ಮೊರಾರ್ಜಿ ಶಾಲೆಯ ಭೋಜನಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದ ಕೋಟಾ ಶ್ರೀನಿವಾಸ ಪೂಜಾರಿ 

ಶಿರಸಿ(ಜು.21): ರಾಜ್ಯದ ಮೊರಾರ್ಜಿ ವಸತಿ ನಿಲಯ ಸೇರಿದಂತೆ ಬಡ ವಿದ್ಯಾರ್ಥಿಗಳು ಓದುವ ವಸತಿ ಶಾಲೆಗಳನ್ನು ಪಿಯು ವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು. ತಾಲೂಕಿನ ಕಲ್ಲಿ ಮೊರಾರ್ಜಿ ವಸತಿ ಶಾಲೆಗೆ ಬುಧವಾರ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಬಡವರು ಮತ್ತು ಪ್ರತಿಭಾವಂತ ಮಕ್ಕಳಿಗೆ ಮೊರಾರ್ಜಿ ಶಾಲೆಗಳು ಉತ್ತಮ ವೇದಿಕೆಯಾಗಿವೆ. 6ನೇ ತರಗತಿಯಿಂದ ಪಿಯು ಶಿಕ್ಷಣದ ವರೆಗೂ ಒಂದೇ ಸ್ಥಳದಲ್ಲಿ ವಿದ್ಯಾಭ್ಯಾಸ ದೊರೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಮೊರಾರ್ಜಿ ಶಾಲೆಗಳನ್ನು ಪಿಯು ವರೆಗೂ ವಿಸ್ತರಿಸುವ ಕುರಿತಂತೆ ಶಿಕ್ಷಣ ಇಲಾಖೆಯೊಂದಿಗೂ ಚರ್ಚೆ ನಡೆಸಲಾಗಿದೆ ಎಂದರು.

Add Asianetnews Kannada as a Preferred SourcegooglePreferred

ವಿದ್ಯಾರ್ಥಿನಿಯರಿಗೆ ಈಗಾಗಲೇ ಓಬವ್ವ ಆತ್ಮರಕ್ಷಣಾ ಕಲೆಯೊಂದಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿನಿಯರು ಸಹ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ವಸತಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನ ಕಡಿಮೆ ಇದೆ. ಪ್ರಾಮಾಣಿಕ ಸೇವೆಯಿಂದಾಗಿ ಶಾಲೆಗಳೂ ಉತ್ತಮ ಮಟ್ಟದಲ್ಲಿ ನಡೆಯುತ್ತಿವೆ. ಅವರ ವೇತನ ಹೆಚ್ಚಿಸುವ ಕುರಿತಂತೆ ಯತ್ನ ನಡೆಯುತ್ತಿದ್ದು, ಹಣಕಾಸು ವಿಭಾಗದಿಂದ ಒಪ್ಪಿಗೆಗೆ ಕಾಯುತ್ತಿದ್ದೇವೆ ಎಂದರು.

ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ಇನ್ಮುಂದೆ ಸ್ಪೋಕನ್ ಇಂಗ್ಲೀಷ್ ಕ್ಲಾಸ್

ಕಳೆದ ಮಳೆಗಾಲದ ಅವಧಿಯಲ್ಲಿ ಪ್ರಕೃತಿ ವಿಕೋಪ ಅನುದಾನ ಅಡಿಯಲ್ಲಿ ಮಂಜೂರಾದ ಹಣ ಗುತ್ತಿಗೆದಾರರಿಗೆ ಸಂದಾಯವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಣವನ್ನು ಖಂಡಿತವಾಗಿಯೂ ಮಂಜೂರು ಮಾಡುತ್ತೇವೆ. ಆದರೆ, ಹಂತ ಹಂತವಾಗಿ ಬಿಡುಗಡೆ ಆಗುತ್ತಿದೆ. ಮೊದಲು ಆದ ಕಾಮಗಾರಿಗಳಿಗೆ ಮೊದಲು ಹಣ ಬಿಡುಗಡೆ ಆಗುತ್ತಿದ್ದು, ಗುತ್ತಿಗೆದಾರರು ಅವರ ಹಣದ ಸಲುವಾಗಿ ಆಲೋಚನೆ ಮಾಡಬೇಕಾಗಿಲ್ಲ ಎಂದರು. ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಸಹಾಯಕ ಆಯುಕ್ತ ಆರ್‌. ದೇವರಾಜ, ತಹಸೀಲ್ದಾರ ಶ್ರೀಧರ ಮುಂದಲಮನಿ ಇತರರಿದ್ದರು.

ವಿದ್ಯಾರ್ಥಿಗಳೊಂದಿಗೆ ಊಟ:

ಮೊರಾರ್ಜಿ ಶಾಲೆಯ ಭೋಜನಾಲಯಕ್ಕೆ ಭೇಟಿ ನೀಡಿದ ಕೋಟಾ ಶ್ರೀನಿವಾಸ ಪೂಜಾರಿ ಅಲ್ಲಿಯೇ ವಿದ್ಯಾರ್ಥಿಗಳೊಂದಿಗೆ ಊಟ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಕುಶಲೋಪರಿ ವಿಚಾರಿಸಿದರು.