ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ...! ಎಂದ ಡಿವಿಎಸ್
ಸಿಎಂ ಸಿದ್ದರಾಮಯ್ಯ ಸರಕಾರ ಎನ್ನುವ ಬದಲು, 'ಯಡಿಯೂರಪ್ಪ ಸರಕಾರದಲ್ಲಿ ಆತ್ಮಹತ್ಯೆ ಭಾಗ್ಯ' ಎನ್ನುವ ಮೂಲಕ ಡಿ.ವಿ.ಸದಾನಂದಗೌಡ ಯಡವಟ್ಟು ಮಾಡಿಕೊಂಡಿದ್ದಾರೆ.
ಮೈಸೂರು: 'ಯಡಿಯೂರಪ್ಪ ಸರ್ಕಾರದಿಂದ ಆತ್ಮಹತ್ಯೆ ಭಾಗ್ಯ...!' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಹೇಳಿದ್ದು, ಅದೇ ವೇದಿಕೆಯಲ್ಲಿದ್ದ ಬಿ.ಎಸ್. ಯಡಿಯೂರಪ್ಪ ತಬ್ಬಿಬ್ಬಾದ ಘಟನೆ ಇಲ್ಲಿನ ಸುತ್ತೂರಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ನಡೆದಿದೆ.
'ಯಡಿಯೂರಪ್ಪ ಅವಧಿಯಲ್ಲಿ 3.5 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ,' ಎಂದು ಸದಾನಂದಗೌಡರು ಬಾಯಿ ತಪ್ಪಿ ಹೇಳಿದ್ದು, ನಂತರ ತಪ್ಪನ್ನು ತಿದ್ದಿಕೊಂಡಿದ್ದಾರೆ.
ಸಿಎಂ ಪುತ್ರನಿಗೆ ಸಲಹೆ ನೀಡಿದ ಡಿವಿಎಸ್
ಮುಖ್ಯಮಂತ್ರಿ ಪುತ್ರ ಡಾ.ಯತೀಂದ್ರ ಸಕ್ರಿಯ ರಾಜಕಾರಣಕ್ಕೆ ಧುಮುಕುತ್ತಿದ್ದು, ಈ ವರ್ಷ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದಕ್ಕೆ ಸದಾಗೌಡರು 'ನಿಮ್ಮಪ್ಪ ನಿಮ್ಮನ್ನೂ ಬಿಡುವುದಿಲ್ಲ. ನಿಮ್ಮಪ್ಪನೇ ಸೋಲಿನ ಭೀತಿಯಿಂದ ಓಡಿ ಹೋಗುತ್ತಿದ್ದಾರೆ. ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತಾಗಬಾರದು. ನೋಡಿ ಸ್ವಲ್ಪ ಯೋಚನೆ ಮಾಡಿ,' ಎಂದು ಹೇಳಿದ್ದಾರೆ.
'ಡಾ.ಯತೀಂದ್ರ ಅವರೇ ವರುಣ ಕ್ಷೇತ್ರದಿಂದ ಪ್ರಥಮ ಬಾರಿಗೆ ಸ್ಪರ್ಧಿಸಲು ಮುಂದಾಗಿದ್ದೀರಿ. ಮೊದಲ ಚುನಾವಣೆಯಲ್ಲೇ ಸೋತು ರಾಜಕೀಯದಿಂದ ನಿವೃತ್ತಿ ಆಗುವುದು ಬೇಡ,' ಎಂದಿದ್ದಾರೆ.