ಪೋಟೊ, ಹಾಲ್‌ ಟಿಕೇಟ್‌ ಇಟ್ಟು ಜೀವಂತ ಇರೊವಾಗಲೇ ತಿಥಿ ಕಾರ್ಯ! ಕಿಡಿಗೇಡಿಗಳ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕುಟುಂಬಸ್ಥರು! ಆತಂಕದಲ್ಲೆ ಪರೀಕ್ಷೆಗೆ ಬಂದ ವಿದ್ಯಾರ್ಥಿಗೆ ಅಜ್ಜ, ಗ್ರಾಮಸ್ಥರ ಸಾಥ್ ಕಿಡಿಗೇಡಿಗಳಿಂದ 2ನೇ ಬಾರಿ ವಿದ್ಯಾರ್ಥಿಯ ತಿಥಿ ಮಾಡಿ ಅಟ್ಟಹಾಸ!

 ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ 

ವಿಜಯಪುರ (ಮಾರ್ಚ್28) : ವಿಜಯಪುರ ಜಿಲ್ಲೆಯ ಈ ಎಸ್‌ಎಸ್‌ಎಲ್‌ಸಿ (SSLC ) ವಿದ್ಯಾರ್ಥಿಗೆ (Student) ಅದೇನು ಕಂಟಕವೋ ಗೊತ್ತಿಲ್ಲ. ಇಂದು ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗೆ ಶಾಕ್‌ ಎದುರಾಗಿದೆ. ಕಿಡಿಗೇಡಿಗಳು ಮಾಡ್ತಿರೋ ಕೆಲಸಕ್ಕೆ ವಿದ್ಯಾರ್ಥಿ ಹಾಗೂ ಕುಟುಂಬಸ್ಥರಿಗೆ ವಿಚಿತ್ರ ಕಾಟ ಶುರುವಾಗಿದೆ. ಈ ವಿಚಿತ್ರ ಕಾಟಕ್ಕೆ ಪೋಷಕರು, ಗ್ರಾಮಸ್ಥರೇ ಬೆಚ್ಚಿಬಿದ್ದಿದ್ದಾರೆ. ಕಾರಣ ಇಷ್ಟೇ ಪರೀಕ್ಷೆಗೆ ಹಾಜರಾಗಲು ಹೊರಟಿದ್ದ ವಿದ್ಯಾರ್ಥಿಯ ಪೋಟೊ, ಹಾಲ್‌ ಟಿಕೇಟ್‌ ಇಟ್ಟು ದುಷ್ಕರ್ಮಿಗಳು ತಿಥಿ ಕಾರ್ಯ ಮಾಡಿದ್ದಾರೆ..

ವಿಜಯಪುರ ತಾಲೂಕಿನ ಅರಕೇರಿ ತಾಂಡಾ 1ರ ನಿವಾಸಿ ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿ ಸಚಿನ್‌ ನಾಯಕ್‌ ಪೋಟೋ ಇಟ್ಟು ತಿಥಿ ಮಾಡಲಾಗಿದೆ. ಅರಕೇರಿ ತಾಂಡಾ (Arakeri Tanda) ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯ ಬಳಿ ವಿದ್ಯಾರ್ಥಿಯ ದೊಡ್ಡದಾದ ಭಾವಚಿತ್ರ ಇಟ್ಟಿರುವ ಕಿಡಿಗೇಡಿಗಳು ತಿಥಿಕಾರ್ಯ ಮಾಡಿದ್ದಾರೆ. ಜೊತೆಗೆ ವಿದ್ಯಾರ್ಥಿಯ ಪೋಟೊ ಎದುರು ಆತನ ಹಾಲ್‌ ಟಿಕೇಟ್‌ (Hall Ticket) ಜೆರಾಕ್ಸ್‌ ಪ್ರತಿಯನ್ನು ಇಟ್ಟು ತಿಥಿಗೆ ಮಾಡುವ ಕಾರ್ಯಗಳನ್ನ ನೆರವೇರಿಸಿದ್ದಾರೆ. ಸಚಿನ್‌ ನಾಯಕನ ದೊಡ್ಡದಾದ ಪೋಟೋಗೆ ಹೂವಿನ ಹಾರ ಹಾಕಿದ್ದಾರೆ. ಪೋಟೊ ಎದುರು ಮಡಿಕೆಯಲ್ಲಿ ಬೂದಿ ಹಾಕಿ ಇಟ್ಟಿದ್ದಾರೆ. ಪೋಟೊಗೆ ಕುಂಕುಮ (Kunkum) ಇಟ್ಟು ಪೂಜೆ ಮಾಡಿ ತೆಂಗಿನಕಾಯಿ (Coconut) ಕೂಡ ಒಡೆದಿದ್ದಾರೆ. ಊದುಬತ್ತಿ ಬೆಳಗಿ ಥೇಟ್‌ ತಿಥಿಕಾರ್ಯ ಆಚರಿಸುವಂತೆ ಕಾರ್ಯ ನಡೆಸಿದ್ದಾರೆ.

