ಸಿಬಿಎಸ್ಇ 10ನೇ ತರಗತಿಗೆ ವರ್ಷಕ್ಕೆ ಎರಡು ಪರೀಕ್ಷೆ ನಡೆಸುವ ಚಿಂತನೆ ನಡೆಸಿದೆ. 2026-27ನೇ ಸಾಲಿನಿಂದ ಅಂತಾರಾಷ್ಟ್ರೀಯ ಪಠ್ಯಕ್ರಮ ಪರಿಚಯಿಸಲು ತೀರ್ಮಾನಿಸಿದೆ. ಸಾರ್ವಜನಿಕರ ಅಭಿಪ್ರಾಯ ಪಡೆಯಲು ಮುಂದಿನ ಸೋಮವಾರ ತೀರ್ಮಾನಿಸಲಾಗಿದೆ.
ನವದೆಹಲಿ: ಮುಂದಿನ ವರ್ಷದಿಂದ ಸಿಬಿಎಸ್ಇನಿಂದ (ಸೆಂಟ್ರಲ್ ಬೋರ್ಡ್ ಆಫ್ ಸೆಂಕೆಂಡರಿ ಎಜುಕೇಷನ್) 10ನೇ ತರಗತಿಗೆ ವರ್ಷಕ್ಕೆ ಎರಡು ಬೋರ್ಡ್ ಪರೀಕ್ಷೆ ನಡೆಸಲು ಚಿಂತಿಸಿದೆ. ಇದರ ಜತೆಗೆ, 2026-27ನೇ ಸಾಲಿನಿಂದ ಸಿಬಿಎಸ್ಇ ಜತೆಗೆ ಸಂಯೋಜಿತ 260 ವಿದೇಶಿ ಶಾಲೆಗಳಿಗೆ ಭಾರತೀಯ ಪಾಠವನ್ನೂ ಒಳನ್ನೊಳಗೊಂಡ ಅಂತಾರಾಷ್ಟ್ರೀಯ ಪಠ್ಯ ಪರಿಚಯಿಸಲು ತೀರ್ಮಾನಿಸಿದೆ.ಸಿಬಿಎಸ್ಇ ಅಧಿಕಾರಿಗಳು, ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಷನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್ಸಿಇಆರ್ಟಿ), ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ ಮುಖ್ಯಸ್ಥರ ಜತೆಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ನಡೆದ ಶಿಕ್ಷಣ ಸಚಿವಾಲಯದ ಸಭೆಯಲ್ಲಿ ಈ ಕುರಿತು ಬುಧವಾರ ಚರ್ಚೆ ನಡೆಸಲಾಯಿತು. ಮುಂದಿನ ಸೋಮವಾರ ಈ ಕರಡು ನೀತಿಗಳ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿದೆ.
ಬೆಸ್ಟ್ ಆಫ್ 2 ಆಯ್ಕೆ:ಹೊಸ ವ್ಯವಸ್ಥೆಯಲ್ಲಿ ಎರಡು ಪರೀಕ್ಷೆಯಲ್ಲಿ ಯಾವುದರಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೋ ಆ ಪರೀಕ್ಷೆಯ ಅಂಕಗಳನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬಹುದಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)ಗೆ ಪೂರಕವಾಗಿದೆ. ವಾರ್ಷಿಕವಾಗಿ ಒಂದೇ ಬಾರಿ ನಡೆಯುವ ಬೋರ್ಡ್ ಎಕ್ಸಾಂನಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ತಮ್ಮ ಸಾಧನೆ ಉತ್ತಮಪಡಿಸಲು ಈ ಪರೀಕ್ಷಾ ವಿಧಾನ ದಾರಿ ಮಾಡಿಕೊಡುತ್ತದೆ.
