ಕೊರೋನಾ ನಡುವೆ ಶಾಲಾ ಕಾಲೇಜು ಆರಂಭ: ಉಲ್ಟಾ ಹೊಡೆದ ಮಕ್ಕಳ ಹಕ್ಕು ಆಯೋಗ!
ಕೊರೋನಾ ವೈರಸ್ ನಡುವೆ ಶಾಲಾ-ಕಾಲೇಜು ಆರಂಭಿಸುವ ಕುರಿತು ಪರ ವಿರೋಧಗಳು ಕೇಳಿ ಬರುತ್ತಿದೆ. ಇದರ ನಡುವೆ ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದೀಗ ಉಲ್ಟಾ ಹೊಡೆದಿದೆ.
ಬೆಂಗಳೂರು(ಅ.09): ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಶಾಲಾ-ಕಾಲೇಜು ಪುನರ್ ಆರಂಭ ಇದೀಗ ಗೊಂದಲ ಗೂಡಾಗಿದೆ. ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆ ಆರಂಭ ಬೇಡ ಎಂದಿದ್ದರೆ, ಸರ್ಕಾರ ತರಗತಿ ಆರಂಭಕ್ಕೆ ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ ಪೋಷಕರಿಗೆ ಶಾಕ್ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದೀಗ ಭಾರಿ ಟೀಕೆಯಿಂದ ಉಲ್ಟಾ ಹೊಡೆದಿದೆ. ಶಾಲೆ ಆರಂಭ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು ಎಂದಿದೆ.
ಕೊರೋನಾ ರಣಕೇಕೆ ಮದ್ಯೆ ಶಾಲಾರಂಭಕ್ಕೆ ಮಕ್ಕಳ ಹಕ್ಕು ಆಯೋಗ ಶಿಫಾರಸು..!
ಕೊರೋನಾ ವೈರಸ್ ಭೀತಿ ನಡುವೆ ಶಾಲಾ-ಕಾಲೇಜು ಆರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಇದಕ್ಕಾಗಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಪೋಷಕರು ಹಾಗೂ ರಾಜ್ಯದ ಜನತಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಕ್ಕಳ ಜೊತೆ ಚೆಲ್ಲಾಟವಾಡಬೇಡಿ ಎಂಬ ಸಲಹೆ ಬಂದಿತ್ತು. ಈ ಜಟಾಪಟಿ ನಡುವೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲೆ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿತ್ತು.
ಶಾಲೆ ಆರಂಭ ಬೇಡ, ಎಲ್ಲರನ್ನು ಪಾಸ್ ಮಾಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ಬೆನ್ನಲ್ಲೇ ಭಾರಿ ವಿರೋಧ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಮಕ್ಕಳ ಹಕ್ಕು ಆಯೋಗ ಸರ್ಕಾರಕ್ಕೆ ನೀಡಿದ್ದ ಶಿಫಾರಸು ಅದೇಶ ಹಿಂಪಡೆದಿದೆ. ಶಾಲೆಗಳನ್ನ ಪ್ರಾರಂಭಿಸುವ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ. ಆದರೆ ಶಾಲೆ ಪ್ರಾರಂಭಿಸುವ ಮುನ್ನ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕೆಲ ಕ್ರಮಗಳನ್ನ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.