"

ಭಯದಲ್ಲಿ ವಿದ್ಯಾರ್ಥಿ, ಪೋಷಕರಲ್ಲು ಆತಂಕ, ಬೆಚ್ಚಿಬಿದ್ದ ಗ್ರಾಮಸ್ಥರು: ಎಸ್‌ ಎಸ್ ಎಲ್‌ ಸಿ ಪರೀಕ್ಷೇಗೆಂದು ಸಚಿನ್‌ ಹೊರಟಾಗಲೆ ಹೆದ್ದಾರಿ ಪಕ್ಕದಲ್ಲಿ ತನ್ನದೆ ಪೋಟೊಗೆ ತಿಥಿ ಕಾರ್ಯ ನಡೆದಿರೋದನ್ನ ಕಂಡು ಬೆಚ್ಚಿಬಿದ್ದಿದ್ದಾನೆ. ಇದೆಲ್ಲ ದೃಶ್ಯಾವಳಿಗಳನ್ನ ಕಂಡ ಕುಟುಂಬಸ್ಥರು ಒಂದು ಕ್ಷಣ ಭಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಕೇರಿ ತಾಂಡಾ ನಿವಾಸಿಗಳು ಸಹ ಜೀವಂತ ಬಾಲಕನಿಗೆ ನಡೆದ ತಿಥಿ ಕಾರ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ತಾಂಡಾದಲ್ಲಿ ಇದೇನು ಶುರುವಾಯ್ತು ಅಂತಾ ಇಡೀ ತಾಂಡ ನಿವಾಸಿಗಳೇ ಆತಂಕದಲ್ಲಿದ್ದಾರೆ.

SSLC ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಕುಸಿದುಬಿದ್ದು ವಿದ್ಯಾರ್ಥಿನಿ ಸಾವು

ಭಯದಲ್ಲೆ ಪರೀಕ್ಷೆ ಎದುರಿಸಿದ ವಿದ್ಯಾರ್ಥಿ: ತನ್ನದೇ ಪೋಟೊಗೆ ನಡೆದ ತಿಥಿಕಾರ್ಯವನ್ನ ಕಂಡ ವಿದ್ಯಾರ್ಥಿ ಕ್ಷಣಕಾಲ ಬೆಚ್ಚಿಬಿದ್ದಿದ್ದಾನೆ. ಜೊತೆಗೆ ಇಂದೆ ಪರೀಕ್ಷೆ ಎದುರಿಸಲು ಹೊರಟಿದ್ದ ವಿದ್ಯಾರ್ಥಿಗೆ ತನ್ನ ಹಾಲ್‌ ಟಿಕೇಟ್‌ ಗೂ ತಿಥಿ ನಡೆದಿರೋದು ಭಯ ತರಿಸಿದೆ. ಇಷ್ಟಾಗಿಯು ಎದೆಗುಂದದ ವಿದ್ಯಾರ್ಥಿ ಸಚಿನ್‌ ಪರೀಕ್ಷೆಗೆ ಹಾಜರಾಗಿದ್ದಾನೆ. ವಿಜಯಪುರ ನಗರದ ಶಾಂತಿನಿಕೇತನ ಸ್ಕೂಲಿನ ಪರೀಕ್ಷಾ ಕೇಂದ್ರದಲ್ಲಿ ಭಯದಲ್ಲೆ ಪರೀಕ್ಷೆಗೆ ಹಾಜರಾಗಿದ್ದಾನೆ..