ಈ ಹೊಸ ಪರೀಕ್ಷಾ ಮಾದರಿ ಅಂತಾರಾಷ್ಟ್ರೀಯ ಪರೀಕ್ಷಾ ಪದ್ಧತಿಗೆ ಅನುಗುಣವಾಗಿದೆ. ಅಮೆರಿಕದ ಎಸ್ಎಟಿ ಪರೀಕ್ಷಾ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಯಾವ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುತ್ತಾರೋ ಆ ಫಲಿತಾಂಶವನ್ನೇ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ರೀತಿಯ ಬದಲಾವಣೆ ಮಾಮೂಲಿ ಪರೀಕ್ಷಾ ಸಾಧನೆಗಿಂತ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ಸ್ವಸುಧಾರಣೆಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಪಸ್ ಬರುವೆ, ಸೇಡು ತೀರಿಸಿಕೊಳ್ಳುವೆ : ಹಸೀನಾ
ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನುಸ್ ವಿರುದ್ಧ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಯೂನಸ್ ಅವರೊಬ್ಬ ದರೋಡೆಕೋರ, ಆತಂಕವಾದಿ, ದೇಶದಲ್ಲಿ ಅವರು ಅರಾಜಕತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ, ನಾನು ದೇಶಕ್ಕೆ ವಾಪಸ್ ಬರುತ್ತೇನೆ ಮತ್ತು ವಿದ್ಯಾರ್ಥಿ ದಂಗೆಯಲ್ಲಿ ಮೃತಪಟ್ಟ ನಮ್ಮ ಪೊಲೀಸರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದು ಘೋಷಿಸಿದ್ದಾರೆ.
ವಿದ್ಯಾರ್ಥಿಗಳ ದಂಗೆಯಲ್ಲಿ ಮೃತಪಟ್ಟ ನಾಲ್ವರು ಪೊಲೀಸರ ಪತ್ನಿಯರ ಜತೆಗೆ ಝೂಮ್ ಕರೆ ಮಾಡಿ ಮಾತನಾಡಿ ಸಂತಾಪ ಸೂಚಿಸಿದ ಅವರು, ದೇಶಕ್ಕೆ ವಾಪಸಾದ ಬಳಿಕ ಪರಿಹಾರ ನೀಡುವುದಾಗಿ ತಿಳಿಸಿದರು.ಬಾಂಗ್ಲಾದೇಶವನ್ನು ನಾಶ ಮಾಡಲಾಗುತ್ತಿದೆ. ದೇವರ ದಯೆಯಿಂದ ನಾನು ಏನೋ ಒಳ್ಳೆಯದನ್ನು ಮಾಡಲೆಂದೇ ಜೀವಂತವಾಗಿ ಉಳಿದಿದ್ದೇನೆ. ನಾನು ವಾಪಸ್ ಬಂದು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.
ಯೂನಸ್ ಸರ್ಕಾರಕ್ಕೆ ಆಡಳಿತದ ಅನುಭವ ಇಲ್ಲ. ಉಗ್ರರನ್ನು ಬಿಡುಗಡೆ ಮಾಡುವ ಮೂಲಕ ಮತ್ತು ವಿಚಾರಣಾ ಸಮಿತಿಗಳನ್ನು ರದ್ದುಮಾಡುವ ಮೂಲಕ ಅವರು ಜನರನ್ನು ಹತ್ಯೆ ಮಾಡಲು ಭಯೋತ್ಪಾದಕರನ್ನು ಛೂಬಿಡುತ್ತಿದ್ದಾರೆ. ಪೊಲೀಸರ ಹತ್ಯೆಗಳು ನನ್ನನ್ನು ಅಧಿಕಾರದಿಂದ ಕಿತ್ತೊಗೆಯಲು ಆ ವ್ಯಕ್ತಿ(ಯೂನಸ್) ಮಾಡಿದ ಷಡ್ಯಂತ್ರದ ಭಾಗ ಎಂದು ಆರೋಪಿಸಿದ ಅವರು, ನಾನು ದೇಶಕ್ಕೆ ವಾಪಸಾಗುತ್ತೇನೆ ಮತ್ತು ನಮ್ಮ ಪೊಲೀಸರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇನೆ ಎಂದರು.ಈ ಮಧ್ಯಂತರ ಸರ್ಕಾರವನ್ನು ಕಿತ್ತೊಗೆಯುವಂತೆ ಜನ ನೋಡಿಕೊಳ್ಳಬೇಕಿದೆ. ಯೂನಸ್ ಸರ್ಕಾರದ ಅಡಿ ಭಾರೀ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿದರು.
ಯೂನಸ್ ತಿರುಗೇಟು:ಹಸೀನಾ ಅವರು ಪೊಲೀಸರ ಕುಟುಂಬದ ಜತೆಗೆ ಮಾತುಕತೆ ನಡೆಸಿದ ಬೆನ್ನಲ್ಲೇ ಯೂನಸ್ ಅವರು ಹಸೀನಾ ವಿರುದ್ಧ ಕಿಡಿಕಾರಿದ್ದಾರೆ. ಆಕೆಯನ್ನು ಭಾರತದಿಂದ ಗಡೀಪಾರು ಆಗುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ತಿಳಿಸಿದ್ದಾರೆ.
