* 1-12ನೇ ತರಗತಿಗೆ ಪಠ್ಯದ ಭಾಗವಾಗಿ ಸೇರಿಸಲು ಶಿಕ್ಷಣ ಇಲಾಖೆಗೆ ಪತ್ರ* ಗೋ ಉತ್ಪನ್ನಗಳ ಔಷಧ ಬಳಕೆಯ ಸಾಧ್ಯತೆ ಬಗ್ಗೆ ಆರೋಗ್ಯ ಇಲಾಖೆಯಿಂದ ಅನುಮತಿ ಕೋರಿಕೆ* ಗೋಶಾಲೆ ಚಟುವಟಿಕೆಯ ವಿದ್ಯುತ್‌ ಬಿಲ್‌ ರಿಯಾಯಿರಿಗೆ ಇಂಧನ ಇಲಾಖೆಗೆ ಮನವಿ 

ಬೆಂಗಳೂರು(ಜು.18): ಗೋವು ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ವಿಷಯವನ್ನು 1 ರಿಂದ 12ನೇ ತರಗತಿವರೆಗಿನ ಪಠ್ಯದಲ್ಲಿ ಅಳವಡಿಸುವಂತೆ ಕೋರಿ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ವಿದ್ಯಾರ್ಥಿಗಳಿಗೆ ಸಾಮಾಜಿಕ ಪರಿಸರ ಅಧ್ಯಯನದ ಭಾಗವಾಗಿ ಭಾರತೀಯ ಗೋವುಗಳ ಜತೆಗಿರುವ ಮಾನವ ಸಂಬಂಧ ಹಾಗೂ ಜೈವಿಕ ವೈವಿಧ್ಯತೆ, ಪರಿಸರ ಅವಲಂಬನೆ, ಪರಿಸರ ಸಂರಕ್ಷಣೆ ಕುರಿತು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿ ಹೇಳುವ ಕೆಲಸವಾಗಬೇಕಾಗಿದೆ. ಭಾರತೀಯ ಗೋವುಗಳು ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದಂತೆ 1ನೇ ತರಗತಿಯಿಂದ 12ನೇ ತರಗತಿಯವರೆಗೆ ಪಠ್ಯ ಅಳವಡಿಸಿದಲ್ಲಿ ಮಕ್ಕಳಲ್ಲಿ ಗೋವುಗಳ ಬಗ್ಗೆ ಅರಿವು ಮೂಡಿಸಲು ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ. ಶಿಕ್ಷಣ ಸಚಿವರೊಂದಿಗೆ ಇದನ್ನು ಚರ್ಚಿಸಿ ಗೋವುಗಳ ಬಗ್ಗೆ ಪಠ್ಯ ಅಳವಡಿಸಲು ಕೋರಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ

ಗೋವಿನ ಉತ್ಪನ್ನಗಳು ನಮ್ಮ ನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿವೆ. ಪಾರಂಪರಿಕವಾಗಿ ಗೋ ಮೂತ್ರ, ಸಗಣಿ ಸಹ ಔಷಧ ರೂಪದಲ್ಲಿ ಬಳಕೆಯಾಗುತ್ತಿರುವುದಲ್ಲದೇ ಅನೇಕ ಕಾಯಿಲೆಗಳು ಪಂಚಗವ್ಯದಂತಹ ವಿಶಿಷ್ಟ ಸಂಯೋಜನೆಯಿಂದ ಗುಣಮುಖವಾದ ಉದಾಹರಣೆಗಳಿವೆ. ಇದನ್ನೇ ಆಧಾರವಾಗಿಟ್ಟುಕೊಂಡು ಗೋ ಉತ್ಪನ್ನಗಳಿಂದ ಔಷಧ ತಯಾರಿಸಿ ಮಾನವರ ಚಿಕಿತ್ಸೆಗೆ ಬಳಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುಮತಿ ಕೋರಲಾಗಿದೆ ಎಂದಿದ್ದಾರೆ.

ಗೋಶಾಲೆಯ ಚಟುವಟಿಕೆಗಳನ್ನು ಕೃಷಿ ಚಟುವಟಿಕೆ ಎಂದು ಪರಿಗಣಿಸಿ ವಿದ್ಯುತ್‌ ಬಿಲ್‌ ಪಾವತಿಗೆ ವಿನಾಯಿತಿ ಅಥವಾ ಸಬ್ಸಿಡಿ ನೀಡುವಂತೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗಿದೆ ಎಂದೂ ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.