ಮೊಮ್ಮಗನಿಗೆ ತಾತನ ಸಾತ್‌, ವಿದ್ಯಾರ್ಥಿ ಜೊತೆಗೆ ನಿಂತ ಗ್ರಾಮಸ್ಥರು: ಇನ್ನು ತಿಥಿ ಭಯದಲ್ಲೆ ಪರೀಕ್ಷೆಗೆ ಹಾಜರಾದ ಸಚಿನ್‌ ನಾಯಕ್‌ ಗೆ ತಾತ ಗಂಗಾಧರ ಬೆನ್ನಿಗೆ ನಿಂತಿದ್ದಾರೆ. ಬಾಲಕನನ್ನ ತಮ್ಮ ದ್ವಿಚಕ್ರವಾಹನದಲ್ಲಿ ಪರೀಕ್ಷಾಕೇಂದ್ರಕ್ಕೆ (Exam Center) ತಂದು ಬಿಟ್ಟಿದ್ದಾರೆ. ಜೊತೆಗೆ ಸಚಿನ್‌ ಅಣ್ಣ ಅರವಿಂದ ಕೂಡ ಸಹೋದರನ ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ಬರುವ ಮೂಲಕ ಧೈರ್ಯ ನೀಡಿದ್ದಾನೆ.. ಇನ್ನು ಇಡೀ ಘಟನೆಯ ಬಳಿಕ ಅರಕೇರಿ ತಾಂಡಾ 1ರ ಗ್ರಾಮಸ್ಥರು ಕೂಡ ಸಚಿನ್‌ ಬೆನ್ನಿಗೆ ನಿಂತಿದ್ದಾರೆ. ತಿಥಿ ಕಾರ್ಯ ನಡೆಸಿ ವಿಕೃತಿ (Distortion) ಮೆರೆದವ್ರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ, ನಾವು ನಿಮ್ಮ ಜೊತೆಗಿದ್ದೇವೆ ಯಾವುದೇ ಕಾರಣಕ್ಕು ಭಯ ಬೀಳಬೇಡಿ ಎಂದು ಧೈರ್ಯ ತುಂಬಿದ್ದಾರೆ..

