೆ ಸ್ಥಳೀಯವಾಗಿ ಸಮುದಾಯದಿಂದ ಸಾಮೂಹಿಕವಾಗಿ ಆಚರಿಸುವ ವಿಶೇಷ ಕಾರ್ಯಕ್ರಮಗಳ ಅಂಗವಾಗಿ ವಿಶೇಷ ಭೋಜನ, ವಿಶೇಷ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡಬಹುದಾಗಿದೆ. ಯಾವುದೇ ವರ್ಗ, ಜಾತಿ, ಮತ, ಲಿಂಗ ಭೇದವಿಲ್ಲದೆ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯನ್ನು ಮಕ್ಕಳಲ್ಲಿ ಬೆಳೆಸುವುದು. ಜತೆಗೆ ಸಮುದಾಯದಲ್ಲೂ ಒಗ್ಗಟ್ಟು, ಸಹಬಾಳ್ವೆ, ಬಾಂಧವ್ಯ, ಐಕ್ಯತೆ ಮೂಡಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ಇಲಾಖೆ ಹೇಳಿದೆ.

ಯಾವ ಆಹಾರ ಪೂರೈಕೆ?

ಪ್ರಸ್ತುತ ಬಿಸಿಯೂಟದೊಂದಿಗೆ ಪೂರಕ ಪೌಷ್ಟಿಕಾಹಾರವಾಗಿ ವಿತರಿಸುವ ಆಹಾರ ಪದಾರ್ಥಗಳನ್ನು ಈ ಯೋಜನೆಯಡಿ ನೀಡಬಹುದು. ಉದಾಹರಣೆಗೆ ಮೊಟ್ಟೆ, ಶೇಂಗಾ ಚಿಕ್ಕಿ, ಹಲ್ವಾ, ಬಿಸ್ಕೆಟ್‌, ಹಪ್ಪಳ, ಉಪ್ಪಿನಕಾಯಿ, ವಿವಿಧ ಬಗೆಯ ಸಿಹಿ ತಿಂಡಿ, ಸಂಜೆ ವೇಳೆ ಸ್ಯಾಕ್ಸ್‌, ಬಾಳೆ ಹಣ್ಣು, ಇತರೆ ಹಣ್ಣು-ಹಂಪಲು, ಮೊಳಕೆ ಕಾಳು, ಬೆಳಗಿನ ಉಪಹಾರ ಇತ್ಯಾದಿ ಮಕ್ಕಳು ಇಷ್ಟಪಡುವ ಪೂರಕ ಆಹಾರ ಪದಾರ್ಥಗಳನ್ನು ನೀಡಬಹುದು.

ಸರ್ಕಾರಿ ಶಾಲೆ ಮಕ್ಕಳ ಊಟಕ್ಕೆ ಹುಳುಬಿದ್ದ ಅಕ್ಕಿ, ಬೇಳೆ ಬಳಕೆ

ಆಹಾರ ಸ್ಥಳೀಯ ಪ್ರದೇಶದ ಆಹಾರ ಪದ್ಧತಿಗೆ ಒಪ್ಪಿತವಾಗಿರಬೇಕು ಮತ್ತು ಇಲಾಖೆ ಸೂಚಿತ ಆಹಾರ ಪಟ್ಟಿಯಲ್ಲಿರಬೇಕು. ಋುತುಮಾನಕ್ಕೆ ತಕ್ಕ ಹಣ್ಣು, ತರಕಾರಿ ಮತ್ತಿತರ ಪದಾರ್ಥಗಳನ್ನು ಬಿಸಿಯೂಟ ತಯಾರಿಸಲು ದಾನಿಗಳಿಂದ ಸ್ವೀಕರಿಸಬಹುದು. ಕೇವಲ ಆಹಾರ ಪದಾರ್ಥಗಳ ರೂಪದಲ್ಲಿ ಮಾತ್ರವಲ್ಲದೆ ತಟ್ಟೆ, ಲೋಟ, ಗ್ರೈಂಡರ್‌, ಮಿಕ್ಸಿ ಸೇರಿದಂತೆ ಬಿಸಿಯೂಟ ತಯಾರಿಕೆಗೆ ಬೇಕಾದ ಯಾವುದೇ ಭೌತಿಕ ವಸ್ತುಗಳ ರೂಪದಲ್ಲೂ ದಾನಿಗಳ ಕೊಡುಗೆಗಳನ್ನು ಸ್ವೀಕರಿಸಬಹುದು. ಈ ರೀತಿ ಸ್ವೀಕರಿಸುವ ಪ್ರತಿಯೊಂದಕ್ಕೂ ದಾಖಲೆ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ.