ಯುಜಿಸಿ ಬದಲಿಗೆ ಉನ್ನತ ಶಿಕ್ಷಣ ಆಯೋಗ: ಸಲಹೆ ಕೇಳಿದ ಕೇಂದ್ರ
ಯುಜಿಸಿ ಬದಲಿಗೆ ಉನ್ನತ ಶಿಕ್ಷಣ ಆಯೋಗ
ಶಿಕ್ಷಣ ತಜ್ಞರ ಸಲಹೆ ಕೇಳಿದ ಕೇಂದ್ರ ಸರ್ಕಾರ
ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ವಿಧೇಯಕ
ಮುಂಗಾರು ಅಧಿವೇಶನದಲ್ಲಿ ವಿಧೇಯಕ ಮಂಡನೆ
ನವದೆಹಲಿ(ಜೂ.27): ಯೋಜನಾ ಆಯೋಗ ರದ್ದುಗೊಳಿಸಿ ನೀತಿ ಆಯೋಗ ರಚಿಸಿರುವ ಕೇಂದ್ರ ಸರ್ಕಾರ, ಈಗ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ)ರದ್ದುಗೊಳಿಸಿ ಉನ್ನತ ಶಿಕ್ಷಣ ಆಯೋಗ ರಚಿಸಲು ಮುಂದಾಗಿದೆ.ಈ ಕುರಿತು ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ನೀಡುವಂತೆ ಕೇಂದ್ರ ಸರ್ಕಾರ ಕೋರಿದೆ.
ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆಗಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಯುಜಿಸಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು, ಉನ್ನತ ಶಿಕ್ಷಣ ಆಯೋಗ ಕಾಯ್ದೆ 2018 ಎಂಬ ಹೊಸ ವಿಧೇಯಕದ ಕರಡು ಪ್ರತಿಯನ್ನು ಸಿದ್ಧಪಡಿಸಿದೆ.
ಉನ್ನತ ಶಿಕ್ಷಣ ಆಯೋಗ ರಚನೆ ಬಗ್ಗೆ ಜುಲೈ 7ರಂದು ಸಂಜೆ 5 ಗಂಟೆಯೊಳಗೆ ನಿಮ್ಮ ಸಲಹೆ ಮತ್ತು ಸೂಚನೆಗಳನ್ನು ತಿಳಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಮನವಿ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಉನ್ನತ ಶಿಕ್ಷಣ ಆಯೋಗಕ್ಕೆ, ಶಿಕ್ಷಣದ ಗುಣಮಟ್ಟದ ಮಾನಂಡಗಳನ್ನು ಜಾರಿಗೊಳಿಸುವ ಮತ್ತು ಗುಣಮಟ್ಟ ಕಾಯ್ದುಕೊಳ್ಳದ ಹಾಗೂ ನಕಲಿ ಸಂಸ್ಥೆಗಳನ್ನು ಬಂದ್ ಮಾಡುವ ಅಧಿಕಾರ ನೀಡಲಾಗಿದೆ.
ಸಂಸತ್ ಮುಂಗಾರು ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗುವ ಸಾಧ್ಯತೆ ಇದೆ. ಒಂದು ಈ ಸಂಸ್ಧೆಗೂ ಸರ್ಕಾರ ತಿಲಾಂಜಲಿ ನೀಡಿದರೆ ಮೋದಿ ಸರ್ಕಾರ ರದ್ದು ಮಾಡುತ್ತಿರುವ ನೆಹರೂ ಅವಧಿಯಲ್ಲಿ ಸ್ಥಾಪಿಸಿದ ಎರಡನೇ ಸಂಸ್ಥೆ ಇದಾಗಲಿದೆ.