ಈ ಘಟನೆ ಹಿಂದಿನ ರಹಸ್ಯ ಕೇಳಿದ್ರೆ ನೀವು ಬೆಚ್ಚಿಬೀಳ್ತೀರಿ: ಜೀವಂತ ಇರುವಾಗಲೇ SSLC ಬಾಲಕನಿಗೆ ತಿಥಿ ಪ್ರಕರಣ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ, ಜೊತೆಗೆ ಕುತೂಹಲಕ್ಕು ಕಾರಣವಾಗಿದೆ. ಅಸಲಿಗೆ ಈ ಹುಡುಗನ ಬೆನ್ನಿಗೆ ದುಷ್ಕರ್ಮಿಗಳು ಬಿದ್ದಿದ್ಯಾಕೆ ಅನ್ನೋದು ಜನರಲ್ಲಿ ಪ್ರಶ್ನೆಗಳು ಶುರುವಾಗಿವೆ. ಅಸಲಿಗೆ ಇಲ್ಲಿ ನಡೆದಿರೋದು ಹುಡುಗನ ತಿಥಿಕಾರ್ಯವೋ ಅಥವಾ ಇದು ವಾಮಾಚಾರವೋ (Witchcraft/Black Magic) ಎನ್ನುವ ಬಗ್ಗೆ ಅನುಮಾನಗಳು ಶುರುವಾಗಿವೆ. ಬಾಲಕನ ಪೋಟೊ, ಜೊತೆಗೆ ಹಾಲ್‌ ಟಿಕೇಟ್‌ ಇಟ್ಟು ಇದೊಂದು ಕೃತ್ಯ ನಡಿಸಿರೋದು ಪಕ್ಕಾ ವಾಮಾಚಾರ ಎನ್ನಲಾಗ್ತಿದೆ. ಬಾಲಕ ಪರೀಕ್ಷೆಯಲ್ಲಿ ಸಾಧನೆ ಮಾಡಬಾರದು ಅಂತಾ ಗೊತ್ತಿರೋ ವೈರಿಗಳೆ ಹೀಗೆ ವಾಮಾಚಾರ ಮಾಡಿದ್ದಾರೆ, ಈ ಮೂಲಕ ಬಾಲಕನ ಮನೋಬಲ ಕುಗ್ಗಿಸಲು ಇದೊಂದು ಹೀನ ಕೃತ್ಯಕ್ಕೆ ಕೈಹಾಕಿದ್ದಾರೆ ಎನ್ನಲಾಗ್ತಿದೆ.

KCET 2022 Exam: ಜೂನ್ 16ರಿಂದ ಸಿಇಟಿ ಪರೀಕ್ಷೆ ಆರಂಭ

7 ತಿಂಗಳ ಹಿಂದೆ ತಂದೆ ಸಾವು, ಬಾಲಕನಿಗೆ ನಾನಾ ತೊಂದರೆ: ಇನ್ನು ದುರಾದೃಷ್ಟರ ವಿಚಾರ ಅಂದ್ರೆ ಕಳೆದ 7 ತಿಂಗಳ ಹಿಂದಷ್ಟೇ ಬಾಲಕನ ತಂದೆ ಸಾವನ್ನಪ್ಪಿದ್ದಾರೆ. ಅವರ ಸಾವಿನ ಬೆನ್ನಲ್ಲೆ ಬಾಲಕನಿಗೆ ಇನ್ನಿಲ್ಲದ ತೊಂದರೆಗಳು ಶುರುವಾಗಿವೆಯಂತೆ. ಇನ್ನು ಬಾಲಕ ಕುಸಿದು ಬೀಳುವುದು, ಆಗಾಗ್ಗ ಆತನಿಗೆ ತೊಂದರೆ ಉಂಟಾಗೋದು ನಡೆದಿದೆಯಂತೆ. ಸೈಕ್ಲಿಂಗ್‌ ನಲ್ಲಿ (Cycling) ಆಸಕ್ತಿ ಹೊಂದಿರುವ ಬಾಲಕ ಕಳೆದ 2 ತಿಂಗಳ ಹಿಂದಷ್ಟೆ 1ವರೆ ಲಕ್ಷದ ರೆಸಿಂಗ್‌ ಸೈಕಲ್‌ ಜೊತೆಗೆ ಪ್ರಾಕ್ಟಿಸ್‌ ವೇಳೆ ಬಿದ್ದು ಬಂದಿದ್ದಾನಂತೆ. ಇದೆವಲ್ಲವನ್ನ ನೋಡಿದ್ರೆ ಯಾರೋ ಬಾಲಕನನ್ನ ಟಾರ್ಗೆಟ್‌ ಮಾಡಿ ವಾಮಾಚಾರ ಮಾಡ್ತಿದ್ದಾರೆ ಅಂತಾ ತಾಂಡಾ ನಿವಾಸಿ ಒಬ್ಬರು ಪೋನ್‌ ಮೂಲಕ ಏಷಾನೆಟ್‌ ಸುವರ್ಣ ನ್ಯೂಸ್‌ ಗೆ ಮಾಹಿತಿ ನೀಡಿದ್ದಾರೆ.

