Asianet Suvarna News Asianet Suvarna News

ಶಿಕ್ಷಣ ಸುಧಾರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಅಗತ್ಯ: ಸಚಿವ ಸುರೇಶ್‌ ಕುಮಾರ್‌

ವರದಿ ಅನುಷ್ಠಾನಕ್ಕೆ ಕೆಲಸ ಮಾಡಬೇಕಿದೆ: ಸುರೇಶ್‌ ಕುಮಾರ್‌| ರಾಜ್ಯದ ನಿಲುವಿಗೆ ಅನುಗುಣವಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಅಧಿಕಾರಿಗಳು ಯೋಗ್ಯ ಸಲಹೆಗಳಿದ್ದರೆ ಮುಕ್ತವಾಗಿ ವ್ಯಕ್ತಪಡಿಸಬೇಕು| ಮೊದಲಿದ್ದ 10+2 ವ್ಯವಸ್ಥೆ ಬದಲಾಗಿ ಹೊಸ ನೀತಿಯಂತೆ 5+3+3+4 ಶಿಕ್ಷಣ ವ್ಯವಸ್ಥೆ ಬರಲಿದೆ| 

Minister Suresh Kumar Says National Education Policy is Essential for Education Reform
Author
Bengaluru, First Published Sep 7, 2020, 10:12 AM IST

ಬೆಂಗಳೂರು(ಸೆ.07): ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಸುಧಾರಣೆ ತರಲು ಹಾಗೂ ಸಮಾಜಕ್ಕೆ ಇನ್ನಷ್ಟುಬಲ ತುಂಬಲು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಮತ್ತು ಯಶಸ್ಸು ಎಲ್ಲರ ಪಾಲ್ಗೊಳ್ಳುವಿಕೆಯಿಂದ ಸಾಧ್ಯವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನ ಕುರಿತು ಅಭಿಪ್ರಾಯ ಸಂಗ್ರಹಿಸಲು ರಾಜ್ಯದ ಡಯಟ್‌ ಪ್ರಾಚಾರ್ಯರು, ಉಪನ್ಯಾಸಕರು, ಜಿಲ್ಲಾ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ವಿಡಿಯೋ (ವೆಬಿನಾರ್‌) ಸಂವಾದ ನಡೆಸಿದರು.

ನೂತನ ನೀತಿಯನ್ನು ಏಕಾಏಕಿ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಹಲವಾರು ಸುತ್ತಿನ ಸಂವಾದ, ಚರ್ಚೆ, ಆಕ್ಷೇಪಣೆಗಳ ಸ್ವೀಕರಿಸಿ, ಎಲ್ಲ ಆಯಾಮಗಳನ್ನು ಒಳಗೊಳ್ಳುವಂತೆ ರೂಪಿಸಲಾಗಿದೆ. ಇದರ ಅನುಷ್ಠಾನಕ್ಕೆ ಎಲ್ಲರೂ ಶ್ರಮಿಸಬೇಕು. ವರದಿ ರಚಿಸಿದ ಸಮಿತಿಯಲ್ಲಿ ರಾಜ್ಯದ ಮೂವರು ಸದಸ್ಯರಿದ್ದ ಕಾರಣ ಕರ್ನಾಟಕದ ಪ್ರಭಾವವೇ ಹೆಚ್ಚಾಗಿದ್ದು, ಅಳವಡಿಸಿಕೊಳ್ಳಲು ಅನುಕೂಲವಾಗಿದೆ ಎಂದು ಹೇಳಿದರು.

ಭಾರತವು ಜಗತ್ತಿನ ಜ್ಞಾನ ಕಣಜವಾಗಲಿದೆ: ಡಿಸಿಎಂ ಅಶ್ವತ್ಥ ನಾರಾಯಣ

ವರದಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಸಮರ್ಪಣಾ ಹಾಗೂ ಸಕಾರಾತ್ಮಕ ಮನೋಭಾವದಿಂದ ಕೆಲಸ ಮಾಡಬೇಕಿದೆ. ರಾಜ್ಯದ ನಿಲುವಿಗೆ ಅನುಗುಣವಾಗಿ ಹೊಸ ನೀತಿಯ ಅನುಷ್ಠಾನಕ್ಕೆ ಅಧಿಕಾರಿಗಳು ಯೋಗ್ಯ ಸಲಹೆಗಳಿದ್ದರೆ ಮುಕ್ತವಾಗಿ ವ್ಯಕ್ತಪಡಿಸಬೇಕು. ಮೊದಲಿದ್ದ 10+2 ವ್ಯವಸ್ಥೆ ಬದಲಾಗಿ ಹೊಸ ನೀತಿಯಂತೆ 5+3+3+4 ಶಿಕ್ಷಣ ವ್ಯವಸ್ಥೆ ಬರಲಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಶಾಲಾ ಶಿಕ್ಷಣದ ಎಂಟು ಅಧ್ಯಾಯಗಳನ್ನು ವಿಭಾಗೀಯವಾರು ಅಧಿಕಾರಿಗಳು ವಿಶ್ಲೇಷಿಸಿ ಸಲಹೆ ಸೂಚನೆಗಳನ್ನು ನೀಡಿದರು. 100ಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿಗಳು ಭಾಗವಹಿಸಿದ್ದರು. ಬೋಧನಾ ತಯಾರಿ, ವೃತ್ತಿ ಕೌಶಲ ನೀಡಿಕೆ, ಶಿಕ್ಷಕರ ನೇಮಕ, ಶಿಕ್ಷಕರ ವೃತ್ತಿಪರತೆ ಪರೀಕ್ಷೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಅಧಿಕಾರಿಗಳು ವಿಷಯ ಮಂಡಿಸಿದರು. ಸಮಗ್ರ ಶಿಕ್ಷಣ ರಾಜ್ಯ ಯೋಜನಾ ನಿರ್ದೇಶಕಿ ದೀಪಾ ಚೋಳನ್‌ ಉಪಸ್ಥಿತರಿದ್ದರು.
 

Follow Us:
Download App:
  • android
  • ios