Asianet Suvarna News Asianet Suvarna News

ನ.2ರಿಂದ 1-5 ಫುಲ್‌ ಕ್ಲಾಸ್‌: ಹೊಸ ಮಾರ್ಗಸೂಚಿ ಪ್ರಕಟ

*  ಮೊದಲ ಆರು ದಿನ ಅರ್ಧ ದಿನ ಮಾತ್ರ ತರಗತಿ
*  ಹಾಜರಾಗುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯ
*  ನ.2ರಿಂದ ಬಿಸಿಯೂಟ ಆರಂಭ 
 

1 to 5th Full Class From Nov 2nd Onwards in Karnataka grg
Author
Bengaluru, First Published Oct 22, 2021, 7:30 AM IST

ಬೆಂಗಳೂರು(ಅ.22):  ಅಕ್ಟೋಬರ್‌ 25ರಿಂದ ಆರಂಭವಾಗಲಿರುವ 1ರಿಂದ 5ನೇ ತರಗತಿ ಮಕ್ಕಳ ಭೌತಿಕ ತರಗತಿಗಳನ್ನು(Offline Class) ಮೊದಲ ಆರು ದಿನಗಳ ಕಾಲ ಅರ್ಧ ದಿನ ಮಾತ್ರ ನಡೆಸಬೇಕು. ನ.2ರಿಂದ ಬಿಸಿಯೂಟದ ಜತೆಗೆ ದಿನಪೂರ್ತಿ ತರಗತಿಗಳನ್ನು ನಡೆಸಬೇಕು. ಮಕ್ಕಳ(Children) ಹಾಜರಾತಿ ಕಡ್ಡಾಯವಲ್ಲ, ಹಾಜರಾಗುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯ ಎಂಬುದು ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ವೇಳಾಪಟ್ಟಿ ಸಹಿತ ವಿವರವಾದ ಮಾರ್ಗಸೂಚಿ ಪ್ರಕಟಿಸಿದೆ.

ಮಕ್ಕಳು, ಶಿಕ್ಷಕರು(Teachers), ಇತರೆ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌(Mask) ಧರಿಸುವುದು, ಕನಿಷ್ಠ ಒಂದು ಮೀಟರ್‌ ಸಾಮಾಜಿಕ ಅಂತರ(Social Distance)ಕಾಯ್ದುಕೊಳ್ಳುವುದು, ನಿತ್ಯ ಮಕ್ಕಳ ಆರೋಗ್ಯ ತಪಾಸಣೆ(Health Checkup) ನಡೆಸುವುದು, ಯಾವುದೇ ಮಕ್ಕಳಿಗೆ ಕೋವಿಡ್‌(Covid190 ಲಕ್ಷಣಗಳು ಕಂಡುಬಂದರೆ ಪೋಷಕರನ್ನು ಕರೆಸಿ ಮನೆಗೆ ಕಳುಹಿಸಬೇಕು ಎಂಬುದು ಸೇರಿದಂತೆ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು(Guidelines) ಕಡ್ಡಾಯವಾಗಿ ಅನುಸರಿಸಿ 1ರಿಂದ 5ನೇ ತರಗತಿಗಳನ್ನು ಅ.25ರಿಂದ ಆರಂಭಿಸಬೇಕು ಎಂದು ತಿಳಿಸಲಾಗಿದೆ.

ಕೊರೋನದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ “ಚಿಣ್ಣರ ಧಾಮ”

ಅ.30ರವರೆಗೆ ಈ ಐದೂ ತರಗತಿ ಮಕ್ಕಳಿಗೆ ತಂಡಗಳನ್ನು ರಚಿಸಿಕೊಂಡು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ನಿತ್ಯ ಅರ್ಧ ದಿನ ತಲಾ 40 ನಿಮಿಷ ಮೀರದಂತೆ ನಾಲ್ಕು ತರಗತಿಗಳನ್ನು ನಡೆಸಬೇಕು. ನವೆಂಬರ್‌ 2ರಿಂದ ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ (ಶನಿವಾರ ಬೆಳಗ್ಗೆ 8ರಿಂದ 11.40ರವರೆಗೆ) ಪೂರ್ಣದಿನ ತರಗತಿಗಳನ್ನು ನಡೆಸಬೇಕು. ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಆದರೆ, ಹಾಜರಾಗುವ ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ. ಈ ತರಗತಿಗಳಿಗೆ ಬೋಧನೆ ಮಾಡುವ ಶಿಕ್ಷಕರು ಕಡ್ಡಾಯವಾಗಿ 2 ಡೋಸ್‌ ಲಸಿಕೆ(Vaccine) ಪಡೆದಿರಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಮಾಸ್ಕ್‌ ಜತೆಗೆ ಫೇಸ್‌ಶೀಲ್ಡ್‌(Faceshield) ಧರಿಸಿರಬೇಕು ಎಂದು ಇಲಾಖೆ ಸೂಚಿಸಿದೆ.

ಅ.30ರವರೆಗೆ ಅರ್ಧದಿನ ಮಾತ್ರ ತರಗತಿಗಳು ನಡೆಯುವುದರಿಂದ ಈ ಅವಧಿಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ಪೂರ್ಣದಿನದ ತರಗತಿ ಆರಂಭವಾಗುವ ನ.2ರಿಂದ ಮಧ್ಯಾಹ್ನದ ಬಿಸಿಯೂಟ ಆರಂಭಿಸುವುದು. ಅಗತ್ಯತೆಗೆ ಅನುಸಾರ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಅನುದಾನ ರಹಿತ ಖಾಸಗಿ ಶಾಲಾ ಮಕ್ಕಳು ಮನೆಯಿಂದಲೇ ಅಗತ್ಯ ಊಟ ಮತ್ತು ಕುಡಿಯುವ ನೀರು ತರಬೇಕು ಎಂದು ಇಲಾಖೆ ತಿಳಿಸಿದೆ.

ಕಳೆದ ಒಂದೂವರೆ ವರ್ಷದಿಂದ 1ರಿಂದ 5ನೇ ತರಗತಿ ಮಕ್ಕಳು ಕಲಿಕೆಯಿಂದ ದೂರು ಉಳಿದಿದ್ದರಿಂದ ಅವರು ಶಾಲೆಗೆ(School) ಬಂದ ಆರಂಭದ ಕೆಲ ದಿನಗಳಲ್ಲಿ ಸೇತುಬಂಧ ಶಿಕ್ಷಣದಂತಹ ಬೋಧನಾ ಪದ್ಧತಿ ಮೂಲಕ ಕಲಿಕಾ ವಾತಾವರಣಕ್ಕೆ ವಾಪಸ್‌ ಕರೆತರಬೇಕು. ನಂತರ ಪ್ರಸಕ್ತ ಸಾಲಿನ ಪಠ್ಯಕಲಿಕೆಗೆ ಕ್ರಮಕೈಗೊಳ್ಳುವಂತೆ ಇಲಾಖೆಯ ಆಯುಕ್ತ ವಿಶಾಲ್‌ ಅವರು ಸುತ್ತೋಲೆ ಹೊರಡಿಸಿದ್ದಾರೆ.
 

Follow Us:
Download App:
  • android
  • ios