ಹಿಂದೆ ಅಮವಾಸ್ಯೆ ದಿನವು ನಡೆದಿತ್ತು ವಾಮಾಚಾರ!: ಇನ್ನು ಬಾಲಕ ಸಚಿನ್‌ ನಾಯಕ್‌ ವಿರುದ್ಧ ವಾಮಾಚಾರ ನಡೆಯೋದು ಇದೆ ಮೊದಲೇನಲ್ಲ. ಕಳೆದ ತಿಂಗಳ ಅಮವಾಸ್ಯೆಯಂದು ಸಚಿನ್‌ ವಿರುದ್ಧ ವಾಮಾಚಾರ ಮಾಡಿದ್ದರು. ಈಗ ಎಸ್ ಎಸ್‌ ಎಸ್ ಎಲ್‌ ಸಿ ಪರೀಕ್ಷೆ ಶುರುವಾಗ್ತಿದ್ದಂತೆ ಬಾಲಕನ ವಿರುದ್ಧ ತಿಥಿ ಕಾರ್ಯ ಮಾಡಿದ್ದಾರೆ.. ಹೀಗೆ ಎರೆಡು ಬಾರಿ ಹೀಗೆ ಮಾವಾಚಾರ ಮಾಡಲಾಗಿದೆಯಂತೆ. ಹಿಂದೆ ಅಮವಾಸ್ಯೆಯ ದಿನ ವಾಮಾಚಾರ ನಡೆದಾಗಲು ಕುಟುಂಬಸ್ಥರು ತಾಂಡಾ ನಾಯಕರ ಗಮನಕ್ಕೆ ತಂದಿದ್ದರು, ಆದರು ಇದನ್ನ ನಾಯಕರು ಉದಾಸೀನ ಮಾಡಿದ್ದಂತೆ. ಬಳಿಕ ಮತ್ತೆ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯ ದಿನವೇ ಇಂಥ ಘಟನೆ ನಡೆದಿದ್ದು ಮತ್ತಷ್ಟು ಆತಂಕ ಸಚಿನ್‌ ಕುಟುಂಬಸ್ಥರಲ್ಲಿ ಶುರುವಾಗಿದೆ..

ಗ್ರಾಮೀಣ ಪೊಲೀಸ್‌ ಠಾಣೆಗೆ ದೂರು, ಸಿಕ್ಕಿ ಬೀಳ್ತಾರಾ ಕಿರಾತಕರು!: ಇನ್ನು ಸಧ್ಯ ನಡೆದಿರುವ ಎಲ್ಲ ಬೆಳವಣಿಗೆ, ವಾಮಾಚಾರ, ತಿಥಿ ಕಾರ್ಯಗಳ ಬಗ್ಗೆ ಇಡಿ ಕುಟುಂಬ ಬೆಚ್ಚಿಬಿದ್ದಿದೆ. ಜೊತೆಗೆ ಗ್ರಾಮಸ್ಥರಲ್ಲು ಆತಂಕ ಮನೆ ಮಾಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕುಟುಂಬ ಪೊಲೀಸ್‌ ಮೊರೆ ಹೋಗಿದೆ. ಅಲ್ಲದೆ ಈ ದುಷ್ಕೃತ್ಯಗಳ ಹಿಂದೆ ಇರುವ ದುರುಳರನ್ನ ಪತ್ತೆ ಮಾಡಿ ನ್ಯಾಯ ಕೊಡಿಸಿ ಎಂದು ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಗೆ (Vijayapur Rural Police Station) ಸಚಿನ್‌ ತಾತ ದೂರು ಸಹ ನೀಡಿದ್ದಾರೆ. ದೂರಿನಲ್ಲಿ ಯಾರ ಹೆಸ್ರನ್ನು ತಿಳಿಸಿದೆ ತನಿಖೆಗೆ ಮನವಿ ಮಾಡಿದ್ದಾರೆ.