'NEET ವಂಚಿತ ಮಕ್ಕಳೊಂದಿಗೆ ನಾವು ನಿಲ್ಲಬೇಕು'
ನೀಟ್ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳ ಜೊತೆ ನಾವು ನಿಲ್ಲಬೇಕಿದೆ| ವಿಶೇಷ ಪರೀಕ್ಷೆ ನಡೆಸಲು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯಿಸೋಣ: ಸುರೇಶ್ ಕುಮಾರ್
ಬೆಂಗಳೂರು[ಮೇ.06]: ರೈಲು ವಿಳಂಬವಾದ ಹಿನ್ನೆಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳ ಜೊತೆ ನಾವು ನಿಲ್ಲಬೇಕಿದೆ. ಈ ಮಕ್ಕಳಿಗೆ ವಿಶೇಷ ಪರೀಕ್ಷೆ ನಡೆಸಲು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯಿಸೋಣ ಎಂದಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ ಮನವಿಯೊಂದನ್ನು ಮಾಡಿರುವ ಸುರೇಶ್ ಕುಮಾರ್
ಹಂಪಿ ಎಕ್ಸ ಪ್ರೆಸ್ ರೈಲಿನ ಆಗಮನದ ವಿಳಂಬದಿಂದ ಮತ್ತು ಧಿಡೀರ್ ಪರೀಕ್ಷಾ ಕೇಂದ್ರ ಬದಲಾವಣೆಯಿಂದ ತಮ್ಮದಲ್ಲದ ತಪ್ಪಿಗೆ "ನೀಟ್" ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಆ ಸುಮಾರು 500 ವಿದ್ಯಾರ್ಥಿಗಳ ಜೊತೆ ನಾವೆಲ್ಲಾ ನಿಲ್ಲಬೇಕು. ಇವರೆಲ್ಲಾ ನಮ್ಮಮಕ್ಕಳು. ಈ ಅಮಾಯಕ ವಿದ್ಯಾರ್ಥಿಗಳಿಗಾಗಿ ವಿಶೇಷ ಪರೀಕ್ಷೆ ನಡೆಸಿ ಇವರ ಕನಸು ಕಮರಿಹೋಗದಂತೆ ನೋಡಿಕೊಳ್ಳಬೇಕು. ಪಕ್ಷಾತೀತವಾಗಿ ನಾವೆಲ್ಲರೂ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಒತ್ತಾಯ ತರೋಣ. ಈ ಕೆಲಸ ತುರ್ತಾಗಿ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಇಷ್ಟೇ ಅಲ್ಲದೇ 'ವಿಶೇಷ ಪರೀಕ್ಷೆ ನಡೆಸುವ ಬಗ್ಗೆ ಸದಾನಂದಗೌಡರ ಜೊತೆ ಮಾತನಾಡಿದ್ದೇನೆ. ಸದಾನಂದಗೌಡರು ಇಂದು ಸಂಬಂಧಿಸಿದ ಸಚಿವರ ಜೊತೆ ಮಾತನಾಡಿ ಪ್ರಯತ್ನ ಮಾಡೋದಾಗಿ ತಿಳಿಸಿದ್ದಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.