ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯು ಶೈಕ್ಷಣಿಕ ಸಂಗತಿಗಳ ಕುರಿತು ಹೇಳುತ್ತದೆಯೇ ಹೊರತು, ಶಿಕ್ಷಣದ ಆತ್ಮವೇ ಆಗಿರುವ ಶಿಕ್ಷಕರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ ಎಲ್‌.ಹನುಮಂತಯ್ಯ ವಿಷಾದಿಸಿದರು.

ಬೆಂಗಳೂರು (ಡಿ.19): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯು ಶೈಕ್ಷಣಿಕ ಸಂಗತಿಗಳ ಕುರಿತು ಹೇಳುತ್ತದೆಯೇ ಹೊರತು, ಶಿಕ್ಷಣದ ಆತ್ಮವೇ ಆಗಿರುವ ಶಿಕ್ಷಕರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ ಎಲ್‌.ಹನುಮಂತಯ್ಯ ವಿಷಾದಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಸಂಘದಿಂದ ಭಾನುವಾರ ಜ್ಞಾನಭಾರತಿಯ ಪ್ರೊ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

Add Asianetnews Kannada as a Preferred SourcegooglePreferred

ಎನ್‌ಇಪಿಯು ಶೈಕ್ಷಣಿಕ ವಿಷಯಗಳ ಬಗ್ಗೆ ಒತ್ತು ನೀಡುತ್ತದೆ. ಆದರೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಪ್ರಸ್ತಾಪವನ್ನೇ ಮಾಡುವುದಿಲ್ಲ. ಆಧುನಿಕ ಶೈಕ್ಷಣಿಕ ನೀತಿಗಳು ಶಿಕ್ಷಕರನ್ನು ತನ್ನ ಕಾರ್ಯತಂತ್ರದ ಸಲಕರಣೆಗಳನ್ನಾಗಿ ಮಾತ್ರ ಭಾವಿಸುತ್ತವೆ. ಇದು ಬದಲಾಗಬೇಕು. ಕನ್ನಡ ಅಧ್ಯಾಪಕರು ಮತ್ತು ಕನ್ನಡ ಅಧ್ಯಾಪಕರ ಸಂಘಟನೆಗಳು ಕನ್ನಡದ ಸಮಸ್ಯೆಗಳ ಬಗ್ಗೆ ಸದಾ ಧ್ವನಿ ಎತ್ತುತ್ತಿರಬೇಕು ಎಂದು ಸಲಹೆ ನೀಡಿದರು.

ನಗರ ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಬೆಳಕೆರೆ ಲಿಂಗರಾಜಯ್ಯ ಮಾತನಾಡಿ, ಆಧುನಿಕ ಶಿಕ್ಷಣ ನೀತಿಗಳು ಸಾಂಪ್ರದಾಯಿಕ ಮೌಲ್ಯಯುತ ಶಿಕ್ಷಣ ಹಾಗೂ ಕನ್ನಡದಂತಹ ದೇಶೀಯ ಭಾಷೆಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಕಾಲಕ್ರಮೇಣ ಶಿಕ್ಷಣವು ತನ್ನ ಮೂಲ ಸ್ವರೂಪ ಮತ್ತು ಆಶಯ ಕಳೆದುಕೊಳ್ಳುವ ಅಪಾಯ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಸಂಘವು ಹಮ್ಮಿಕೊಂಡಿರುವ ರಚನಾತ್ಮಕ ಕಾರ್ಯಕ್ರಮಗಳು ಯಾವುದೇ ಅಧ್ಯಾಪಕರ ಸಂಘಗಳು ಹೆಮ್ಮೆಯಿಂದ ಅನುಸರಿಸುವಷ್ಟುಉತ್ಕೃಷ್ಟವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಡಾ.ಆರ್‌.ಅಮರೇಂದ್ರ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎಚ್‌.ಉಮಾವತಿ ಉಪಸ್ಥಿತರಿದ್ದರು.

ವಿವಿ ಆಸ್ತಿ ಮಾರಾಟಕ್ಕೆ ಅವಕಾಶ ನೀಡಬೇಡಿ: ಎಬಿವಿಪಿ ಆಗ್ರಹ
‘ಕರ್ನಾಟಕ ರಾಜ್ಯ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ಮಸೂದೆ-2022’ರಲ್ಲಿ ವಿಶ್ವವಿದ್ಯಾಲಯಗಳ ಸ್ಥಿರ ಆಸ್ತಿ ಮಾರಾಟ ಮತ್ತು ಅಡವಿಟ್ಟು ಸಾಲ ಪಡೆಯಲು ಇರುವ ಅವಕಾಶವನ್ನು ತೆಗೆದುಹಾಕುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಒತ್ತಾಯಿಸಿದೆ.

ಸಹಾಯಕ ಪ್ರಾಧ್ಯಾಪಕರ ಮಧ್ಯಂತರ ವರ್ಗಾವಣೆಗೆ ಸಿದ್ದರಾಮಯ್ಯ ಆಕ್ರೋಶ

ಮಸೂದೆಯ ಸಾಧಕ-ಬಾಧಕ ಕುರಿತು ಶಿಕ್ಷಕರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತಜ್ಞರ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ವಿವಿಗಳ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು, ಅಡವಿಟ್ಟು ಸಾಲವನ್ನೂ ಪಡೆಯಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಲು ನಿರ್ಧರಿಸಲಾಗಿದೆ.

HAVERI: ತೇನ್‌ಸಿಂಗ್‌ ಕತೆ ಹೇಳಿ ಮಕ್ಕಳಿಗೆ ದೃಢಸಂಕಲ್ಪದ ಪಾಠ ಮಾಡಿದ ಸಿಎಂ ಬೊಮ್ಮಾಯಿ

ಮಸೂದೆಯಲ್ಲಿ, ಕುಲಪತಿಗಳ ನಿವೃತ್ತಿ ವಯಸ್ಸನ್ನು 70 ವರ್ಷಕ್ಕೆ ನಿಗದಿ ಮಾಡಿದ್ದು ಇದನ್ನು 65 ವರ್ಷಕ್ಕೆ ಇಳಿಸಬೇಕು. ಬೋರ್ಡ್‌ ಆಫ್‌ ಗವರ್ನರ್‌ ಹಾಗೂ ಅಕಾಡೆಮಿಕ್‌ ಸೆನೆಟ್‌ ಸದಸ್ಯ ಸ್ಥಾನದಲ್ಲಿ ವಿದ್ಯಾರ್ಥಿಗಳಿಗೆ ಪ್ರಾತಿನಿಧ್ಯ ನೀಡಬೇಕು. ಬೋರ್ಡ್‌ ಆಫ್‌ ಗವರ್ನರ್‌ನ ಅಧ್ಯಕ್ಷರ ಆಯ್ಕೆಯಲ್ಲಿ ಕನಿಷ್ಠ ವಿದ್ಯಾರ್ಹತೆ ಮತ್ತು ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಬೇಕು ಎಂದು ಆಗ್ರಹಿಸಲಾಯಿತು.